ರೀಲ್ಸ್ ಜಗಳಕ್ಕೆ ದುರಂತ ಅಂತ್ಯ: ತುಮಕೂರಿನಲ್ಲಿ ಪ್ರೇಮಿಯೊಂದಿಗೆ ವಾಗ್ವಾದದ ಬಳಿಕ ಯುವತಿ ಆತ್ಮಹತ್ಯೆ

ತುಮಕೂರು: ರೀಲ್ಸ್ ವಿಚಾರಕ್ಕೆ ಪ್ರೇಮಿಗಳ ನಡುವೆ ಶುರುವಾದ ಜಗಳ ಯುವತಿಯ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ತುಮಕೂರು ಗ್ರಾಮಾಂತರ (Self Harming) ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಚೈತನ್ಯ (22) ಎಂಬ ಮೃತ ಯುವತಿ. ಪದವಿ ವ್ಯಾಸಂಗ ಮಾಡುತ್ತಾ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು.
ರೀಲ್ಸ್ ಒಂದನ್ನು ಸ್ಟೇಟಸ್ನಲ್ಲಿ ಹಾಕಿದ ವಿಚಾರವಾಗಿ ಆಕೆಯನ್ನು ಪ್ರೀತಿಸುತ್ತಿದ್ದ ಯುವಕ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ನಡೆದು, ಯುವತಿ ನೇಣಿಗೆ ಶರಣಾಗಿದ್ದಾಳೆ.
ಪಕ್ಕದ ಊರಿನ ಕಾರು ಚಾಲಕ ವಿಜಯ್ ಕುಮಾರ್ ಎಂಬಾತನನ್ನು ಕಳೆದ ಹಲವು ವರ್ಷಗಳಿಂದ ಯುವತಿ ಚೈತನ್ಯ, ಮನೆಯವರಿಗೆ ಗೊತ್ತಾಗದಂತೆ ಕದ್ದು ಮುಚ್ಚಿ ಪ್ರೀತಿಸುತ್ತಿದ್ದಳು. ಇನ್ನು ವಿಜಯ್ ಕುಮಾರ್ ಮತ್ತು ಚೈತನ್ಯಳ ಪ್ರೀತಿ ವಿಚಾರವನ್ನು ತಿಳಿದ ಯುವತಿಯ ಮಾವ ಆಕೆಗೆ ಎಚ್ಚರಿಕೆ ನೀಡಿದ್ದರು. ನೀನು ಪ್ರೀತಿ-ಪ್ರೇಮ ಎಲ್ಲ ಬಿಟ್ಟುಬಿಡುವಂತೆ ಹೇಳಿದ್ದರು.

ಮಂಗಳವಾರ ಚೈತನ್ಯ ರೀಲ್ಸ್ ಒಂದನ್ನು ಸ್ಟೇಟಸ್ನಲ್ಲಿ ಹಾಕಿದ್ದಳು. ಇದೇ ವಿಚಾರವಾಗಿ ಪ್ರಶ್ನಿಸಲು ಚೈತನ್ಯ ಮನೆ ಬಳಿಗೆ ವಿಜಯ್ ಹೋಗಿದ್ದ. ಆಗ ಚೈತನ್ಯಳ ತಾಯಿ ಸೌಭಾಗ್ಯಮ್ಮ ರೂಮ್ನಲ್ಲಿದ್ದರು. ತಾಯಿ ಇದ್ದ ರೂಮಿನ ಬಾಗಿಲನ್ನು ಲಾಕ್ ಮಾಡಿ ಕಿಟಕಿಯ ಬಳಿ ಇಬ್ಬರೂ ಜಗಳ ಮಾಡಲಾರಂಭಿಸಿದ್ದಾರೆ. ವಿಜಯ್ ಕುಮಾರ್ ಜಗಳವಾಡಿ ಹೋದ ಬಳಿಕ ಚೈತನ್ಯ ಸಾಯುವುದಾಗಿ ಕರೆ ಮಾಡಿ ಹೇಳಿದ್ದಾಳೆ. ಈ ವಿಚಾರವನ್ನು ವಿಜಯ್ ಕೂಡಲೇ ಚೈತನ್ಯಳ ಸಂಬಂಧಿಕರಿಗೆ ತಿಳಿಸಿದ್ದಾನೆ. ಚೈತನ್ಯಾ ಸಾವಿಗೆ ಪ್ರಯತ್ನಿಸುವ ಮಾಹಿತಿ ತಿಳಿಯುತ್ತಿದ್ದಂತೆ ಸಂಬಂಧಿಕರು ಬಂದು ನೋಡಿದಾಗ ಯುವತಿ ಮಂಗಳವಾರ ರಾತ್ರಿ ನೇಣಿಗೆ ಶರಣಾಗಿ ಮೃತಪಟ್ಟಿರುವುದು ಖಚಿತವಾಗಿದೆ.
ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬ ಮೇಡಂ ನೀವು ಚೆನ್ನಾಗಿ ಕಾಣಿಸ್ತೀರಿ, ನಿಮ್ಮ ಫೋಟೋ ತೆಗೆಯಬಹುದೇ ಎಂದು ಕೇಳಿ ಬರೋಬ್ಬರಿ 25 ಫೋಟೋಗಳನ್ನು ತನ್ನ ಕ್ಯಾಮೆರಾದಲ್ಲಿ ತೆಗೆದಿದ್ದಾನೆ. ಈ ಫೋಟೋಗಳನ್ನು ಹಾಗೂ ವಿಡಿಯೋವನ್ನು ಚೈತನ್ಯ ಕೂಡ ಇನ್ಸ್ಟಾಗ್ರಾಮ್ಗೆ ಹಾಕಿಕೊಂಡಿದ್ದಾಳೆ. ಆದರೆ, ಇದನ್ನು ನೋಡಿ ಸಹಿಸದ ಪ್ರೇಮಿ ವಿಜಯ್ ಪ್ರಶ್ನಿಸಲು ಗೆಳತಿಯ ಮನೆಗೆ ಬಂದು ಜಗಳ ಮಾಡಿದ್ದರಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಈ ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಚೈತನ್ಯಾಳ ಸಾವಿಗೆ ಆಕೆಯ ಪ್ರೇಮಿ ವಿಜಯ್ ಕುಮಾರ್ ಕಾರಣ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಆರೋಪಿ ವಿಜಯ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.