ಗದಗ: ಹೊಳೆ ದಾಟಲು ಹೋಗಿ ಕೊಚ್ಚಿ ಹೋದ ವ್ಯಕ್ತಿ ಶವವಾಗಿ ಪತ್ತೆ

ಗದಗ: ಹೊಳೆಯಲ್ಲಿ ಬೈಕ್ ಸಮೇತ ಕೊಚ್ಚಿ ಹೋದ ವ್ಯಕ್ತಿ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಗದಗ ತಾಲೂಕಿನ ಬೆನಕೊಪ್ಪ ಗ್ರಾಮದಲ್ಲಿ ನಡೆದಿದೆ.ಹಿರೇಕೊಪ್ಪ ಗ್ರಾಮದ ಶರಣಪ್ಪ ಹಡಗಲಿ(39) ಮೃತ ದುರ್ದೈವಿ. ಮಂಗಳವಾರ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದ್ದು, ಹಳ್ಳಕೊಳ್ಳಗಳೆಲ್ಲಾ ತುಂಬಿ ಉಕ್ಕಿ ಹರಿದಿದೆ.
ಬೆನಕೊಪ್ಪ ಗ್ರಾಮದಲ್ಲಿ ಹೊಳೆಯೊಂದು ಉಕ್ಕಿ ರಸ್ತೆ ಮೇಲೆ ಹರಿದಿದೆ. ಶರಣಪ್ಪ ನಿನ್ನೆ ಸಂಜೆ ಪತ್ನಿಯ ತವರೂರು ಬೆನಕೊಪ್ಪ ಗ್ರಾಮಕ್ಕೆ ಹೊರಟ್ಟಿದ್ದರು. ಶರಣಪ್ಪ ಹೊಳೆಯ ನೀರನ್ನು ಲೆಕ್ಕಿಸದೇ ಬೈಕ್ ಸಮೇತ ಹೊಳೆ ದಾಟಲು ಮುಂದಾಗಿದ್ದು, ಈ ವೇಳೆ ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದರು.
ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದರು. ಇಂದು ಸುಮಾರು ನಾಲ್ಕು ಕಿ.ಮೀ ದೂರದಲ್ಲಿ ನಿರಲಗಿ ಚೆಕ್ ಡ್ಯಾಂ ಬಳಿಯ ಶರಣಪ್ಪ ಶವ ಪತ್ತೆಯಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.