ಫೇಶಿಯಲ್ ರೆಕಗ್ನೈಸೇಷನ್ ಅಟೆಂಡೆನ್ಸ್ ಗೆ ನಕಾರ –ಸಿಎಂ ಗೆ ಪತ್ರ

ಬೆಂಗಳೂರು: ಜಗತ್ತು ಮುಂದುವರಿಯುತ್ತಿದೆ. ಬಹುತೇಕರು ಟೆಕ್ನಾಲಜಿಯನ್ನು ಅವಲಂಬಿಸಿದ್ದಾರೆ. ಇದೀಗ ಶಿಕ್ಷಣ ಕ್ಷೇತ್ರದಲ್ಲೂ ಕೂಡ ಎ.ಐ ಟೆಕ್ನಾಲಜಿಗಳು ಎಂಟ್ರಿ ಕೊಟ್ಟಿವೆ. ಇತ್ತೀಚಿಗಷ್ಟೇ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಕೂಡ ಮಕ್ಕಳ ಹಾಜರಾತಿಯನ್ನ ಫೇಶಿಯಲ್ ಅಟೆಂಡೆನ್ಸ್ ಮೂಲಕ ದಾಖಲಿಸಿಕೊಳ್ಳಲು 2025-26ನೇ ಸಾಲಿಗೆ ಜಾರಿಗೆ ಮುಂದಾಗಿತ್ತು. ಆದರೆ ಫೇಶಿಯಲ್ ಅಟೆಂಡೆನ್ಸ್ ವಿಧಾನದ ವಿರುದ್ಧ ಅಪಸ್ವರ ಕೇಳಿ ಬರುತ್ತಿದೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯನ್ನ ಫೇಶಿಯಲ್ ರೆಕಗ್ನೈಸೇಷನ್ ಮೂಲಕ ಪಡೆದುಕೊಂಡು ಇದನ್ನ ಸ್ಟಾಟ್ಸ್ನಲ್ಲಿ ಅಪ್ಲೋಡ್ ಮಾಡುವ ಪ್ಲ್ಯಾನ್ ಇಲಾಖೆ ಮಾಡಿತ್ತು. ಮಕ್ಕಳ ಫೋಟೋ ಸಮೇತ ದಾಖಲಿಸಲು ಮುಂದಾಗಿತ್ತು. ಆದರೆ ಈ ಫೇಶಿಯಲ್ ರೆಕಗ್ನೈಸೇಷನ್ ಶಾಲಾ ಹಂತದಲ್ಲಿ ಅಳವಡಿಸುವುದರಿಂದ ಮಕ್ಕಳ ಖಾಸಗಿತನಕ್ಕೆ ಧಕ್ಕೆಯಾಗಲಿದೆ.
ಮಕ್ಕಳ ವಿವರಗಳು ಫೋಟೊ ಸಮೇತ ಯಾರು ಬೇಕಾದರೂ ಪಡೆದುಕೊಳ್ಳಬಹುದು, ಇದರಿಂದ ಮಕ್ಕಳ ಭವಿಷ್ಯಕ್ಕೂ ತೊಂದರೆಯಾಗಲಿದೆ. ಹೀಗಾಗಿ ಫೇಶಿಯಲ್ ಹಾಜರಾತಿ ಬೇಡ ಎಂದು ಶಿಕ್ಷಣ ತಜ್ಞರು ಸಿಎಂ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದಾರೆ. ಜೊತೆಗೆ ಈ ಬಗ್ಗೆ ಸಂಶೋಧನೆಯ ವರದಿಯನ್ನ ಸಿದ್ಧಪಡಿಸಿ ಸಲ್ಲಿಕೆ ಕೂಡ ಮಾಡಲಾಗಿದೆ. ಪ್ರಮುಖವಾಗಿ ಪೋಷಕರು ಈ ಫೇಶಿಯಲ್ ಹಾಜರಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಪೋಷಕರ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ್ ತಿಳಿಸಿದ್ದಾರೆ.
ಇನ್ನು ಸ್ಟಾಟ್ಸ್ನಲ್ಲಿ ಮಕ್ಕಳ ಮುಖದ ಜೊತೆಗೆ ಸಂಪೂರ್ಣ ವಿವರವನ್ನ ದಾಖಲಿಸುವುದರಿಂದ ಮಕ್ಕಳ ಪ್ರಾಥಮಿಕ ಮಾಹಿತಿ ಅಷ್ಟೇ ಅಲ್ಲದೆ ಮಕ್ಕಳ ಅಭಿರುಚಿ, ಆಸಕ್ತಿ ಮುಂತಾದ ವಿವರಗಳನ್ನ ತಿಳಿದುಕೊಳ್ಳಬಹುದಾಗಿದೆ. ಇದರಿಂದಾಗಿ ಮಕ್ಕಳ ಮಾಹಿತಿ ಬಹಳ ಸುಲಭವಾಗಿ ಬೇರೆಯವರ ಕೈ ಸೇರುತ್ತದೆ. ಇದರಿಂದ ಆ ಮಾಹಿತಿಗಳು ದುರುಪಯೋಗವಾಗುವ ಸಾಧ್ಯತೆ ಇದ್ದು, ಮಕ್ಕಳ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಶಾಲಾ ಹಂತದಲ್ಲಿ ಎ.ಐ ಬೇಸ್ ಫೇಶಿಯಲ್ ರೆಕಗ್ನೈಸೇಷನ್ ಅಟೆಂಡೆನ್ಸ್ ಬೇಡ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಟೆಕ್ನಾಲಜಿಯಿಂದ ಸಾಕಷ್ಟು ಲಾಭಗಳಿದರೂ ಸಹ ಅದರಿಂದ ತೊಂದರೆ ಕೂಡ ಆಗಲಿದೆ. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ಸರ್ಕಾರಕ್ಕೆ ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.