ಪರ್ಸೆಂಟೇಜ್, ಪೈರಸಿ, ಓಟಿಟಿ: ಚಿತ್ರರಂಗದ ತಲೆನೋವುಗಳಿಗೆ ಪರಿಹಾರವಿದೆಯೇ?

ಬೆಂಗಳೂರು :ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನಿರ್ಮಾಪಕರು, ಪ್ರದರ್ಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೂನ್ ಒಂದರಿಂದ ಚಿತ್ರಮಂದಿರಗಳನ್ನು ಬಂದ್ ಮಾಡಲು ಆಂಧ್ರ, ತೆಲಂಗಾಣದಲ್ಲಿ ಚಿತ್ರ ಪ್ರದರ್ಶಕರು ನಿರ್ಧರಿಸಿದ್ದಾರೆ. ಇದಕ್ಕೆ ಕೈ ಜೋಡಿಸಿ ರಾಜ್ಯದಲ್ಲಿ ಕೂಡ ಚಿತ್ರಮಂದಿರ ಬಾಗಿಲು ಮುಚ್ಚಲು ಕೆಲವರು ಪಟ್ಟು ಹಿಡಿದಿದ್ದಾರೆ.
ಚಿತ್ರರಂಗದಲ್ಲಿ ಸಮಸ್ಯೆಗಳು ಇದೇ ಮೊದಲಲ್ಲ. ಆದರೆ ಒಂದೆರಡು ಸಿನಿಮಾ ಗೆದ್ದುಬಿಟ್ಟರೆ ಎಲ್ಲವೂ ಸರಿ ಹೋಯಿತು ಎಂದುಕೊಳ್ಳುತ್ತಾರೆ. ಮತ್ತೆ ಸಿನಿಮಾಗಳು ಗೆಲ್ಲದೇ ಇದ್ದಾಗ ಪ್ರೇಕ್ಷಕರ ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕಿದಾಗಲೇ ವಾಸ್ತವಾಂಶ ಬೆಳಕಿಗೆ ಬರುತ್ತದೆ. ಕಳೆದ 5 ತಿಂಗಳಿಂದ ಕನ್ನಡದ ಯಾವುದೇ ಸಿನಿಮಾ ಗೆದ್ದಿಲ್ಲ. ಹಾಗಾಗಿ ಸಹಜವಾಗಿಯೇ ಚಿತ್ರಮಂದಿರಗಳು ಪ್ರೇಕ್ಷಕರ ಬರ ಎದುರಿಸುತ್ತಿವೆ.
ಆಂಧ್ರ ಹಾಗೂ ತೆಲಂಗಾಣದಲ್ಲಿ ಪರ್ಸಂಟೇಜ್ ಲೆಕ್ಕದಲ್ಲಿ ಸಿನಿಮಾ ಪ್ರದರ್ಶನ ಮಾಡುವ ಬಗ್ಗೆ ಪದೇ ಪದೆ ಚರ್ಚೆ ನಡೆಯುತ್ತಲೇ ಇರುತ್ತದೆ. ಪರ್ಸಂಟೇಜ್ ಪದ್ದತಿಯಲ್ಲಿ ಸಿನಿಮಾ ಪ್ರದರ್ಶನ ಮಾಡುತ್ತೇವೆ ಎಂದು ಪ್ರದರ್ಶಕರು ಹೇಳಿದರೆ ಅದಕ್ಕೆ ವಿತರಕರು ಒಪ್ಪುತ್ತಿಲ್ಲ. ಬಾಡಿಗೆ ಪದ್ದತಿ ರೂಪದಲ್ಲಿ ಸಿನಿಮಾ ಪ್ರದರ್ಶಿಸಲು ಸಾಧ್ಯವಿಲ್ಲ ಎಂದು ಪ್ರದರ್ಶಕರು ಪಟ್ಟು ಹಿಡಿದಿದ್ದಾರೆ. ಆದರೆ ಪರ್ಸೆಂಟೇಜ್ ನೀಡಲು ಸಾಧ್ಯವಿಲ್ಲ ಎಂದು ವಿತರಕರು ಹೇಳುತ್ತಿದ್ದಾರೆ. ಇದು ನಿರ್ಮಾಪಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಆಂಧ್ರ, ತೆಲಂಗಾಣ ಚಿತ್ರ ಪ್ರದರ್ಶಕರ ರೀತಿ ಕರ್ನಾಟಕದಲ್ಲಿ ಕೂಡ ಸಿನಿಮಾ ಪ್ರದರ್ಶಕರು ಹೊಸ ವಾದ ಮುಂದಿಡುತ್ತಿದ್ದಾರೆ. ನಾವು ಚಿತ್ರಮಂದಿರಗಳನ್ನು ಮಚ್ಚುತ್ತೇವೆ ಎನ್ನುತ್ತಿದ್ದಾರೆ. ಇದು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಇತ್ತೀಚೆಗೆ ನಟ ಶಿವರಾಜ್ಕುಮಾರ್ ನಿವಾಸದಲ್ಲಿ ಸಭೆ ನಡೆಸಲಾಯಿತು. ಸಮಸ್ಯೆಗಳೇನು? ಅದಕ್ಕೆ ಪರಿಹಾರ ಏನು? ಎನ್ನುವ ಬಗ್ಗೆ ಚರ್ಚಿಸಲಾಯಿತು. ಮುಂದೆ ಎಲ್ಲರೂ ಸೇರಿ ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಚಿತ್ರಮಂದಿರಗಳ ಸಮಸ್ಯೆಗೆ ಸಿಎಂ ಅವರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸದೇ ಇರುವುದು ಕೂಡ ಚಿತ್ರರಂಗದ ಸಮಸ್ಯೆಗೆ ಮುಖ್ಯ ಕಾರಣ ಎನ್ನುವಂತಾಗಿದೆ. ಸಭೆಯಲ್ಲಿ ಗಣೇಶ್ ಹಾಗೂ ಧ್ರುವ ಸರ್ಜಾ ಕೂಡ ನಟಿಸಿದ್ದರು. ನಟರಿಗೂ ಇನ್ನು ಮುಂದೆ ಬೇಗ ಬೇಗ ಸಿನಿಮಾ ಮಾಡುವಂತೆ ಮನವಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನಟರು ಕೂಡ ಪರ್ಸಂಟೇಜ್ ಲೆಕ್ಕದಲ್ಲಿ ಸಂಭಾವನೆ ತೆಗೆದುಕೊಂಡು ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ವಾದವನ್ನು ಕೆಲ ನಿರ್ಮಾಪಕರು ಮುಂದಿಡುತ್ತಿದ್ದಾರೆ. ಇದಕ್ಕೆ ಕಲಾವಿದರು ಒಪ್ಪುವುದು ಕಷ್ಟವಿದೆ. ಡೇಟ್ಸ್ ಕೊಟ್ಟು ಸಿನಿಮಾ ಮಾಡಿ ಕಲೆಕ್ಷನ್ ಬಂದು ಎಲ್ಲಾ ಕಳೆದು ಉಳಿದ ಹಣದಲ್ಲಿ ಕಲಾವಿದರು ಪರ್ಸೆಂಟೇಜ್ ತೆಗೆದುಕೊಳ್ಳಿ ಎನ್ನುವುದು ನಿರ್ಮಾಪಕರ ವಾದ. ಇದನ್ನು ಕಲಾವಿದರು ಒಪ್ಪುವುದಿಲ್ಲ ಎನ್ನುವುದೇ ಗೊತ್ತೇಯಿದೆ.
ಒಂದ್ಕಡೆ ಕನ್ನಡ ಕಲಾವಿದರು, ತಂತ್ರಜ್ಞರು ಪರಭಾಷಾ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ. ಪರಭಾಷೆಯ ನಿರ್ಮಾಪಕರು ಕೂಡ ಬಂದು ಕನ್ನಡದಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಹಾಗಾಗಿ ಕನ್ನಡದ ಕೆಲ ನಿರ್ಮಾಪಕರ ಈ ಪರ್ಸೆಂಟೇಜ್ ಬೇಡಿಕೆ ಈಡೇರುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಹಾಗಾಗಿ ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲು ಈಗ ಶ್ರಮಿಸಲಾಗುತ್ತಿದೆ. ಇದೇ ಕಾರಣಕ್ಕೆ ಶಿವಣ್ಣನ ನೇತೃತ್ವದಲ್ಲಿ ಮುನ್ನಡೆಯಲು ಎಲ್ಲರೂ ಮುಂದಾಗಿದ್ದಾರೆ.
ಚಿತ್ರಮಂದಿರಗಳನ್ನು ಮುಚ್ಚುವುದು ನಿಜಕ್ಕೂ ಕಷ್ಟದ ಕೆಲಸ. ಪ್ರೇಕ್ಷಕರು ಈಗ ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ದಿನಗಳ ಕಾಲ ಬಾಗಿಲು ಬಂದ್ ಮಾಡಿದರೆ ಚಿತ್ರಮಂದಿರಗಳಿಂದ ಮತ್ತಷ್ಟು ದೂರ ಆಗಿಬಿಡುತ್ತಾರೆ. ಅಲ್ಲದೇ ಮುಂದೆ ಒಂದಷ್ಟು ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಇಂತಹ ಸಮಯದಲ್ಲಿ ಚಿತ್ರಮಂದಿರಗಳನ್ನು ಮುಚ್ಚದಂತೆ ತಡೆಯುವ ಪ್ರಯತ್ನ ಶುರುವಾಗಿದೆ.
ಮುಖ್ಯವಾಗಿ ಚಿತ್ರಮಂದಿರಗಳ ಎರಡು ವರ್ಷದ ಕೆಇಬಿ ಬಿಲ್ ಹಾಗೂ ಆಸ್ತಿ ತೆರಿಗೆ ರಿಯಾಯಿತಿ ಕೇಳಬೇಕು. ಜೊತೆಗೆ ಚಿತ್ರಮಂದಿರಗಳ ರಿನೋವೇಷನ್ಗಾಗಿ 10 ಕೋಟಿ ರೂ.ವರೆಗೆ ಕಡಿಮೆ ಬಡ್ಡಿಗೆ ಸಾಲ ಕೇಳಿ ಸರ್ಕಾರದ ಮುಂದೆ ಬೇಡಿಕೆ ಇಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಂತೂ ಇಂತೂ ಕನ್ನಡ ಚಿತ್ರರಂಗದ ಉಳಿವಿಗೆ ಶಿವಣ್ಣ ಮುಂದಾಳತ್ವದಲ್ಲಿ ಪ್ರಯತ್ನಗಳು ಶುರುವಾಗಿದೆ.
ಮುಖ್ಯವಾಗಿ ಓಟಿಟಿ ಹಾಗೂ ಪೈರಸಿ ಚಿತ್ರರಂಗಕ್ಕೆ ಕಂಟಕವಾಗಿದೆ. ಬೇಗ ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಆಗುವುದನ್ನು ತಡೆಯಬೇಕು. ಜೊತೆಗೆ ಪೈರಸಿಯನ್ನು ಕಟ್ಟಿ ಹಾಕಿದರೆ ಮಾತ್ರ ಚಿತ್ರರಂಗಕ್ಕೆ ಉಳಿಗಾಲ. ಇಲ್ಲದಿದ್ದರೆ ನಿಜಕ್ಕೂ ಸಿನಿಮಾಗಳನ್ನು ನೋಡಲು ಜನ ಚಿತ್ರಮಂದಿರಗಳಿಗೆ ಬರುವುದಿಲ್ಲ.
ಶಿವಣ್ಣನ ಮನೆಯಲ್ಲಿ ನಡೆದ ಸಭೆ, ಚಿತ್ರರಂಗದ ಮುಂದಿನ ನಿರ್ಧಾರದ ಬಗ್ಗೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. “ಜೂನ್ ಒಂದರಿಂದ ಚಿತ್ರಮಂದಿರಗಳನ್ನು ಮುಚ್ಚುವುದಾಗಿ ಪ್ರದರ್ಶಕರು ಪಟ್ಟು ಹಿಡಿದಿದ್ದಾರೆ. ಅದಕ್ಕೆ ವಿರುದ್ಧವಾಗಿ ನಿರ್ಮಾಪಕರು ತಮ್ಮ ಸಂಕಷ್ಟವನ್ನು ಹೇಳಿಕೊಳ್ಳುತ್ತಿದ್ದಾರೆ. ಕಲಾವಿದರ ಬಳಿಕ ನಿರ್ಮಾಪಕರು ಪರ್ಸೆಂಟೇಜ್ ವಾದ ಮುಂದಿಡುತ್ತಿದ್ದು ಜಟಾಪಟಿ ಶುರುವಾಗಿದೆ. ಇದೆಲ್ಲದರ ನಡುವೆ ಕಲಾವಿದರು ಹೆಚ್ಚು ಸಿನಿಮಾ ಮಾಡಬೇಕು ಎನ್ನುವುದು ಶಿವಣ್ಣ ವಾದ” ಎಂದಿದ್ದಾರೆ.
ಕೆಲವರು ಮಾತ್ರ ಸಭೆಯಲ್ಲಿ ಭಾಗಿ ಆಗಿದ್ದರು. ಸುದೀಪ್, ದರ್ಶನ್, ಉಪೇಂದ್ರ ರೀತಿಯ ನಟರು ಭಾಗಿ ಆಗಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಣಕರ್ “ಶಿವಣ್ಣ ಒಂದು ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ಒಪ್ಪಿಕೊಳ್ಳಬೇಕು. ಇದೇ ಅಂತಿಮ ಅಲ್ಲ. ಮುಂದೆ ಮತ್ತೊಂದು ಸಭೆ ಮಾಡಿ ಎಲ್ಲರನ್ನು ಕರೆದು ಮಾತನಾಡಲು ತೀರ್ಮಾನಿಸಿದ್ದಾರೆ. ಮುಖ್ಯವಾಗಿ ಪ್ರದರ್ಶಕರು, ನಿರ್ಮಾಪಕರ ಸಮಸ್ಯೆಗಳು ಏನು ಎಂದು ವಿಚಾರ ವಿನಿಮಯ ಮಾಡಿಕೊಳ್ಳಲು ನಡೆದ ಸಭೆ ಅದು ಅಷ್ಟೆ” ಎಂದಿದ್ದಾರೆ.
