ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ₹1 ಲಕ್ಷ ಕಳವು

ಬಂಟ್ವಾಳ: ಕೊಟ್ಟಿಗೆಹಾರಕ್ಕೆ ಹೋಗಲು ಬಸ್ಸಿಗೆ ಕಾಯುತ್ತಿದ್ದ ವ್ಯಕ್ತಿಯೊಬ್ಬರ ಪ್ಯಾಂಟಿನ ಕಿಸೆಯಲ್ಲಿದ್ದ 1 ಲಕ್ಷ ರೂ. ನಗದು ಕಳವಾದ ಘಟನೆ ಆ. 15ರಂದು ಬಿ.ಸಿ.ರೋಡು ಬಸ್ ನಿಲ್ದಾಣದ ಬಳಿ ನಡೆದಿದೆ.

ಕುಂದಾಪುರ ನಿವಾಸಿ ರಂಗನಾಥ ಅವರು ಬಿ.ಸಿ.ರೋಡಿನಲ್ಲಿ ಬಸ್ಸಿಗೆ ಕಾಯುತ್ತಿದ್ದು, ಬಸ್ಸಿಗೆ ಹತ್ತಿದ ಬಳಿಕ ಕಿಸೆ ನೋಡಿದಾಗ ನಗದು ಕಳವಾಗಿರುವುದು ಅರಿವಿಗೆ ಬಂದಿದೆ.
ಅವರ ಕಿಸೆಯಲ್ಲಿ 50 ಸಾವಿರ ರೂ.ಗಳ 3 ಕಂತೆ ಹಾಗೂ 10 ಸಾವಿರ ರೂ.ಗಳ 1 ಕಂತೆ ಇದ್ದು, ಅದರಲ್ಲಿ 50 ಸಾವಿರ ರೂ.ಗಳ 2 ಕಂತೆ ಕಳವಾಗಿದೆ.
ಅವರು ಕಾರನ್ನು ಮಾರಿ ಬೇರೆ ಹಳೆ ಕಾರನ್ನು ಖರೀದಿಸುವ ಉದ್ದೇಶದಿಂದ 1.60 ಲಕ್ಷ ರೂ. ಮೊತ್ತದೊಂದಿಗೆ ಆ. 14ರಂದು ಬಿ.ಸಿ.ರೋಡಿನ ಕೈಕಂಬ ಶಾಂತಿಅಂಗಡಿಗೆ ಬಂದಿದ್ದರು. ಆದರೆ ದಾಖಲಾತಿ ಸರಿ ಇಲ್ಲ ಎನ್ನುವ ಕಾರಣಕ್ಕೆ ಕಾರು ಖರೀದಿಸಿರಲಿಲ್ಲ. ಬಳಿಕ ಕೈಕಂಬದ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡು ಮರುದಿನ ಕೊಟ್ಟಿಗೆಹಾರಕ್ಕೆ ಹೊರಟಾಗ ಘಟನೆ ನಡೆದಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.