ಮರೋಳಿ ಭಾಗಕ್ಕೆ ಬಸ್ ಸೌಲಭ್ಯಕ್ಕಾಗಿ ಸಾರ್ವಜನಿಕ ಹೋರಾಟ: ಆರ್ಟಿಓಗೆ ಮನವಿ

ಮಹಾನಗರ: ಮರೋಳಿ ಭಾಗಕ್ಕೆ ಬಸ್ ಬೇಕು ಎಂದು ಸ್ಥಳೀಯರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಲೇ ಬರುತ್ತಿದ್ದು, ಇನ್ನೂ ಈಡೇರಿಲ್ಲ. ಉಪ ಲೋಕಾಯುಕ್ತರು, ಜಿಲ್ಲಾಧಿಕಾರಿ, ಆರ್ಟಿಒ, ಪೊಲೀಸ್ ಆಯುಕ್ತರು ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಬಸ್ ಬರಲೇ ಇಲ್ಲ !
ಪಡೀಲ್-ಕೈಕಂಬ ಮಧ್ಯ ಭಾಗದಲ್ಲಿ ಮರೋಳಿ ಪ್ರದೇಶ ಇದ್ದು, ಬಸ್ನಲ್ಲಿ 14 ರೂ.ಗೆ ಆಗುವ ಪ್ರಯಾಣಕ್ಕೆ ಎರಡು ಪಟ್ಟು ಹಣ ಖರ್ಚು ಮಾಡಿ ಖಾಸಗಿ ವಾಹನಗಳಲ್ಲಿ ಹೋಗಬೇಕಾದ ಪರಿಸ್ಥಿತಿ ಈ ಭಾಗದ ಸಾರ್ವಜನಿಕರದ್ದು. ಕೋವಿಡ್ ನೆಪದಲ್ಲಿ ಸುಮಾರು ನಾಲ್ಕು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಸಿಟಿ ಬಸ್ಗಳು ಇನ್ನೂ ಕಾರ್ಯಾಚರಣೆ ಆರಂಭಗೊಂಡಿಲ್ಲ.
ಸ್ಟೇಟ್ಬ್ಯಾಂಕ್ – ಬಿಕರ್ನಕಟ್ಟೆ – ಪಡೀಲ್ – ಅಡ್ಯಾರ್ ಕಡೆಗೆ ಐದು ಖಾಸಗಿ ಬಸ್ಗಳು (ರೂಟ್ ನಂ.30-2 ಬಸ್, 30 ಬಿ-2ಬಸ್, 37-1 ಬಸ್) ಮತ್ತು ಸುರತ್ಕಲ್-ನಂತೂರು-ಮರೋಳಿ-ಮಂಗಳೂರು ರೈಲ್ವೇ ಜಂಕ್ಷನ್ (ರೂಟ್ ನಂ. 62 ಎ-1ಬಸ್) ನಡುವಣ ಅನೇಕ ವರ್ಷಗಳಿಂದ ಬಸ್ ಸಂಚರಿಸುತ್ತಿತ್ತು. ಸದ್ಯ ರೂಟ್ನಲ್ಲಿ ಖಾಸಗಿ ಬಸ್ ಮಾತ್ರ ಸಂಚಾರ ಮಾಡುತ್ತಿಲ್ಲ. ಸಾರ್ವಜನಿಕರ ಒತ್ತಡದ ಮೇರೆಗೆ 2022ರಿಂದ 2 ಕೆಎಸ್ಸಾರ್ಟಿಸಿ ಬಸ್ಗಳು ತಾತ್ಕಾಲಿಕ ಪರವಾನಿಗೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಸಾರ್ವಜನಿಕರಿಂದ ಒತ್ತಡ ಬಂದಾಗ ಒಂದು ಖಾಸಗಿ ಬಸ್ಗಳು ಕಾರ್ಯಾಚರಣೆ ಆರಂಭಿಸಿತು. ಆದರೆ ಕೆಲವೇ ತಿಂಗಳಲ್ಲಿ ಅದೂ ಸ್ಥಗಿತಗೊಂಡಿತ್ತು.
ಸ್ಥಳೀಯರಾದ ವಾಲ್ಟರ್ ಪಿಂಟೋ ‘ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಮರೋಳಿ ಭಾಗಕ್ಕೆ ಬಸ್ ಸೌಲಭ್ಯ ಬೇಕು ಎನ್ನುವುದು ನಮ್ಮ ಹಲವು ವರ್ಷಗಳ ಹೋರಾಟ, ಇನ್ನೂ ಪರಿಹಾರ ಸಿಕ್ಕಿಲ್ಲ. ಪರವಾನಿಗೆ ಹೊಂದಿದ 6 ಖಾಸಗಿ ಬಸ್ಗಳು ಸಂಚರಿಸದೆ ಸಮಸ್ಯೆ ಉಂಟಾಗುತ್ತಿದೆ. ಬಸ್ಸನ್ನೇ ನಂಬಿಕೊಂಡಿರುವ ನೌಕರರು, ಕಾರ್ಮಿಕರು, ಹಿರಿಯ ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ದೈನಂದಿನ ಕೆಲಸಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ಕಷ್ಟವಾಗಿದೆ. ಈಗಾಗಲೇ ಆರ್ಟಿಒಗೆ ಹಲವು ಬಾರಿ ಮನವಿ ಮಾಡಿದ್ದು, ಪರವಾನಿಗೆ ಹೊಂದಿದ ಬಸ್ಗಳು ಮರು ಸಂಚರಿಸಬೇಕು. ಮರೋಳಿ ಶ್ರೀ ಸೂರ್ಯ ನಾರಾಯಣ ಕ್ಷೇತ್ರಕ್ಕೆ ಬಸ್ ಸಂಪರ್ಕ ಕಲ್ಪಿಸಿದರೆ ಆ ಭಾಗದ ಪ್ರಯಾಣಿಕರಿಗೂ ಅನುಕೂಲವಾದೀತು, ಆದಾಯವೂ ಹೆಚ್ಚಾಗುತ್ತದೆ’ ಎನ್ನುತ್ತಾರೆ.
