ಪುತ್ತೂರು: ಬಾಣಂತಿ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ; ಆಸ್ಪತ್ರೆಗೆ ₹10 ಲಕ್ಷ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಪುತ್ತೂರು: ಹೆರಿಗೆಯಾದ ನಂತರ ಬಾಣಂತಿ ಮೃತಪಟ್ಟ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯು ಮೃತ ಮಹಿಳೆಯ ಪತಿಗೆ ₹10 ಲಕ್ಷ ಪರಿಹಾರ ಹಾಗೂ ವ್ಯಾಜ್ಯ ವೆಚ್ಚವಾಗಿ ₹30 ಸಾವಿರ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯವು ಆದೇಶಿಸಿದೆ.
ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು, ಬಾಣಂತಿಯ ಸಾವು ಆಸ್ಪತ್ರೆಯ ವೈದ್ಯರ, ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಸೇವಾ ನ್ಯೂನತೆಯಿಂದ ಸಂಭವಿಸಿದೆ. ತುರ್ತು ಸಮಯದಲ್ಲಿ ಹೊಂದಿರಬೇಕಾದ ವ್ಯವಸ್ಥೆ ಇಲ್ಲದಿರುವುದು, ಹೆರಿಗೆ ನಂತರದ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಲ್ಲಿ ವೈದ್ಯರು ಸಂಪೂರ್ಣ ವಿಫಲರಾಗಿದ್ದಾರೆ. ಕೇಸ್ ಶೀಟ್ ಡಿಸ್ಚಾರ್ಜ್ ಸಮ್ಮರಿಗಳನ್ನು ಆಸ್ಪತ್ರೆ ದೂರುದಾರರಿಗೆ ಒದಗಿಸದೆ ವೃತ್ತಿ ನಿಯಮ ಉಲ್ಲಂಘಿಸಲಾಗಿದೆ ಎಂದು ಗ್ರಾಹಕ ನ್ಯಾಯಾಲಯ ಹೇಳಿದೆ.

ಪುತ್ತೂರು ತಾಲ್ಲೂಕಿನ ಕೆಮ್ಮಿಂಜೆ ಗ್ರಾಮದ ಮುಂಡೂರಿನ ಗಣೇಶ್ ಬಂಗೇರ ಅವರ ಪತ್ನಿ ಶ್ವೇತಾ ಯಾನೆ ಅವರು 2011ರ ಮಾ.29ರಂದು ಹೆರಿಗೆಗೆಂದು ನಗರದ ದರ್ಬೆಯ ನಿಸರ್ಗ ಹೆಲ್ತ್ ಸೆಂಟರಿಗೆ ದಾಖಲಾಗಿದ್ದರು. ಮರುದಿನ ಅವರು ಗಂಡು ಮಗುವಿಗೆ ಜನ್ಮ ನೀಡುವ ವೇಳೆ ತೀವ್ರ ರಕ್ತಸ್ರಾವವಾಗಿತ್ತು. ಈ ವೇಳೆ ಅವರನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯುತ್ತಿದ್ದಾಗ ಮೃತಪಟ್ಟಿದ್ದರು. ಈ ಕುರಿತು ಮೃತಳ ಪತಿ ಗಣೇಶ್ ಬಂಗೇರ ಅವರು ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಆದರೆ 2017ರಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಈ ಪ್ರಕರಣವನ್ನು ವಜಾಗೊಳಿಸಿತ್ತು.ಇದನ್ನು ಪ್ರಶ್ನಿಸಿ ಗಣೇಶ್ ಬಂಗೇರ ಅವರು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ರಾಜ್ಯ ಗ್ರಾಹಕ ನ್ಯಾಯಾಲಯವು ಮರು ವಿಚಾರಣೆ ನಡೆಸುವಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ಆದೇಶಿಸಿತ್ತು.
₹10 ಲಕ್ಷ ಪರಿಹಾರದ ಜತೆಗೆ ಈ ಮೊತ್ತಕ್ಕೆ ಶೇ 6 ಬಡ್ಡಿಯಂತೆ ಪ್ರಕರಣ ದಾಖಲಾದ ದಿನದಿಂದ ವಸೂಲಾತಿಯವರೆಗೆ ನೀಡಬೇಕು ಎಂದು ಆದೇಶಿಸಿದೆ. ದೂರುದಾರರ ಪರವಾಗಿ ವಕೀಲರಾದ ಹರೀಶ್ ಕುಮಾರ್ ಬಳಕ್ಕ, ದೀಪಕ್ ಬೊಳುವಾರು, ಭುವನೇಶ್ವರಿ ಎಂ, ಪಿ.ವಿಷೀಕಾ ಅವರು ವಾದಿಸಿದ್ದರು.