ಪ್ರಶಾಂತ್ ನೀಲ್ ‘ಡ್ರ್ಯಾಗನ್’ ಸಿನಿಮಾ ಸಂಭಾವನೆ: ಲಾಭದಲ್ಲಿ 50% ಪಾಲು ಕೇಳಿದ್ರಾ ನೀಲ್?

ಡಿಮ್ಯಾಂಡ್ಗೆ ತಕ್ಕಂತೆ ರೇಟ್ ಫಿಕ್ಸ್ ಆಗುತ್ತೆ. ಕನ್ನಡ ನಿರ್ದೇಶಕ ಪ್ರಶಾಂತ್ ನೀಲ್ ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದಾರೆ. ‘ಕೆಜಿಎಫ್’ ಸರಣಿ ಬಳಿಕ ‘ಸಲಾರ್’ ಸಿನಿಮಾ ಕಟ್ಟಿಕೊಟ್ಟು ಗೆದ್ದರು. ಈಗ ‘ಡ್ರ್ಯಾಗನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಜ್ಯೂ. ಎನ್ಟಿಆರ್ ನಟನೆಯ ಆಕ್ಷನ್ ಥ್ರಿಲ್ಲರ್ ‘ಡ್ರ್ಯಾಗನ್’ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಸದ್ಯ ತಾರಕ್ ‘ವಾರ್-2’ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ‘ಡ್ರ್ಯಾಗನ್’ ಚಿತ್ರದಿಂದ ಬಿಡುವು ಪಡೆಯುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಹಾಗೂ ಎನ್ಟಿಆರ್ ಆರ್ಟ್ಸ್ ಬ್ಯಾನರ್ಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಒಂದು ಶೆಡ್ಯೂಲ್ ಚಿತ್ರೀಕರಣವಾಗಿತ್ತು. ಬಳಿಕ ಚಿತ್ರತಂಡ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸೆಟ್ ಹಾಕಿ ಒಂದಷ್ಟು ದೃಶ್ಯಗಳನ್ನು ಸೆರೆಹಿಡಿದಿತ್ತು.
ಬಹಳ ಹಿಂದೆ ಘೋಷಣೆಯಾಗಿದ್ದ NTR31 ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಲೇ ಬಂದಿತ್ತು. ವರ್ಷದ ಹಿಂದೆ ಸೆಟ್ಟೇರಿದ್ದ ಸಿನಿಮಾ ಇತ್ತೀಚೆಗೆ ಚಿತ್ರೀಕರಣ ಆರಂಭಿಸಿತ್ತು. ಮುಂದಿನ ವರ್ಷ ಸಂಕ್ರಾಂತಿಗೆ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಹೇಳಿತ್ತು. ಆದರೆ ಸಿನಿಮಾ ಚಿತ್ರೀಕರಣ ತಡವಾಗಿ ಮುಂದಿನ ವರ್ಷ ಜೂನ್ 25ಕ್ಕೆ ಸಿನಿಮಾ ತೆರೆಗೆ ತರುವುದಾಗಿ ಹೇಳಿದ್ದಾರೆ. ತೆಲುಗು ನಟ ಜ್ಯೂ. ಎನ್ಟಿಆರ್ ತಮ್ಮ ಇಂಟೆನ್ಸ್ ಆಕ್ಟಿಂಗ್ಗಾಗಿ ಜನಪ್ರಿಯರಾಗಿದ್ದಾರೆ. ಪ್ರಶಾಂತ್ ನೀಲ್ ಎಲಿವೇಷನ್ ಸೀನ್ಸ್ಗಳಲ್ಲಿ ಯಂಗ್ ಟೈಗರ್ ಆರ್ಭಟ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಪ್ರಶಾಂತ್ ನೀಲ್ ನೆಚ್ಚಿನ ನಟ ತಾರಕ್. ಹಾಗಾಗಿ ಡ್ರ್ಯಾಗನ್ ಸಿನಿಮಾ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಬಹುಕೋಟಿ ವೆಚ್ಚದಲ್ಲಿ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ಮಾಣವಾಗುತ್ತಿದೆ. ಅದಕ್ಕೆ ತಕ್ಕಂತೆ ತಾರಕ್, ಪ್ರಶಾಂತ್ ನೀಲ್ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಭಾರೀ ಸಂಭಾವನೆ ಪಡೆಯುತ್ತಿರುವ ನೀಲ್, ಲಾಭದಲ್ಲಿ ಕೂಡ ಪಾಲು ಕೇಳುತ್ತಿದ್ದಾರೆ ಎಂದು ಟಾಲಿವುಡ್ನಲ್ಲಿ ಗುಲ್ಲಾಗಿದೆ. ಸಂಭಾವನೆ ಜೊತೆಗೆ ಲಾಭದಲ್ಲಿ 50% ರಷ್ಟು ಪಾಲು ಕೇಳುತ್ತಿದ್ದಾರೆ, ಅದಕ್ಕೆ ನಿರ್ಮಾಪಕರೂ ಒಪ್ಪಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.
ಲಾಭದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ 50% ರಷ್ಟು ಪಾಲು ಪಡೆದರೆ ಎರಡೂ ನಿರ್ಮಾಣ ಸಂಸ್ಥೆಗಳಿಗೆ ತಲಾ 25% ರಷ್ಟು ಪಾಲು ಸಿಗುತ್ತದೆ. ಈ ಸಂಬಂಧ ಮಾತುಕತೆ ಆಗಿದೆ ಎಂದು ತೆಲುಗು ವೆಬ್ಸೈಟ್ಗಳು ವರದಿ ಮಾಡಿವೆ.
‘ಡ್ರ್ಯಾಗನ್’ ಚಿತ್ರಕ್ಕಾಗಿ ತಾರಕ್ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಸಹೋದರ ಕಲ್ಯಾಣ್ ರಾಮ್ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಈ ಸಿನಿಮಾ ಬಳಿಕ ಪ್ರಭಾಸ್ ನಟನೆಯ ‘ಸಲಾರ್- 2’ ಚಿತ್ರವನ್ನು ನೀಲ್ ನಿರ್ದೇಶನ ಮಾಡಬೇಕಿದೆ. ಆ ಬಳಿಕ ರಾಮ್ಚರಣ್ ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರೆ ಎಂದು ಗುಲ್ಲಾಗಿದೆ.
‘ಕೆಜಿಎಫ್’-2 ಬಳಿಕ ನೀಲ್ ಕನ್ನಡ ಬಿಟ್ಟು ತೆಲುಗು ಚಿತ್ರರಂಗಕ್ಕೆ ಹೋಗಿದ್ದು ಕನ್ನಡ ಸಿನಿಪ್ರೇಮಿಗಳಿಗೆ ನಿರಾಸೆ ತಂದಿದೆ. ಕನ್ನಡದಲ್ಲೇ ಪ್ರಶಾಂತ್ ಸಿನಿಮಾಗಳನ್ನು ಮಾಡಬಹುದಿತ್ತು. ನಮ್ಮಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ರೆ ಆಗುವುದಿಲ್ಲವೇ? ಎಂದು ಕೇಳುವವರು ಇದ್ದಾರೆ. ಈಗಾಗಲೇ ಯಶ್ ಕಾಂಬಿನೇಷನ್ನಲ್ಲೇ ‘ಕೆಜಿಎಫ್’-3 ಸಿನಿಮಾ ಕೂಡ ಘೋಷಣೆ ಆಗಿದೆ. ಮತ್ತೆ ರಾಕಿ ಭಾಯ್ ಜೊತೆ ಕೈ ಜೋಡಿಸಲು ನೀಲ್ ವಾಪಸ್ ಬರುವ ಸಾಧ್ಯತೆಯಿದೆ.