ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಟ್ರಯಲ್ ಆರಂಭ: ಮಗನ ಉಂಗುರ, ಬಟ್ಟೆ ಕಂಡು ಪೋಷಕರ ಕಣ್ಣೀರು!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ (Renukaswamy Murder Case) ಕೋರ್ಟ್ ವಿಚಾರಣೆ ಇಂದಿನಿಂದ ಆರಂಭವಾಗಿದೆ. ಮೊದಲ ಹಂತವಾಗಿ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ, ತಾಯಿ ರತ್ನಪ್ರಭಾ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾರೆ.


ಕೋರ್ಟ್ ಹಾಲ್ ಮುಚ್ಚಿ ಇನ್ ಕ್ಯಾಮರಾ ಪ್ರಕ್ರಿಯೆ ಮೂಲಕ ರೇಣುಕಾಸ್ವಾಮಿ ಪೋಷಕರು ಹೇಳಿಕೆ ದಾಖಲಿಸಿದ್ದಾರೆ. ವಕೀಲರಿಗೆ ಮಾತ್ರ ಕೋರ್ಟ್ ಒಳಗಡೆ ಇರಲು ಮಾತ್ರ ಅವಕಾಶ ನೀಡಲಾಗಿತ್ತು.

ಪ್ರಾಸಿಕ್ಯೂಷನ್ ಮನವಿಯ ಮೇರೆಗೆ ಎರಡೂ ಸಾಕ್ಷಿಗೂ ಸಮನ್ಸ್ ನೀಡಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳು ಹಾಜರಾಗಿದ್ದರು. ದರ್ಶನ್ (Darshan) ಪರ ವಕೀಲ ಸಿವಿ ನಾಗೇಶ್, ಪವಿತ್ರಗೌಡ (Pavithra Gowda) ಪರ ವಕೀಲ ಬಾಲನ್ ವಾದ ಮಂಡಿಸಿದರು.

ನಿಮ್ಮ ಮಗ ಕೋರ್ಟ್ ಕೇಸ್ಗೆ ಹೋಗುತ್ತಿದ್ದದ್ದು ಗೊತ್ತಾ? ಬಜರಂಗದಳ ಹುಡುಗರ ಜೊತೆಗೆ ಓಡಾಡಿದ್ದ ಮಾಹಿತಿ ಗೊತ್ತಾ? ನಿಮ್ಮ ಮಗನನ್ನ ಬಂಧಿಸಿದ್ದರು ಎನ್ನುವುದು ತಿಳಿದಿದೆಯೇ ಎಂದು ಪ್ರಶ್ನೆ ಕೇಳಿದರು. ನನಗೆ ಯಾವುದೂ ಗೊತ್ತಿಲ್ಲ ಎಂದು ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಉತ್ತರ ಕೊಟ್ಟರು. ಪೊಲೀಸರಿಗೆ ರತ್ನಪ್ರಭಾ ಅವರು ಕೊಟ್ಟಿದ್ದ ಹೇಳಿಕೆಯನ್ನು ಬಾಲನ್ ತೋರಿಸಿದಾಗ ಜೂನ್ 14, 2024ರಲ್ಲಿ ನಮ್ಮ ಹೇಳಿಕೆ ಪಡೆದಿದ್ದಾರೆ ಎಂದರು. ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ.