ತುಂಗಭದ್ರಾ ನದಿ ತೀರದಲ್ಲಿ ವಿದೇಶಿಗರ ಅಕ್ರಮ ಪಾರ್ಟಿ; ರೆಸಾರ್ಟ್ ಮಾಲೀಕರ ವಿರುದ್ಧ ಕೇಸ್

ಕೊಪ್ಪಳ, ಫೆಬ್ರವರಿ 21: ಜಿಲ್ಲೆಯಲ್ಲಿ ವಿದೇಶಿಗರ ಅನಧಿಕೃತ ಪಾರ್ಟಿಗಳು ನಿಲ್ಲದಿರುವುದು ಮತ್ತೆ ಬೆಳಕಿಗೆ ಬಂದಿದೆ. ಗಂಗಾವತಿ (Gangavathi) ಸಮೀಪದ ತುಂಗಭದ್ರಾ ನದಿ ತೀರದಲ್ಲಿ ಫೆಬ್ರವರಿ 16ರಂದು ಯಾವುದೇ ಅನುಮತಿ ಪಡೆಯದೆ ಭರ್ಜರಿ ಪಾರ್ಟಿ ಆಯೋಜಿಸಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿದೇಶಿಗರ ವೀಡಿಯೋ ನೋಡಿದ್ದ ಪೊಲೀಸರು ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಕಾರ್ಯಕ್ರಮವು ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ವೇಳೆ ಡಿಜೆ ಸದ್ದಿಗೆ ವಿದೇಶಿಗರು ನದಿ ತೀರದಲ್ಲೇ ಕುಣಿದು ಕುಪ್ಪಳಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿತು. ಈ ಹಿನ್ನೆಲೆ ‘ದಿ ಹಂಪಿ ಕೆಫೆ’ ರೆಸಾರ್ಟ್ ಮಾಲೀಕರಾದ ಪಿಯೂಷ್ ಹಾಗೂ ವ್ಯವಸ್ಥಾಪಕರ ವಿರುದ್ಧವೂ ಅನುಮತಿ ಇಲ್ಲದೆ ಪಾರ್ಟಿ ಆಯೋಜಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು
ತೆರೆದ ಜಾಗದಲ್ಲಿ ಕಾರ್ಯಕ್ರಮ ನಡೆಸಿ ನಿಯಮ ಉಲ್ಲಂಘಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೆಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ನೋಟಿಸ್ ಜಾರಿಗೊಳಿಸಲಾಗಿದೆ. ಈ ಕುರಿತು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಹೇಳಿಕೆ ನೀಡಿದ್ದು, ಕಾರ್ಯಕ್ರಮಕ್ಕೆ ಯಾರು ಯಾರು ಹಾಜರಾಗಿದ್ದರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದಿದ್ದಾರೆ. ರೆಸಾರ್ಟ್ನಲ್ಲಿ ನಿಯಮಬಾಹಿರ ಚಟುವಟಿಕೆಗಳ ಪರಿಶೀಲನೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಜಿಲ್ಲಾಡಳಿತವೂ ಟಾಸ್ಕ್ ಫೋರ್ಸ್ ರಚಿಸಿದೆ. ದೂರು ದಾಖಲಾಗುತ್ತಿದ್ದರೂ ಅನಧಿಕೃತ ಪಾರ್ಟಿಗಳು ಮರುಕಳಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.