ಪಂಜಾಬ್ ರಾಜಕೀಯದಲ್ಲಿ ಸಂಚಲನ: ಮಾಜಿ ಸಚಿವೆ ರಜಿಯಾ ಸುಲ್ತಾನ, ಮಾಜಿ ಡಿಜಿಪಿ ಪತಿ ವಿರುದ್ಧ ಮಗನ ಕೊಲೆ ಪ್ರಕರಣ ದಾಖಲು!

ಚಂಡೀಗಢ: ಪಂಜಾಬ್ನ ರಾಜಕೀಯ ಹಾಗೂ ಪೊಲೀಸ್ ವಲಯಯದಲ್ಲೇ ಬೆಚ್ಚಿಬೀಳಿಸುವ ಪ್ರಕರಣವೊಂದರಲ್ಲಿ ಮಾಜಿ ಸಚಿವೆ ರಜಿಯಾ ಸುಲ್ತಾನ (Razia Sultana) ಹಾಗೂ ಅವರ ಪತಿ ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ (Mohammed Mustafa) ವಿರುದ್ಧ ಮಗನನ್ನೇ ಹತ್ಯೆಗೈದ ಪ್ರಕರಣ ದಾಖಲಾಗಿದೆ. ಪುತ್ರ ಅಖಿಲ್ ಅಖ್ತರ್ (33) ಸಾವಿನ ಹಲವು ದಿನಗಳ ನಂತರ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಬಳಿಕ ಕೊಲೆ ಪ್ರಕರಣ ದಾಖಲಾಗಿದೆ.

ಹೌದು. ಅಖಿಲ್ ಅಖ್ತರ್ (Aqil Akhtar) ನಿಗೂಢವಾಗಿ ಮೃತಪಟ್ಟ ಪ್ರಕರಣ ಈಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಅಖಿಲ್ ಅಖ್ತರ್ ಗುರುವಾರ ತಡರಾತ್ರಿ ಪಂಚಕುಲದ ತಮ್ಮ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕುಟುಂಬ ಸದಸ್ಯರು ಅವರನ್ನ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ವೈದ್ಯರು ಅವರನ್ನ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಮಿತಿಮೀರಿದ ಡ್ರಗ್ಸ್ ಸೇವನೆಯಿಂದ ಅಖಿಲ್ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಹೇಳಿಕೊಂಡಿದೆ. ಯಾವುದೋ ಔಷಧ ಸೇವನೆಯಿಂದ ಆರೋಗ್ಯ ಸಮಸ್ಯೆಗೊಳಗಾಗಿ ಅಖಿಲ್ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ಹೇಳಿದ್ದರು.
ಮಗನ ಹೆಂಡ್ತಿ ಜೊತೆಯೇ ಅಕ್ರಮ ಸಂಬಂಧ
ಅಖಿಲ್ ಅಖ್ತರ್ ನಿಗೂಢವಾಗಿ ಮೃತಪಟ್ಟ ಬೆನ್ನಲ್ಲೇ ಅಖಿಲ್ ಪತ್ನಿ ಹಾಗೂ ಆತನ ತಂದೆ ಮಧ್ಯೆ ಅನೈತಿಕ ಸಂಬಂಧವಿತ್ತು ಎಂಬ ಆರೋಪಗಳು ಕೇಳಿಬಂದಿದೆ. ಅಖಿಲ್ ರೆಕಾರ್ಡ್ ಮಾಡಿದ್ದ ಹಳೆಯ ವಿಡಿಯೋವೊಂದು ವೈರಲ್ (Old Video Viral) ಆದ ಪ್ರಕರಣಕ್ಕೆ ಈ ತಿರುವು ಸಿಕ್ಕಿದೆ.
ವೀಡಿಯೊದಲ್ಲಿ, ʻನನ್ನ ತಂದೆ ಹಾಗೂ ನನ್ನ ಪತ್ನಿಯ ನಡ್ವೆ ಅನೈತಿಕ ಸಂಬಂಧವಿದೆ. ನಾನು ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದೇನೆ. ನನಗೇನು ಮಾಡಬೇಕೆಂದು ತೋಚುತ್ತಿಲ್ಲ. ಅವರು ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಬಹುದು ಎಂದು ನನಗೆ ಪ್ರತಿದಿನ ಆತಂಕವಾಗುತ್ತಿದೆ. ನನ್ನ ತಾಯಿ ರಜಿಯಾ, ಸಹೋದರಿ ನನ್ನ ವಿರುದ್ಧದ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ನನ್ನ ತಂದೆಗೆ ನನ್ನ ಮದುವೆಗೆ ಮುಂಚೆಯೇ ನನ್ನ ಪತ್ನಿಯ ಪರಿಚಯವಿತ್ತು ಎಂಬ ಅನುಮಾನ ನನಗಿದೆ. ಅವಳು ನನ್ನನ್ನ ಮದುವೆಯಾಗಲಿಲ್ಲ, ಅವಳು ನನ್ನ ತಂದೆಯನ್ನ ಮದುವೆಯಾದಳು. ನನ್ನ ಕುಟುಂಬದ ಸದಸ್ಯರು ನಾನು ಭ್ರಮೆಯಲ್ಲಿ ಬದುಕುತ್ತಿದ್ದೇನೆ ಎಂದು ಹೇಳುತ್ತಿದ್ದರು. ನನ್ನನ್ನ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ರು. ನಾನು ಮಾನಸಿಕವಾಗಿ ಸ್ಥಿರವಾಗಿಲ್ಲದಿದ್ದರೆ ನನ್ನನ್ನ ವೈದ್ಯರ ಬಳಿಗೆ ಕರೆದೊಯ್ಯಬೇಕಿತ್ತು. ಆದರೆ ಅವರು ನನ್ನನ್ನು ಪುನರ್ವಸತಿ ಕೇಂದ್ರಕ್ಕೆ ಕಳಹಿಸಿದರು ಎಂದು ಅಖಿಲ್ ವಿಡಿಯೋದಲ್ಲಿ ಆರೋಪಿಸಿದ್ದರು.
ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಉಪ ಪೊಲೀಸ್ ಆಯುಕ್ತೆ ಸೃಷ್ಟಿ ಗುಪ್ತಾ, ಅಖಿಲ್ ಕೇಸ್ನಲ್ಲಿ ಕುಟುಂಬದವರ ಪಾತ್ರ ಇದೆ ಅಂತ ನಮಗೆ ದೂರು ಬಂದಿತ್ತು. ಅವರ ಸೋಶಿಯಲ್ ಮೀಡಿಯಾ ಪೋಸ್ಟ್ಗಳು ಹಾಗೂ ಕೆಲ ವಿಡಿಯೋಗಳು ಇನ್ನಷ್ಟು ಅನುಮಾನ ಹುಟ್ಟುಹಾಕಿದವು. ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆಗೆ ವಿಶೇಷ ತಂಡವನ್ನೂ ಕೂಡ ರಚನೆ ಮಾಡಿದ್ದೇವೆ. ತನಿಖಾ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದರು.
ಮಲೇರ್ಕೋಟ್ಲಾ ಕ್ಷೇತ್ರದ ಮಾಜಿ ಶಾಸಕಿ ರಜಿಯಾ ಸುಲ್ತಾನ ಅವರು 2017-2022ರ ವರೆಗೆ ಪಂಜಾಬ್ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. 2022ರ ರಾಜ್ಯ ಚುನಾವಣೆಯಲ್ಲಿ ಅವರು ಮಲೇರ್ಕೋಟ್ಲಾದಲ್ಲಿ ಪರಾಭವಗೊಂಡರು.