ಸಿಎಂ ಕಾರ್ಯದರ್ಶಿಯ ಹೆಸರಿನಲ್ಲಿ ಕರೆ ಮಾಡಿ ಸಿಕ್ಕಿಬಿದ್ದ ರಿವಾಲ್ವರ್ ಮಾಲೀಕ

ಮಂಗಳೂರು: ತನ್ನ ರಿವಾಲ್ವರ್ ಲೈಸೆನ್ಸ್ ಅಮಾನತು ರದ್ದಿಗೆ ಸಿಎಂ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿ ಪೊಲೀಸ್ ಆಯುಕ್ತರಿಗೆ ಕರೆ ಮಾಡಿಸಿದ ಆರೋಪದಲ್ಲಿ ಪೊಲೀಸರು ಇಂಟಕ್ ಕಾರ್ಯಕರ್ತನನ್ನು ವಶಕ್ಕೆ ಪಡೆದು, ಮುಚ್ಚಳಿಕೆ ಪಡೆದು ಕಳುಹಿಸಿದ್ದಾರೆ.
ಲೈಸೆನ್ಸ್ ಅಮಾನತು ರದ್ದುಪಡಿಸಲು ಸಾಕಷ್ಟು ಪ್ರಯತ್ನ ಪಟ್ಟಿ ದ್ದ ಆತ ಯಾವುದೂ ಸಾಧ್ಯವಾಗದೇ ಇದ್ದಾಗ ಕಳೆದ ವಾರ ಸಿಎಂ ಆಪ್ತ ಕಾರ್ಯದರ್ಶಿಯ ಹೆಸರಿನಲ್ಲಿ ಕಮಿಷನರ್ಗೆ ಕರೆ ಮಾಡಿಸಿ ರಿವಾಲ್ವರ್ ಲೈಸೆನ್ಸ್ ಅಮಾನತು ರದ್ದುಗೊಳಿಸಲು ಸೂಚಿಸಿದ್ದ.
ಈ ಬಗ್ಗೆ ಸಿಎಂ ಕಚೇರಿಯಲ್ಲಿ ವಿಚಾರಿಸಿದಾಗ ಅಂತಹ ಯಾವುದೇ ಕರೆ ಮಾಡಿಲ್ಲ ಎಂಬ ಅಂಶ ಪೊಲೀಸ್ ಆಯುಕ್ತರಿಗೆ ಸ್ಪಷ್ಟವಾಯಿತು.
ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಆದರೆ ರಾಜಕೀಯ ಒತ್ತಡದ ಕಾರಣ ಆರೋಪಿಯಿಂದ ಮುಚ್ಚಳಿಕೆ ಬರೆಸಿ ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದೊಮ್ಮೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆತನನ್ನು ಬಂಧಿಸಲಾಗಿತ್ತು. ಪೊಲೀಸ್ ಆಯುಕ್ತರು ಕ್ರಿಮಿನಲ್ ಚಟುವಟಿಕೆ ಗಮನಿಸಿ ಆತನಲ್ಲಿದ್ದ ರಿವಾಲ್ವರ್ನ್ನು ಅಮಾನತ್ತಿನಲ್ಲಿರಿಸಿದ್ದರು. ಆದರೆ ಪೊಲೀಸರು ದಾಖಲಿಸಿದ್ದ ಪ್ರಕರಣ ಹೈಕೋರ್ಟ್ನಲ್ಲಿ ರದ್ದುಗೊಂಡಿತ್ತು. ಹೈಕೋರ್ಟ್ ಆದೇಶವನ್ನು ಮುಂದಿರಿಸಿ ತನ್ನ ರಿವಾಲ್ವರ್ ಲೈಸೆನ್ಸ್ ಅಮಾನತನ್ನು ರದ್ದುಪಡಿಸಬೇಕೆಂದು ಆರೋಪಿ ಪೊಲೀಸರ ಮೇಲೆ ಸತತ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.