ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಜಾಮೀನು ಮೇಲೆ ಸುಪ್ರೀಂ ಕೋರ್ಟ್ ಕಿಡಿ

ನವದೆಹಲಿ:ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಆರೋಪಿ ದರ್ಶನ್ (Darshan) ಹಾಗೂ ಇತರರಿಗೆ ಕರ್ನಾಟಕ ಹೈಕೋರ್ಟ್ (Karnataka High Court) ಜಾಮೀನು ನೀಡಿರುವುದನ್ನ ನ್ಯಾಯಾಂಗ ಅಧಿಕಾರದ ವಿಕೃತ ಬಳಕೆ ಎಂದು ಸುಪ್ರೀಂ ಕೋರ್ಟ್ (Supreme Court) ಕರೆದಿದ್ದು, ಜಾಮೀನು ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

ಹೈಕೋರ್ಟ್ ವಿರುದ್ಧ ಸುಪ್ರೀಂ ಕಿಡಿ
ಒಂದು ವಾರದ ಅವಧಿಯಲ್ಲಿ ಸುಪ್ರೀಂ ಕೋರ್ಟ್, ದರ್ಶನ್ ಕೇಸ್ ವಿಚಾರವಾಗಿ ಎರಡನೇ ಬಾರಿ ಹೈಕೋರ್ಟ್ ಅನ್ನು ತರಾಟೆಗೆ ತೆಗೆದುಕೊಂಡಿದ್ದು, ಸರಿಯಾಗಿ ವಿವೇಚನೆ ಬಳಸಿ ನಿರ್ಧಾರ ಮಾಡುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದೆ. ಇನ್ನು ಹೈಕೋರ್ಟ್ ಮಾಡಿದ ತಪ್ಪನ್ನು ನಾವು ಮಾಡುವುದಿಲ್ಲ ಎಂದು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರ ಪೀಠ ಹೇಳಿದ್ದು, ಜಾಮೀನು ಆದೇಶದಲ್ಲಿ ಬಳಕೆ ಮಾಡಲಾದ ಭಾಷೆಯ ಬಗ್ಗೆ ಸುಪ್ರೀಂ ಕೋರ್ಟ್ ವಿಷಾಧ ವ್ಯಕ್ತಪಡಿಸಿದೆ. ಆರೋಪಿಗಳು ನಿರಾಪರಾಧಿಗಳು ಎನ್ನುವ ರೀತಿ ಇದ್ದು, ಇತರ ಪ್ರಕರಣಗಳಲ್ಲಿಯೂ ಹೈಕೋರ್ಟ್ ಇದೇ ರೀತಿ ಆದೇಶ ನೀಡುತ್ತದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಅಂತಹ ತಪ್ಪು ಮಾಡುವುದನ್ನ ಒಪ್ಪಿಬಿಡಬಹುದು, ಆದರೆ ಹೈಕೋರ್ಟ್ ನ್ಯಾಯಾಧೀಶರು ಮಾಡಿದ್ದು ಆಶ್ಚರ್ಯಕರ ಎಂದಿದೆ.
ಇದಿಷ್ಟೇ ಅಲ್ಲದೇ, ನಟ ದರ್ಶನ್ ಫೇಮಸ್ ಹೌದೋ, ಅಲ್ಲವೋ ಎಂಬುವುದು ನಮಗೆ ಬೇಡ. ಈ ಪ್ರಕರಣ ಮಾತ್ರ ಮುಖ್ಯ. ಅಲ್ಲದೇ, ಅವರ ಮೇಲೆ ಹಿಂದೆ ಯಾವುದಾದರೂ ಪ್ರಕರಣಗಳೂ ಇತ್ತಾ ಎಂಬುದನ್ನ ಸಹ ನೋಡಬೇಕು. ಅವರು ಜೈಲಿನಲ್ಲಿ ಇದ್ದಾಗಲೇ ಅವರ ಮೇಲೆ 2 ಎಫ್ಐಆರ್ಗಳು ದಾಖಲಾಗಿದೆ. ಈ ಎಲ್ಲಾ ಅಂಶಗಳನ್ನ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆಯಂತೆ.
