ವಂಚಕರ ಜಾಲಕ್ಕೆ ಸಿಲುಕಿದ್ದ 25 ಕನ್ನಡಿಗರು ಸೇರಿ 125 ಭಾರತೀಯರ ರಕ್ಷಣೆ: ಸೇನಾ ವಿಮಾನದ ಮೂಲಕ ಥೈಲ್ಯಾಂಡ್/ಮಯನ್ಮಾರ್ನಿಂದ ಯುವಕರು ತವರಿಗೆ ವಾಪಸ್!

ನವದೆಹಲಿ: ವಿದೇಶದಲ್ಲಿ ಉದ್ಯೋಗ (Employment) ಅರಸಿ ವಂಚಕರ ಜಾಲಕ್ಕೆ ಸಿಲುಕಿದ್ದ 25 ಕನ್ನಡಿಗರು ಸೇರಿ 125 ಭಾರತೀಯರನ್ನ ರಕ್ಷಣೆ ಮಾಡಿ ತವರಿಗೆ ಕರೆತರಲಾಗಿದೆ. ಸೇನಾ ವಿಮಾನದ ಮೂಲಕ ಥೈಲ್ಯಾಂಡ್ ನಿಂದ (Thailand) ಯುವಕರು ಭಾರತಕ್ಕೆ ವಾಪಸ್ ಆಗಿದ್ದಾರೆ.

ಇದರೊಂದಿಗೆ, ಈ ವರ್ಷದ ಮಾರ್ಚ್ನಿಂದ ಮಯನ್ಮಾರ್ನ ಕಳ್ಳಸಾಗಣೆ ಕೇಂದ್ರಗಳಿಂದ (Myanmar Scam Centres) ಒಟ್ಟು 1,500 ಭಾರತೀಯರನ್ನು ಥೈಲ್ಯಾಂಡ್ ಮೂಲಕ ದೇಶಕ್ಕೆ ಮರಳಿ ಕರೆತರಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಆಗ್ನೇಯ ಏಷ್ಯಾದ ಕಳ್ಳಸಾಗಣೆ ಕೇಂದ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ಕರೆತರುವ ಭಾರತ ಸರ್ಕಾರದ ಪ್ರಯತ್ನಗಳ ಭಾಗವಾಗಿ, ಬ್ಯಾಂಕಾಕ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಥೈಲ್ಯಾಂಡ್ನ ಚಿಯಾಂಗ್ ಮಾಯ್ ಪ್ರಾಂತ್ಯದಲ್ಲಿರುವ ಭಾರತೀಯ ದೂತವಾಸವು ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಥಾಯ್ ಸರ್ಕಾರ ಮತ್ತು ಟಕ್ ಪ್ರಾಂತ್ಯದ ವಿವಿಧ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕೆಲಸ ಮಾಡಿದೆ.
ಅಲ್ಲದೇ ಭಾರತೀಯ ನಾಗರಿಕರು ವಿದೇಶಗಳಲ್ಲಿ ಉದ್ಯೋಗಾವಕಾಶ ಸ್ವೀಕರಿಸುವ ಮೊದಲು ವಿದೇಶಿ ಉದ್ಯೋಗದಾತರ ರುಜುವಾತುಗಳನ್ನು ಪರಿಶೀಲಿಸಲು ಮತ್ತು ನೇಮಕಾತಿ ಏಜೆಂಟ್ಗಳು ಮತ್ತು ಕಂಪನಿಗಳ ದಾಖಲೆಯನ್ನು ಪರಿಶೀಲಿಸಲು ಬಲವಾಗಿ ಸಲಹೆ ನೀಡಲಾಗಿದೆ. ಇದಲ್ಲದೇ, ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ಥೈಲ್ಯಾಂಡ್ಗೆ ವೀಸಾ-ಮುಕ್ತ ಪ್ರವೇಶವು ಪ್ರವಾಸೋದ್ಯಮ ಮತ್ತು ಅಲ್ಪಾವಧಿಯ ವ್ಯಾಪಾರ ಉದ್ದೇಶಗಳಿಗಾಗಿ ಮಾತ್ರ ಮತ್ತು ಥೈಲ್ಯಾಂಡ್ನಲ್ಲಿ ಉದ್ಯೋಗವನ್ನ ಹುಡುಕಲು ದುರುಪಯೋಗಪಡಿಸಿಕೊಳ್ಳಬಾರದು ಎಂದು ಥೈಲ್ಯಾಂಡ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.

25 ಕನ್ನಡಿಗರ ರಕ್ಷಣೆ
125 ಭಾರತೀಯರಲ್ಲಿ 25 ಕನ್ನಡಿಗರು ಭಾರತಕ್ಕೆ ಮರಳಿದ್ದಾರೆ. ದೆಹಲಿಗೆ ಬಂದ ಯುವಕರಿಗೆ ಕರ್ನಾಟಕ ಭವನದಲ್ಲಿ ತಂಗಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ. ಅಲ್ಲದೇ ಅವರಿಗೆ ಬೆಂಗಳೂರಿಗೆ ಮರಳಲು ರೈಲ್ವೆ ಟಿಕೆಟ್ ವ್ಯವಸ್ಥೆ ಕೂಡಾ ಮಾಡಿದೆ.
ಇನ್ನೂ ಮಾಧ್ಯಮಗಳ ಜೊತೆಗೆ ಮಾತನಾಡಿದ ಯುವಕರು, ಉತ್ತಮ ಕೆಲಸ ಮತ್ತು ಸಂಬಂಳದ ನಿರೀಕ್ಷೆಯಲ್ಲಿ ಥೈಲ್ಯಾಂಡ್ ಗೆ ತೆರಳಿದ್ದೇವು. ಸೋಶಿಯಲ್ ಮೀಡಿಯಾ ಮೂಲಕ ನಮ್ಮನ್ನು ಸಂಪರ್ಕಿಸಲಾಯಿತು ಬ್ಯಾಂಕ್ಯಾಂಕ್ಗೆ ಅವರೇ ಟಿಕೆಟ್ಗಳನ್ನ ಬುಕ್ ಮಾಡಿದ್ದರು. ಅಲ್ಲಿಗೆ ತೆರಳಿದ ಬಳಿಕ ನಮ್ಮನ್ನು ಕಾರಿನ ಮೂಲಕ ಮಯನ್ಮಾರ್ಗೆ ಕರೆದುಕೊಂಡು ಹೋಗಲಾಯಿತು. ನಾವು ಪ್ರಶ್ನೆ ಮಾಡಿದ್ರೆ ಗನ್ ತೋರಿಸಿ ಬೆದರಿಸುತ್ತಿದ್ದರು. ಜನರಿಗೆ ವಂಚನೆ ಮಾಡುವಂತೆ ಒತ್ತಡ ಹೇರುತ್ತಿದ್ದರು, ಮಾಡದಿದ್ದರೆ ಕಿರುಕುಳ ನೀಡುತ್ತಿದ್ದರು, ಇಲ್ಲಿಂದ ಹೊರಬಂದು ಖುಷಿಯಾಗಿದೆ, ಭವಿಷ್ಯದಲ್ಲಿ ಯುವಕರು ಇಂತಹ ಪ್ರಯತ್ನಗಳಿಗೆ ಕೈ ಹಾಕಬಾರದು ಎಂದು ಮನವಿ ಮಾಡಿದರು.