ಮಾತು ಮುಂದುವರೆಸಿದ ಬಣಕಾರ್ “ಆಂಧ್ರ-ತೆಲಂಗಾಣದಲ್ಲಿ ಪ್ರದರ್ಶಕರು ಚಿತ್ರಮಂದಿರಗಳನ್ನು ಬಂದ್ ಮಾಡಲು ಮುಂದಾಗಿದ್ದಾರೆ. ಅದಕ್ಕೆ ನಮ್ಮವರ ಸಾಥ್ ಕೂಡ ಕೇಳುತ್ತಿದ್ದಾರೆ. ಹಾಗಾಗಿ ನಮ್ಮಲ್ಲಿ ಕೆಲವರು ಹೀಗೆ ವಾದ ಮಾಡುತ್ತಿದ್ದಾರೆ. ಆ ರೀತಿ ಆದರೆ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರುವುದು ಕಷ್ಟ. ಕೋವಿಡ್ ಸಮಯದಲ್ಲಿ ಚಿತ್ರಮಂದಿರಗಳ ಬಾಗಿಲು ಬಂದ್ ಆಗಿ ಜನ ಓಟಿಟಿ, ಮೊಬೈಲ್ಗೆ ಹೊಂದಿಕೊಂಡಿದ್ದರು. ಇತ್ತೀಚೆಗೆ ಚಿತ್ರರಂಗ ಚಿಗುರುತ್ತಿದೆ. ಮುಂದೆ ಒಂದಷ್ಟು ಒಳ್ಳೆ ಸಿನಿಮಾಗಳು ಬರುತ್ತಿವೆ. ಇಂತಹ ಸಮಯದಲ್ಲಿ ಚಿತ್ರಮಂದಿರಗಳನ್ನು ಮುಚ್ಚುವುದು ಬೇಡ ಎಂದು ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೀತಿದೆ” ಎಂದಿದ್ದಾರೆ.
ಒಟ್ಟಾರೆ ಚಿತ್ರರಂಗ ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ. ಈಗಾಗಲೇ ಕನ್ನಡ ಚಿತ್ರರಂಗ ಸೋಲಿನ ಸುಳಿಗೆ ಸಿಲುಕಿದೆ. ಕನ್ನಡದಲ್ಲಿ ಪ್ಯಾನ್ ಇಂಡಿಯಾ ಲೆಕ್ಕಾಚಾರ ಹೆಚ್ಚಾಗಿ ಸ್ಟಾರ್ ನಟರ ಸಿನಿಮಾಗಳ ಸಂಖ್ಯೆ ಕಮ್ಮಿ ಆಗುತ್ತಿದೆ. ದೊಡ್ಡ ಸಿನಿಮಾಗಳು ಬರದೇ ಪ್ರೇಕ್ಷಕರು ಪರಭಾಷಾ ಸಿನಿಮಾಗಳಿಗೆ ಹೊಂದಿಕೊಳ್ಳುತ್ತಿದ್ದಾರೆ. ಹಾಗಾಗಿ ಕನ್ನಡದ ಸಣ್ಣ ಸಿನಿಮಾಗಳನ್ನು ನೋಡಲು ಹಿಂದೇಟು ಹಾಕುತ್ತಿದ್ದಾರೆ.
ಐಪಿಎಲ್ ಟೂರ್ನಿ ಕಾರಣಕ್ಕೆ ಕಳೆದ ಎರಡ್ಮೂರು ತಿಂಗಳು ಯಾವುದೇ ದೊಡ್ಡ ಸಿನಿಮಾ ಬರಲಿಲ್ಲ. ಮುಂದೆ ‘ಕೆಡಿ’, ’45’ ಹಾಗೂ ‘ಕಾಂತಾರ- 1’ ರೀತಿಯ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿವೆ. ಇಂತಹ ಸಮಯದಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಿ ಮತ್ತಷ್ಟು ಸಂಕಷ್ಟ ಮೈಮೇಲೆ ಎಳೆದುಕೊಳ್ಳುವುದು ಸರಿಯಲ್ಲ. ಸದ್ಯ ಆಂಧ್ರ, ತೆಲಂಗಾಣದಲ್ಲಿ ಚಿತ್ರಮಂದಿರ ಬಂದ್ ಮಾಡಲು ಮುಂದಾಗಿರುವುದು ‘ಥಗ್ ಲೈಫ್’ ಹಾಗೂ ‘ಹರಿಹರ ವೀರಮಲ್ಲು’ ಚಿತ್ರಗಳ ಬಿಡುಗಡೆಗೆ ಸಮಸ್ಯೆಯಾಗಿ ಪರಿಣಮಿಸಿದೆ.