ಜಾಮೀನು ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಇನ್ನು ವಕೀಲರ ವಾದಗಳನ್ನ ಆಲಿಸಿದ ಪೀಠವು ಕನಿಷ್ಠ ಹತ್ತು ದಿನಗಳ ಬಳಿಕವೇ ದರ್ಶನ್ ಜಾಮೀನು ಕುರಿತಾಗಿ ತೀರ್ಪು ಪ್ರಕಟಿಸಲು ನಿರ್ಧಾರ ಮಾಡಿದ್ದು, ತೀರ್ಪಿನ ಆದೇಶವನ್ನು ಕಾಯ್ದಿರಿಸಿದೆ. ಅಲ್ಲದೇ 3 ಪುಟಗಳಲ್ಲಿ ಲಿಖಿತ ವಾದಾಂಶವನ್ನು ಒಂದು ವಾರದೊಳಗೆ ಸಲ್ಲಿಸಬೇಕು ಎಂದು ಘನ ನ್ಯಾಯಾಲಯವು ಇಂದಿನ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಇದರಿಂದ ಸದ್ಯಕ್ಕೆ 10 ದಿನಗಳವರೆಗೆ ಕೊಲೆ ಆರೋಪ ಹೊತ್ತಿರುವ ದರ್ಶನ್ & ಗ್ಯಾಂಗ್ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದಂತಾಗಿದೆ.
ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ
ಪ್ರಕರಣದ ಕುರಿತು ವಿವರಣೆ ನೀಡಿದ ಸರ್ಕಾರದ ಪರ ವಕೀಲ ಲೂಥ್ರಾ ಅವರು, ಈ ಕೇಸ್ ನಲ್ಲಿ ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ. ದರ್ಶನ್ ಹಾಗೂ ಪವಿತ್ರ ಲಿವಿಂಗ್ ರಿಲೇಶನ್ಶಿಪ್ ನಲ್ಲಿದ್ದ ವೇಳೆ ಚಿತ್ರದುರ್ಗದ ರೇಣುಕಾ ಸ್ವಾಮಿ ಪವಿತ್ರ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಅಲ್ಲದೇ ರೇಣುಕಾಸ್ವಾಮಿ ನಟ ದರ್ಶನ ಅಭಿಮಾನಿಯಾಗಿದ್ದ. ಅಶ್ಲೀಲ ಸಂದೇಶದ ಬಗ್ಗೆ ದರ್ಶನ್ ಗೆ ವಿಷಯ ತಿಳಿದ ನಂತರ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಲಾಯಿತು, ಮಾರ್ಗ ಮಧ್ಯೆ ಕಿಡ್ನಾಪರ್ ಗಳು ಡ್ರಿಂಕ್ಸ್ ಮಾಡಿದ್ದರು ಎಂದು ಹೇಳಿದ್ದಾರೆ.
ಇದಲ್ಲದೇ ಆತನನ್ನು ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್ಡಿಗೆ ಕರೆ ತಂದು ಹಲ್ಲೆ ಮಾಡಿದ್ದಾರೆ. ಅದಲ್ಲದೇ ನಟ ದರ್ಶನ್ ಗೆ ಕ್ರಿಮಿನಲ್ ಹಿನ್ನೆಲೆ ಇದ್ದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾದ ನಂತರ ಜೈಲಲ್ಲಿ ಸಹಕರಿಗಳೊಂದಿಗೆ ಸಿಗರೇಟ್ ಸೇದುತ್ತಾ ಐಷಾರಾಮಿ ಜೀವನ ಮಾಡುವಷ್ಟು ಪ್ರಭಾವ ಹೊಂದಿದ್ದರು ಎಂದು ವಿವರಿಸಿದರು. ಕೊಲೆ ಹಿಂದಿನ ಉದ್ದೇಶ ಏನು? ಸಾಂದರ್ಭಿಕ ಸಾಕ್ಷ್ಯಗಳ ಮೇಲೆ ಕೇಸ್ ದಾಖಲಾಗಿದೆಯೇ ಎಂಬಿತ್ಯಾದಿ ಪ್ರಕರಣದ ವಿವರಣೆಯನ್ನು ಜಡ್ಜ್ ಕೇಳಿದಕ್ಕೆ ಈ ಸಂದರ್ಭದಲ್ಲಿ ವಿವರಣೆ ನೀಡಲಾಯಿತು.
