ರಸ್ತೆ ಮಧ್ಯೆಯೇ ಅಂತ್ಯಕ್ರಿಯೆ-ಸ್ಥಳೀಯರ ಆಕ್ರೋಶ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೆಬ್ಬಾಡಿಹುಂಡಿ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆ ಜನಾಕ್ರೋಶಕ್ಕೆ ಕಾರಣವಾಗಿದೆ. ಹೌದು, ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ಜಾಗಕ್ಕೆ ಬೇಲಿ ಹಾಕಿದ್ದರಿಂದ ರಸ್ತೆಯ ಮಧ್ಯೆಯೇ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ಮಾಡಲಾಗಿದೆ.
ಸತೀಶ್ (32) ಎಂಬ ಯುವಕನ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ರಸ್ತೆಯೇ ಇಲ್ಲದಂತಾಗಿ, ಗ್ರಾಮಸ್ಥರು ರಸ್ತೆ ಮಧ್ಯೆಯೇ ಅಂತ್ಯಸಂಸ್ಕಾರ ಮಾಡುವಂತಹ ಪರಿಸ್ಥಿತಿ ಬಂದಿದೆ. ಈ ಘಟನೆ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹೆಬ್ಬಾಡಿಹುಂಡಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ಒಂದೇ ಒಂದು ರಸ್ತೆಯನ್ನು ಗ್ರಾಮಸ್ಥರು ಬಳಸಿಕೊಂಡು ಬರುತ್ತಿದ್ದರು. ಆದರೆ, ಈ ಜಾಗದ ಸುತ್ತಮುತ್ತಲಿನ ಜಮೀನಿನಲ್ಲಿ ಇಬ್ಬರು ರೈತರ ನಡುವೆ ಉಂಟಾದ ಕಿತ್ತಾಟದಿಂದಾಗಿ ಈ ರಸ್ತೆಗೆ ತಡೆ ಒಡ್ಡುವಂತಹ ಸನ್ನಿವೇಶ ಸೃಷ್ಟಿಯಾಯಿತು. ರೈತರಾದ ಅಂದಾನಿ ಗೌಡ ಎಂಬುವವರು ತಮಗೆ ಸೇರಿದ ಜಮೀನು ಎಂದು ಹೇಳಿಕೊಂಡು ಸ್ಮಶಾನಕ್ಕೆ ಹೋಗುವ ರಸ್ತೆಗೆ ಮುಳ್ಳುತಂತಿಯ ಬೇಲಿ ಹಾಕಿದ್ದಾರೆ. ಹಾಗಾಗಿ, ಗ್ರಾಮಸ್ಥರು ಸತೀಶ್ನ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲಾಗದೆ ರಸ್ತೆ ಮಧ್ಯೆಯೇ ಅಂತ್ಯಕ್ರಿಯೆ ನಡೆಸಬೇಕಾಯಿತು.