ಸಂಚರಿಸದಿದ್ದರೆ ಪರವಾನಿಗೆ ರದ್ದುಗೊಳಿಸಿ
ಮನೋಹರ ದೇವಸ್ಯ ಅವರು ಪ್ರತಿಕ್ರಿಯಿಸಿ “ಕೋವಿಡ್ ಸಮಯದಿಂದ ಖಾಸಗಿ ಬಸ್ ಸಂಚಾರ ಸ್ಥಗಿತ ಗೊಂಡಿದೆ. ಈ ವೇಳೆ ನಮ್ಮ ಬೇಡಿಕೆ ಹೆಚ್ಚಾದಂತೆ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಸಭೆ ನಡೆಸಿದ್ದರು. ಬಳಿಕ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭಗೊಂಡಿತ್ತು. ಆ ವೇಳೆ ಕೆಲವೊಂದು ಖಾಸಗಿ ಬಸ್ ಒಂದು ವಾರ ಸಂಚಾರ ಆರಂಭಿಸಿ ಬಳಿಕ ಸ್ಥಗಿತಗೊಂಡಿತ್ತು. ಸಂಚಾರ ನಿಲ್ಲಿಸಿದ ಖಾಸಗಿ ಬಸ್ಗಳ ಪರವಾನಿಗೆ ರದ್ದುಗೊಳಿಸಲಿ. ಆ ಪರವಾನಿಗೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಓಡಲಿ’ ಎಂದು ಹೇಳುತ್ತಾರೆ.
ಕೆಎಸ್ಸಾರ್ಟಿಸಿ ಬಸ್ಸಿದ್ದು ತಾತ್ಕಾಲಿಕ ಪರ್ಮಿಟ್ !
ಪರಂಗಿಪೇಟೆಯಿಂದ – ಪಡೀಲ್ – ಮರೋಳಿ – ಬಂಟ್ಸ್ಹಾಸ್ಟೆಲ್ ಮೂಲಕ ಸ್ಟೇಟ್ಬ್ಯಾಂಕ್ಗೆ ಮತ್ತು ಮಧ್ಯಾಹ್ನ ವೇಳೆ ರೈಲು ಬರುವ ಸಮಯದಲ್ಲಿ ಜಂಕ್ಷನ್ ರೈಲು ನಿಲ್ದಾಣದಿಂದ ಪಡೀಲ್ – ಮರೋಳಿ, ಬಂಟ್ಸ್ ಹಾಸ್ಟೆಲ್-ಸ್ಟೇಟ್ಬ್ಯಾಂಕ್ಗೆ ಸದ್ಯ ಕೆಎಸ್ಸಾರ್ಟಿಸಿ ಬಸ್ ಇದ್ದು, ತಾತ್ಕಾಲಿಕ ಪರವಾನಿಗೆ ಯಲ್ಲಿ ಕಾರ್ಯಾಚರಿಸುತ್ತಿದೆ. ಒಂದೇ ಬಸ್ ಇರುವ ಕಾರಣ ಯಾವಾಗಲೂ ರಶ್ ಇರುತ್ತದೆ. ಕೆಲವು ಸಮಯದಲ್ಲಿ ಈ ಬಸ್ಸೂ ಇರುವುದಿಲ್ಲ. ಹೀಗಿದ್ದಾಗ ಸರಕಾರಿ ಬಸ್ಗಿರುವ ತಾತ್ಕಾಲಿಕ ಪರವಾನಿಗೆಯನ್ನು ಖಾಯಂ ನೆಲೆಯಲ್ಲಿ ಮಂಜೂರು ಮಾಡಬೇಕು ಎಂದು ಸಾರ್ವಜನಿಕರು ಮಂಗಳೂರು ಉಪ ಸಾರಿಗೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಪರವಾನಿಗೆ ರದ್ದತಿಗೆ ನೋಟಿಸ್
ಮರೋಳಿ ಭಾಗಕ್ಕೆ ಸಂಚರಿಸುತ್ತಿದ್ದ ಖಾಸಗಿ ಬಸ್ಗಳು ಹಲವು ವರ್ಷಗಳಿಂದ ಸಂಚರಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಆ ಬಸ್ಗಳಿಗಿರುವ ಪರವಾನಿಗೆ ರದ್ದುಗೊಳಿಸುತ್ತೇವೆ ಎಂದು ಖಾಸಗಿ ಬಸ್ಗಳಿಗೆ ನೋಟಿಸ್ ನೀಡಲಾಗಿದೆ. ಈ ಕುರಿತು ವಿಚಾರಣೆ ನಡೆಸಿ, ಅವರು ಬಸ್ ಓಡಿಸದಿದ್ದರೆ ಪರವಾನಿಗೆ ರದ್ದುಗೊಳಿಸುತ್ತೇವೆ. ಬಳಿಕ ಆ ಪರವಾನಿಗೆಯನ್ನು ಕೆಎಸ್ಸಾರ್ಟಿಸಿಗೆ ನೀಡಲು ಅವಕಾಶ ದೊರಕುತ್ತದೆ.
-ಶ್ರೀಧರ್ ಮಲ್ಲಾಡ್, ಮಂಗಳೂರು ಆರ್ಟಿಒ