ಶೃಂಗೇರಿ ಜನರಿಗೆ ನೆಮ್ಮದಿ: ಇಬ್ಬರ ಸಾವಿಗೆ ಕಾರಣವಾಗಿದ್ದ ಪುಂಡಾನೆ ಕೊನೆಗೂ ಸೆರೆ; ಏಕಲವ್ಯ ಆನೆ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ

ಚಿಕ್ಕಮಗಳೂರು: ಶೃಂಗೇರಿಯಲ್ಲಿ (Sringeri) ಇಬ್ಬರನ್ನು ಬಲಿ ಪಡೆದಿದ್ದ ಪುಂಡಾನೆಯನ್ನು (Wild Elephant) ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಶೃಂಗೇರಿ ತಾಲೂಕಿನ ಭಗವತಿ ಕಾಡಿನಲ್ಲಿ ಇಂದು ರಾತ್ರಿ 8 ಗಂಟೆ ಸುಮಾರಿಗೆ ಸಾಕಾನೆಗಳ ನೆರವಿನಿಂದ ಪುಂಡಾನೆಯನ್ನ ಸೆರೆಹಿಡಿಯಲಾಗಿದೆ.
ಇತ್ತೀಚೆಗಷ್ಟೇ ಶೃಂಗೇರಿಯ ಕೆರೆಮನೆ ಗ್ರಾಮದಲ್ಲಿ ಕಾಡಿಗೆ ಸೊಪ್ಪು ತರಲು ಹೋಗಿದ್ದ ಇಬ್ಬರನ್ನ ಪುಂಡಾನೆ ಬಲಿ ಪಡೆದಿತ್ತು. ಈ ಹಿನ್ನೆಲೆ ಆನೆ ಸೆರೆಗೆ ಅರಣ್ಯ ಇಲಾಖೆ (Forest Department) ಆದೇಶ ಹೊರಡಿಸಿತ್ತು. ಅದರಂತೆ ದುಬಾರೆ, ಹಾರಂಗಿ ಆನೆ ಶಿಬಿರಗಳಿಂದ ಸಾಕಾನೆಗಳನ್ನ ತಂದು ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿತ್ತು.
ಏಕಲವ್ಯ ಆನೆ ನೇತೃತ್ವದಲ್ಲಿ ಇಂದು ಸಂಜೆ 5 ಗಂಟೆ ನಂತರ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಕಾರ್ಯಾಚರಣೆಗೆ ಇಳಿದಿತ್ತು. 8 ಗಂಟೆವೇಳೆಗೆಲ್ಲ ಆನೆಯನ್ನ ಸೆರೆ ಹಿಡಿಯಲಾಗಿದೆ.