ರಾಜಸ್ಥಾನದ ನಾಸಿರ್-ಜುನೈದ್ ಹತ್ಯೆ ಪ್ರಕರಣದ ಆರೋಪಿ ಆತ್ಮಹತ್ಯೆ: ಬಜರಂಗದಳ ನಾಯಕರ ವಿರುದ್ಧ ಕಿರುಕುಳದ ಆರೋಪ!

ಫರಿದಾಬಾದ್: ರಾಜಸ್ಥಾನದಲ್ಲಿ ನಡೆದ ನಾಸಿರ್ ಮತ್ತು ಜುನೈದ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸ್ವಘೋಷಿತ ಗೋ ರಕ್ಷಕ ಲೋಕೇಶ್ ಸಿಂಗ್ಲಾ, ಜುಲೈ 5ರಂದು ಪಲ್ವಾಲ್ ಬಳಿಯ ದಿಲ್ಲಿ -ಆಗ್ರಾ ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೂ ಮೊದಲು ಸಿಂಗ್ಲಾ ತನಗೆ ಬಜರಂಗದಳದ ನಾಯಕರು ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ವೀಡಿಯೊ ಮೂಲಕ ಗಂಭೀರ ಆರೋಪ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ತನ್ನ ಪತ್ನಿ ದಮಯಂತಿಗೆ ಕಳುಹಿಸಿದ ವೀಡಿಯೋ ಸಂದೇಶದಲ್ಲಿ ಲೋಕೇಶ್ ಸಿಂಗ್ಲಾ, ಹಾಥಿನ್ ನ ಬಜರಂಗದಳ ರಾಜ್ಯ ಸಂಚಾಲಕ ಭರತ್ ಭೂಷಣ್, ಹರ್ಕೇಶ್ ಯಾದವ್ ಮತ್ತು ಅನಿಲ್ ಕೌಶಿಕ್ ಎಂಬವರು ತನ್ನನ್ನು ಬೆದರಿಸುತ್ತಿದ್ದರು. ಅದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾನೆ.
“ಅವರು ಗೂಂಡಾಗಳನ್ನು ನನ್ನ ಹಿಂದೆ ಬಿಟ್ಟಿದ್ದರು. ಸುಳ್ಳು ಪ್ರಕರಣ ದಾಖಲಿಸುವುದಾಗಿಯೂ ಹೆದರಿಸುತ್ತಿದ್ದರು. ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಸಿಂಗ್ಲಾ ವಿಡಿಯೋದಲ್ಲಿ ತಿಳಿಸಿದ್ದಾನೆ.
ಸಿಂಗ್ಲಾನ ಪತ್ನಿ ದಮಯಂತಿಯವರು ನೀಡಿದ ದೂರಿನ ಆಧಾರದ ಮೇಲೆ, ಫರಿದಾಬಾದ್ ನ ರೈಲ್ವೆ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೂವರು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಿಸಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಸಿಂಗ್ಲಾ ಅವರನ್ನು ಮೂವರು ಗೂಂಡಾಗಳು ಹಿಂಬಾಲಿಸುತ್ತಿದ್ದರು, ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಮತ್ತು ಕೊಲೆ ಬೆದರಿಕೆ ಹಾಕುತ್ತಿದ್ದರು ಎಂದು ಸಿಂಗ್ಲಾನ ಪತ್ನಿ ದಮಯಂತಿ ತಿಳಿಸಿದ್ದಾರೆ.
ನನ್ನ ಪತಿ ನೂಹ್ ಜಿಲ್ಲೆ ಬಿಚೋಹ್ ನಲ್ಲಿ ಸಾಮಾಜಿಕ ಕಾರ್ಯಕರ್ತನಾಗಿದ್ದರು. ಮೂವರು ಆರೋಪಿಗಳು ಬಹಳ ಸಮಯದಿಂದ ಕಿರುಕುಳ ನೀಡುತ್ತಿದ್ದರು. ಮನೆಗೆ ಬಂದು ಬ್ಲಾಕ್ ಮೇಲ್ ಮಾಡುತ್ತಿದ್ದರು. ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ನನ್ನ ಪತಿ ಮಾನಸಿಕವಾಗಿ ವಿಚಲಿತರಾಗಿದ್ದರು. ಈ ಕುರಿತು ನನ್ನ ಬಳಿ ಹೇಳಿಕೊಂಡಿದ್ದರು ಎಂದು ದಮಯಂತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಫೆಬ್ರವರಿ 16, 2023 ರಂದು, ರಾಜಸ್ಥಾನ-ಹರಿಯಾಣ ಗಡಿಯಲ್ಲಿ ವಾಹನವೊಂದರಲ್ಲಿ ನಾಸಿರ್ ಮತ್ತು ಜುನೈದ್ ಎಂಬ ಇಬ್ಬರು ಯುವಕರ ಮೃತದೇಹಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಅವರನ್ನು ಗೋವು ಕಳ್ಳಸಾಗಣೆ ಆರೋಪದ ಮೇಲೆ ಅಪಹರಿಸಿ ಹತ್ಯೆ ಮಾಡಲಾಗಿದೆ ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಸಿಂಗ್ಲಾ ಈ ಪ್ರಕರಣದಲ್ಲಿನ ಆರೋಪಿಗಳಲ್ಲಿ ಒಬ್ಬನಾಗಿದ್ದ.
“ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಮೂರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣವನ್ನು ನಾವು ಎಲ್ಲಾ ಆಯಾಮಗಳಿಂದ ಪರಿಶೀಲನೆ ನಡೆಸುತ್ತಿದ್ದೇವೆ,” ಎಂದು ಫರಿದಾಬಾದ್ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಚೆಚಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.