ಪುಷ್ಪ 2: ಕಾಲ್ತುಳಿತ ದುರಂತ – ಬಾಲಕನ ಸ್ಥಿತಿ ಗಂಭೀರ

Pushpa 2 : ಅಲ್ಲು ಅರ್ಜುನ್ ನಟನೆಯ ಸೂಪರ್ ಹಿಟ್ ಸಿನಿಮಾ ಪುಷ್ಪ- 2 ಬಿಡುಗಡೆಯ ಸಂದರ್ಭದಲ್ಲಿ ಆಯೋಜಿಸಲಾದ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಈ ದುರಂತ ಘಟನೆಯಲ್ಲಿ ಮಹಿಳೆಯೊಬ್ಬಳು ಮೃತಪಟ್ಟಳು. ಅಲ್ಲದೆ, ಆಕೆಯ ಮಗ ಶ್ರೀ ತೇಜ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ಆ ಬಾಲಕನಿಗೆ ಆರಂಭದಲ್ಲಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ಅಂತಿಮವಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಇಂದಿಗೆ 100 ದಿನವಾಗಿದೆ. ಈ ಸಂದರ್ಭದಲ್ಲಿ, ಅಲ್ಲಿನ ವೈದ್ಯರು ಬಾಲಕನ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ಆ ಬಾಲಕನಿಗೆ ಇನ್ನೂ ನರವೈಜ್ಞಾನಿಕ ಸಮಸ್ಯೆಗಳಿವೆ ಎಂದು ಹೇಳಿದ್ದಾರೆ.

ಆ ಬಾಲಕನಿಗೆ ಇನ್ನೂ ಸ್ಪರ್ಶದ ಅನುಭವ ಆಗುತ್ತಿಲ್ಲ. ಯಾರಾದರೂ ಮುಟ್ಟಿದರೆ ಅದಕ್ಕೆ ಪ್ರತಿಕ್ರಿಯಿಸುತ್ತಿಲ್ಲ. ಅಲ್ಲದೆ, ಆತನಿಗೆ ಯಾರನ್ನೂ ಗುರುತಿಸಲು ಸಾಧ್ಯವಾಗುತ್ತಿಲ್ಲ. ಅದೇ ರೀತಿ, ನಾವು ಮಾತನಾಡುವ ಪದಗಳನ್ನು ಸಹ ಅರ್ಥಮಾಡಿಕೊಳ್ಳಲು ಆತನಿಗೆ ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಈ ವಿಚಾರವನ್ನು ಕೇಳಿ ಬಾಲಕನ ತಂದೆ ಮತ್ತು ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದಾರೆ. ಮಗನ ಚೇತರಿಕೆಗಾಗಿ ಎಲ್ಲಾ ದೇವರ ಬಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇನ್ನು ಆ ಬಾಲಕನ ಆಸ್ಪತ್ರೆಯ ವೆಚ್ಚವನ್ನು ಅಲ್ಲು ಅರ್ಜುನ್ ತಂಡವು ಭರಿಸುತ್ತಿದೆ ಎಂದು ಆತನ ತಂದೆ ಭಾಸ್ಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಂದಹಾಗೆ ಅಲ್ಲು ಅರ್ಜುನ್ ನಾಯಕನಾಗಿ ನಟಿಸಿದ ಪುಷ್ಪ ಭಾಗ 2, 1800 ಕೋಟಿಗೂ ಹೆಚ್ಚು ಸಂಗ್ರಹದೊಂದಿಗೆ ಸೂಪರ್ ಹಿಟ್ ಆಯಿತು. ಈ ಸಿನಿಮಾ ಟಾಲಿವುಡ್ನಲ್ಲಿ ಮಾತ್ರವಲ್ಲದೆ ಬಾಲಿವುಡ್ನಲ್ಲೂ ಅನೇಕ ದಾಖಲೆಗಳನ್ನು ಮುರಿಯಿತು.
ಅಂದು ನಡೆದಿದ್ದೇನು?
ಡಿಸೆಂಬರ್ 4ರಂದು ಪುಷ್ಪ 2 ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಈ ವೇಳೆ ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್ ಭೇಟಿ ನೀಡಿದರು. ಹೀಗಾಗಿ ಅವರನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿತು. ಈ ವೇಳೆ ಕುಟುಂಬ ಸಮೇತ ಸಿನಿಮಾ ವೀಕ್ಷಿಸಲು ಬಂದಿದ್ದ ರೇವತಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟರು. ಅವರ ಮಗ ಶ್ರೀತೇಜ್ ಗಂಭೀರ ಗಾಯಗೊಂಡರು. ಚಿತ್ರಮಂದಿರಕ್ಕೆ ಭೇಟಿ ನೀಡುವ ವೇಳೆ ಅಲ್ಲು ಅರ್ಜುನ್ ಅವರು ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಹೈದರಬಾರದ್ ಪೊಲೀಸರು ನೇರವಾಗಿ ಅಲ್ಲು ಅರ್ಜುನ್ ಮನೆಗೆ ಹೋಗಿ ಬಂಧನ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಂಧನದ ಬಳಿಕ ಅಧೀನ ನ್ಯಾಯಾಲಯ ಅಲ್ಲು ಅರ್ಜುನ್ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ, ಅಲ್ಲು ಅರ್ಜುನ್ ಫ್ಯಾಮಿಲಿ ಹೈಕೋರ್ಟ್ ಮೆಟ್ಟಿಲೇರಿ ಜಾಮೀನು ಪಡೆದುಕೊಂಡಿತು. ಆದಾಗ್ಯೂ ನಮಗೆ ಯಾವುದೇ ಆರ್ಡರ್ ಬಂದಿಲ್ಲ ಎಂದು ಹೇಳಿ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಒಂದು ರಾತ್ರಿ ಜೈಲಿನಲ್ಲೇ ಇರಿಸಿಕೊಂಡು ಮಾರನೇ ದಿನ ಬಿಡುಗಡೆ ಮಾಡಿದರು. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿತ್ತು.
