ಅರ್ಚಕನಿಂದ ಮಹಿಳೆಗೆ ಬ್ಲಾಕ್ಮೇಲ್, ಲೈಂಗಿಕ ದೌರ್ಜನ್ಯ ಯತ್ನ: ಬೆಂಗಳೂರಿನಲ್ಲಿ ಬಂಧನ

ಬೆಂಗಳೂರು: ಮಹಿಳೆಯ ಖಾಸಗಿ ವಿಡಿಯೋ ಇಟ್ಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದ ದೇವಾಲಯದ ಅರ್ಚಕನನ್ನು ಬೆಳ್ಳಂದೂರು ಪೊಲೀಸುರ ಬಂಧಿಸಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓರ್ವನನ್ನು ಬಂಧಿಸಿದ್ದು, ಮುಖ್ಯ ಅರ್ಚಕ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಅರ್ಚಕನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ಆರೋಪಿ ಅರುಣ್ ಕೇರಳದ ತ್ರಿಶೂರ್ ನ ಪ್ರತಿಷ್ಠಿತ ಪೆರಿಗೊಟ್ಟುಕ್ಕಾರ ದೇವಾಲಯದ ಅರ್ಚಕ ಎಂದು ತಿಳಿದು ಬಂದಿದೆ. ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದಾನೆ.
ಏನಿದು ಪ್ರಕರಣ?
ಪೂಜಾ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ತಮಗೆ ಮಾಟಮಂತ್ರ ಮಾಡಿಸಿದ್ದಾರೆ ಎಂದು ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಪೂಜಾ ಅವರಿಗೆ ದೇವಾಲಯದ ಅರ್ಚಕ ಅರುಣ್ ಪರಿಚಯ ಆಗಿದ್ದಾನೆ. 24 ಸಾವಿರ ರೂಪಾಯಿ ನೀಡಿದ್ರೆ ಪೂಜೆ ಮಾಡೋದಾಗಿ ಅರ್ಚಕ ಅರುಣ್ ಹೇಳಿದ್ದಾನೆ. ಫೋನ್ ಮಾಡಿದಾಗ ಪೂಜೆಗೆ ಬರಬೇಕೆಂದು ಅರ್ಚಕ ಅರುಣ್ ಹೇಳಿದ್ದನು. ಅರುಣ್ ಮಾತು ನಂಬಿದ ಪೂಜಾ ಆತನಿಗೆ ತಮ್ಮ ಮೊಬೈಲ್ ನಂಬರ್ ನೀಡಿದ್ದಾರೆ.
ಬೆತ್ತಲೆಯಾಗಿ ವಿಡಿಯೋ ಕಾಲ್
ಪೂಜಾ ಅವರ ನಂಬರ್ ಪಡೆದ ಅರ್ಚಕ ಅರುಣ್, ತಡರಾತ್ರಿಯಲ್ಲಿ ನಿರಂತರವಾಗಿ ವಾಟ್ಸಪ್ ಕರೆ ಮಾಡಿದ್ದಾರೆ. ರಾತ್ರಿ ಬೆತ್ತಲೆಯಾಗಿ ಪೂಜಾ ಅವರಿಗೆ ಅರ್ಚಕ ಕರೆ ಮಾಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ನಿಮಗೆ ಮಾಡಿರೋ ಮಾಟಮಂತ್ರ ಹೋಗಬೇಕು ಅಂದ್ರೆ ಬೆತ್ತಲಾಗುವಂತೆ ಒತ್ತಾಯಿಸುತ್ತಿದ್ದನು. ಅರ್ಚಕ ಅರುಣ್ ಬೆದರಿಕೆಯಿಂದ ಮಹಿಳೆ ವಿಡಿಯೋ ಕಾಲ್ನಲ್ಲಿ ಬೆತ್ತಲೆಯಾಗಿದ್ದರು. ಇದನ್ನೇ ರೆಕಾರ್ಡ್ ಮಾಡಿಕೊಂಡಿದ್ದ ಅರುಣ್, ಕರೆದಾಗಲೆಲ್ಲಾ ಕೇರಳಕ್ಕೆ ಬರಬೇಕು. ಇಲ್ಲವಾದ್ರೆ ವಿಡಿಯೋ ಲೀಕ್ ಮಾಡೋದಾಗಿ ಬೆದರಿಕೆ ಹಾಕಿದ್ದನು.
ಮಾಟಮಂತ್ರ ರಿವರ್ಸ್ ಮಾಡೋದಾಗಿ ಬೆದರಿಕೆ
ಕೇರಳಕ್ಕೆ ಬರುವಾಗ ಮುಂಚಿತವಾಗಿ ಹೇಳು ರೂಮ್ ಬುಕ್ ಮಾಡುತ್ತೇನೆ ಎಂದು ಮಹಿಳೆಗೆ ಅಸಭ್ಯವಾಗಿ ಮೆಸೇಜ್ ಕಳುಹಿಸುತ್ತಿದ್ದನು. ಅರ್ಚಕ ಅರುಣ್ ಹಿಂಸೆ ತಾಳಲಾರದೇ ಪೂಜಾ ಒಮ್ಮೆ ಕೇರಳಕ್ಕೂ ಹೋಗಿದ್ದರು. ಈ ವೇಳೆ ಮಹಿಳೆಯನ್ನು ಕಾರ್ನಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಅರುಣ್ ಜೊತೆ ಸೇರಿ ಮುಖ್ಯ ಅರ್ಚಕ ಉನ್ನಿ ದಾಮೋದರ್ ಸಹ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಹೇಳಿದಂತೆ ಕೇಳದಿದ್ದರೆ ಮಾಟಮಂತ್ರವನ್ನು ನಿನ್ನ ಮಕ್ಕಳಿಗೆ ರಿವರ್ಸ್ ಆಗುವಂತೆ ಮಾಡುತ್ತೆ ಎಂದು ಹೆದರಿಸಿದ್ದಾರೆ.
ಅರುಣ್ ಮತ್ತು ಮುಖ್ಯ ಅರ್ಚಕ ಉನ್ನಿ ದಾಮೋದರ್ ಕಿರುಕುಳದಿಂದ ಬೇಸತ್ತ ಪೂಜಾ, ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಓರ್ವನನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಬಲೆ ಬೀಸಿದ್ದಾರೆ.