“ಸಚಿವ ಸ್ಥಾನ ಬಿಡಲು ಸಿದ್ಧ”: ಸಂಪುಟ ಪುನಾರಚನೆ ವಿಚಾರ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಸಚಿವ ದಿನೇಶ್ ಗುಂಡೂರಾವ್

ಯಲ್ಲಾಪುರ : ಸಚಿವ ಸ್ಥಾನ ಬಿಡುವಂತೆ ಹೈಕಮಾಂಡ್ ಕೇಳಿದರೆ, ಬಿಡಲು ಸಿದ್ಧ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಜೊತೆಗೆ ಸಂಪುಟ ಪುನಾರಚನೆ ವಿಚಾರವಾಗಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದರು. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳ ಮನೆಯಲ್ಲಿ ಸೋಮವಾರ ರಾತ್ರಿ ನಡೆದ ಔತಣಕೂಟದಲ್ಲಿ ಸಚಿವ ಸಂಪುಟ ಪುನಾರಚನೆಯ ವಿಚಾರ ಚರ್ಚೆಯೇ ಆಗಿಲ್ಲ. ಎಲ್ಲ ಇಲಾಖೆಯ ಸಚಿವರು ತಮ್ಮ ಇಲಾಖೆಗಳಲ್ಲಿ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಆರ್ಎಸ್ಎಸ್ ನಿಷೇಧದ ಬಗ್ಗೆ ಪ್ರತಿಕ್ರಿಯಿಸಲ್ಲ: ಈ ವೇಳೆ ಮಾತನಾಡಿದ ಅವರು ನಾನು ಸಂಘದ ನಿಷೇಧದ ಬಗ್ಗೆ ಏನನ್ನೂ ಪ್ರತಿಕ್ರಿಯಿಸಲ್ಲ. ಆದರೆ, ಸರ್ಕಾರಿ ಶಾಲೆಗಳ ಆವರಣದಲ್ಲಿ ಚಟುವಟಿಕೆ ನಡೆಯಬಾರದೆಂಬುದಕ್ಕೆ ನನ್ನ ಬೆಂಬಲವಿದೆ ಎಂದ ಅವರು, ಆರ್ಎಸ್ಎಸ್ ತಮ್ಮದು ಸರ್ಕಾರಿ ಸಂಘಟನೆಯಲ್ಲ ಎಂದು ಹೇಳಿ, ರಾಜಕೀಯದಲ್ಲಿಯೇ ತೊಡಗಿ ಹೋಗಿದ್ದಾರೆ ಎಂಬ ಸಂಗತಿ ಇಡೀ ದೇಶಕ್ಕೆ ತಿಳಿದಿದೆ. ಹಾಗಾಗಿ ಸರ್ಕಾರಿ ಕಟ್ಟಡಗಳು, ಅದರ ಆವಾರಗಳಲ್ಲಿ ಚಟುವಟಿಕೆಗಳು ನಡೆಯದಂತೆ ನಿಷೇಧ ಹೇರುವುದು ಸರಿಯಾದ ಕ್ರಮ ಎಂದರು.
ರಾಜ್ಯದಲ್ಲಿ ಉತ್ತಮ ಸಿಎಂ: ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ನನಗೆ ತಿಳಿದಿಲ್ಲ. ಸದ್ಯ ಉತ್ತಮ ಮುಖ್ಯಮಂತ್ರಿ ಇರುವಾಗ ಇನ್ನೊಂದು ಮುಖ್ಯಮಂತ್ರಿಗಳ ನೇಮಕದ ವಿಚಾರದ ಚರ್ಚೆ ಸರಿಯಲ್ಲ ಎಂದರು.