ಖಾಸಗಿ ಬಸ್ ಡಿಕ್ಕಿ : ಧರ್ಮಸ್ಥಳಕ್ಕೆ ತೆರಳುತ್ತಿದ್ದ ಇಬ್ಬರು ಪಾದಯಾತ್ರಿಗಳ ದುರ್ಮರಣ.

ಕಿಕ್ಕೇರಿ : ಖಾಸಗಿ ಬಸ್ ಡಿಕ್ಕಿಯಾಗಿ ಧರ್ಮಸ್ಥಳ ಕ್ಷೇತ್ರಕ್ಕೆ ಪಾದಯಾತ್ರೆ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆಂಚಟ್ಟಹಳ್ಳಿ ಬಳಿ ನಡೆದಿದೆ.
ಆನೆಗೊಳ ಗ್ರಾಮದ ಚಾಮರಾಜ್ ಪುತ್ರ ಬಿ.ಸಿ.ಸುರೇಶ್ (60) ಹಾಗೂ ನರಸಿಂಹೇಗೌಡರ ಪುತ್ರ ಕುಮಾರ್ (55) ಮೃತಪಟ್ಟವರು.
ನಾಲ್ವರು ಯಾತ್ರಿಗಳು ಶನಿವಾರ ಸಂಜೆ ಆನೆಗೊಳದಿಂದ ಪಾದಯಾತ್ರೆ ಆರಂಭಿಸಿ ಶಿವರಾತ್ರಿಗೆ ಧರ್ಮಸ್ಥಳಕ್ಕೆ ತಲುಪಲು ನಿಶ್ಚಯಿಸಿಕೊಂಡಿದ್ದರು. ಶನಿವಾರ ರಾತ್ರಿ ಹಾಸನ ಜಿಲ್ಲೆ ಶಾಂತಿ ಗ್ರಾಮದ ಟೋಲ್ ಬಳಿ ತಂಗಿದ್ದರು. ಭಾನುವಾರ ಮುಂಜಾನೆ ಯಾತ್ರೆ ಆರಂಭಿಸಿ ಕೆಂಚಟ್ಟಹಳ್ಳಿ ಬಳಿ ಸಾಗುವಾಗ ತಮಿಳುನಾಡಿನ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ..
ಬಿ.ಸಿ.ಸುರೇಶ್ ಮರಾಠ ಸಮಾಜದವರಾಗಿದ್ದು ಗ್ರಾಮದಲ್ಲಿ ಚಿಲ್ಲರೆ ಅಂಗಡಿ ವ್ಯಾಪಾರ ಮಾಡುತ್ತಿದ್ದರು. ಕುಮಾರ್ ಅಕ್ಕಿಗಿರಣಿ ವ್ಯಾಪಾರಿಯಾಗಿದ್ದರು. ಮತ್ತೋರ್ವ ಗಂಭೀರ ಗಾಯಗೊಂಡಿರುವ ದಿನೇಶ್ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇವರ ಜೊತೆಯಲ್ಲಿದ್ದ ಅಶ್ವಥ್ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮೃತ ವ್ಯಕ್ತಿಗಳಾದ ಬಿ.ಸಿ.ಸುರೇಶ್ ಹಾಗೂ ಕುಮಾರ್ ಶವವನ್ನು ಆನೆಗೊಳ ಗ್ರಾಮಕ್ಕೆ ತಂದು ಮೃತರ ತೋಟದಲ್ಲಿ ಭಾನುವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು..