ವಸತಿ ನಿಲಯ ಬಾಲಕಿಯರೊಂದಿಗೆ ಪಾರ್ಟಿ: ವಾರ್ಡನ್ ಮತ್ತು ಅಡುಗೆ ಕೆಲಸದಾಕೆಗೆ ನೋಟೀಸ್

ವಿಜಯಪುರ: ವಿಜಯಪುರದ ಮಾರುತಿ ನಗರದಲ್ಲಿರುವ ಮೆಟ್ರಿಕ್ ನಂತರದ ವೃತ್ತಿ ಪರ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರನ್ನು ಹುಟ್ಟು ಹಬ್ಬದ ಆಚರಣೆಗೆಂದು ರಾತ್ರಿ 7 ಗಂಟೆಯ ನಂತರ ಕರೆದುಕೊಂಡು ಹೋಗಿ ಪಾರ್ಟಿ ಮಾಡಿದ ಆರೋಪ ವಸತಿ ನಿಲಯದ ವಾರ್ಡನ್ ಹಾಗೂ ಅಡುಗೆ ಕೆಲಸದಾಕೆ ವಿರುದ್ಧ ಕೇಳಿ ಬಂದಿದೆ. ಕಳೆದ ಶನಿವಾರ (ಆ.02) ದಂದು ವಸತಿ ನಿಲಯದ ಅಡುಗೆ ಕೆಲಸದಾಕೆ ರಿಜ್ವಾನಾ ಬೇಗಂ ಅವರ ಹುಟ್ಟು ಹಬ್ಬವಿತ್ತು.

ಅಡುಗೆ ಕೆಲಸದಾಕೆ ರಿಜ್ವಾನಾ ಬೇಗಂ ಮುಲ್ಲಾ ಅವರ ಹುಟ್ಟು ಹಬ್ಬದ ಆಚರಣೆಗೆ ವಸತಿ ನಿಲಯದ ವಿದ್ಯಾರ್ಥಿನಿಯರನ್ನು ವಾರ್ಡನ್ ಶಕುಂತಲಾ ರಜಪೂತ ಕರೆದುಕೊಂಡು ಹೋಗಿದ್ದರು. ಈ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಕಾರಣ ಕೇಳಿ ವಾರ್ಡನ್ ಹಾಗೂ ಅಡುಗೆ ಕೆಲಸದಾಕೆಗೆ ನೊಟೀಸ್ ಜಾರಿ ಮಾಡಿದ್ದಾರೆ.
ಕೇವಲ ನೊಟೀಸ್ ಜಾರಿ ಬೇಡ ಇಬ್ಬರನ್ನೂ ಸೇವೆಯಿಂದ ಅಮಾನತ್ತು ಮಾಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ ಮನವಿ ಸಲ್ಲಿಸಿದರು. ಎಬಿವಿಪಿ ಕಾರ್ಯಕರ್ತರು ಪುಲಕೇಶಿ ನಗರದಿಂದ ಸಮಾಜ ಕಲ್ಯಾಣ ಇಲಾಖೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ವಾರ್ಡನ್ ಶಕುಂತಲಾ ರಜಪೂತ ಹಾಗೂ ಅಡುಗೆ ಕೆಲಸದಾಕೆ ರಿಜ್ವಾನಾ ಬೇಗಂ ಮುಲ್ಲಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು. ವಾರ್ಡನ್ ಹಾಗೂ ಅಡುಗೆ ಕೆಲಸದಾಕೆಯನ್ನು ಸೇವೆಯಿಂದ ಅಮಾನತ್ತು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.
