ರನ್ಯಾ ಚಿನ್ನ ಸ್ಮಗ್ಲಿಂಗ್ ಪ್ರಕರಣ: ಹೋಟೆಲ್ ಮಾಲೀಕರ ಮೊಮ್ಮಗ ತರುಣ್ ರಾಜ್ ಬಂಧನ

ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕಿಬಿದ್ದ ನಟಿ ರನ್ಯಾ ರಾವ್ ಪ್ರಕರಣದಲ್ಲಿ ಆಕೆಯ ಸ್ನೇಹಿತ ತರುಣ್ ರಾಜ್ ಬಂಧನವಾಗಿದೆ. ತರುಣ್ ರನ್ಯಾ ಜೊತೆ ನಿಕಟ ಸಂಪರ್ಕ ಹೊಂದಿದ್ದು, ದುಬೈಗೆ ಜೊತೆಯಲ್ಲೇ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.
ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾದ ಚಲನಚಿತ್ರ ನಟಿ ರನ್ಯಾ ರಾವ್ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿದೆ. ಸ್ಮಗ್ಲಿಂಗ್ ರಾಣಿಯ ಜಾಲ ಬಗೆದಷ್ಟೂ ಬಯಲಾಗುತ್ತಲೇ ಇದೆ . ಇದೀಗ ಪ್ರಕರಣದಲ್ಲಿ ರನ್ಯಾಳ ಸ್ನೇಹಿತ ತರುಣ್ ರಾಜ್ ಎಂಬಾತನ ಬಂಧನವಾಗಿದೆ.
ರನ್ಯಾ ಜೊತೆ ನಿಕಟ ಸಂಪರ್ಕ ಹೊಂದಿದ್ದ ಹಿನ್ನೆಲೆ DRI 5 ದಿನ ಕಸ್ಟಡಿಗೆ ಪಡೆದಿದೆ. ಮಾರ್ಚ್ 15ರವರೆಗೆ ತರುಣ್ ಕೊಂಡಾರು ರಾಜುನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಂಧಿತ ತರುಣ್ , ಪ್ರತಿಷ್ಠಿತ ಹೊಟೇಲ್ ಮಾಲೀಕರ ಮೊಮ್ಮಗ ಎನ್ನಲಾಗಿದೆ.
ಏಟ್ರಿಯಾ ಹೋಟೆಲ್ ಮಾಲೀಕ ಸುಂದರ್ ರಾಜು ಅವರ ತಮ್ಮನ ಮಗನಾಗಿರುವ ತರುಣ್ ನಟಿ ರನ್ಯಾ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದ ಎಂದು ತಿಳಿದುಬಂದಿದೆ. ದುಬೈಗೆ ಜೊತೆಯಲ್ಲೇ ಪ್ರಯಾಣ ಮಾಡಿದ್ದಾರೆ ಎನ್ನಲಾಗ್ತಿದೆ. ಜೊತೆಗೆ ದುಬೈನಲ್ಲಿ ರನ್ಯಾ ಜೊತೆ ಕಾಣಿಸಿಕೊಂಡಿದ್ದ ಆರೋಪವಿದೆ. ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ತರುಣ್ ರಾಜ್ ನ ದೊಡ್ಡ ಪಾತ್ರದ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಇನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ಐ) ವಶಕ್ಕೆ ಪಡೆದಿದ್ದ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಮತ್ತೆ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ರನ್ಯಾಳನ್ನು ಕರೆತರಲಾಯ್ತು.
ವಿಚಾರಣೆ ವೇಳೆ ನನಗೆ ಮೆಂಟಲಿ ಟಾರ್ಚರ್ ಆಗ್ತಿದೆ. ಎಮೋಷನಲಿ, ಮೆಂಟಲಿ ನಾನು ಪ್ರೋ ಕಿಡ್ ಎಂದು ರನ್ಯಾ ನ್ಯಾಯಾಧೀಶರ ಮುಂದೆ ಹೇಳಿದ್ದಾಳೆ. ಇದಕ್ಕೆ ತನಿಖಾಧಿಕಾರಿಗಳು ಆಕ್ಷೇಪಿಸಿ ನಟಿ ರನ್ಯಾ ತನಿಖೆಗೆ ಸಹಕರಿಸುತ್ತಿಲ್ಲ ಎಂದಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮತ್ತೆ ನ್ಯಾಯಾಲಯ ಬಂಧನಕ್ಕೆ ಆದೇಶಿಸಿದ್ದಾರೆ. ಮಾರ್ಚ್ 24ರವರೆಗೆ ರನ್ಯಾ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿದ್ದು, ಈ ಮೂಲಕ ಮತ್ತೆ ರನ್ಯಾ ಪರಪ್ಪನ ಅಗ್ರಹಾರದಲ್ಲಿ ಇರಬೇಕಾಗುತ್ತದೆ. ಮುಂದಿನ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.