ಕಳಪೆ ಕಾಮಗಾರಿ: ಕೊಳ್ಳೇಗಾಲದ ಹೆದ್ದಾರಿ ಮೇಲ್ಸೇತುವೆ ಕುಸಿತ, ಸಂಚಾರ ಬಂದ್

ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಉತ್ತಂಬಳ್ಳಿ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ-948ರ ಮೇಲ್ಸೇತುವೆ ಕೆಳಭಾಗದ ತಡೆಗೋಡೆ ಭಾನುವಾರ ಕುಸಿದಿದೆ. ಪರಿಣಾಮ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ತಿಳಿಸಲಾಗಿದೆ.

ಈ ಹೆದ್ದಾರಿಯು ಬೆಂಗಳೂರು, ಮೈಸೂರು, ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತದೆ. ಬೆಳಿಗ್ಗೆ 10.55ರ ವೇಳೆಗೆ ಕುಸಿಯಿತು. ಸಂಚಾರ ನಿರ್ಬಂಧಿಸಿ ರಸ್ತೆಗೆ ಅಡ್ಡಲಾಗಿ ಹಗ್ಗ ಕಟ್ಟಿ ಎಚ್ಚರಿಕೆ ಫಲಕ ಅಳವಡಿಸಲಾಯಿತು.
‘ಕಾಮಗಾರಿ ಮುಗಿದು ಆರು ತಿಂಗಳಲ್ಲೇ ತಡೆಗೋಡೆ ಭಾಗ ಕುಸಿದಿದ್ದು, ಕಳಪೆ ಕಾಮಗಾರಿ, ಮಣ್ಣು ಬಳಕೆ ಇದಕ್ಕೆ ಕಾರಣವಾಗಿದೆ. ತನಿಖೆ ನಡೆಸಬೇಕು’ ಎಂದು ರೈತ ಮುಖಂಡ ಮಹೇಶ್ ಕುಮಾರ್ ಒತ್ತಾಯಿಸಿದ್ದಾರೆ.
ಶಾಸಕ ಎ.ಆರ್.ಕೃಷ್ಣಮೂರ್ತಿ ಸ್ಥಳಕ್ಕೆ ಭೇಟಿ ನೀಡಿದ್ದು, ‘ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಸೇತುವೆ ಪುನರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.
ತಾಲ್ಲೂಕಿನ ಉತ್ತಂಬಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಕೆಳ ತಡೆಗೋಡೆ ಕುಸಿದ ಪರಿಣಾಮ ರಸ್ತೆಯಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು