ಭಾರತದ ವಿರುದ್ಧ ಪಾಕಿಸ್ತಾನದ 4ಎ ನೀತಿ-ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ನ ಹೈಡ್ರಾಮಾ

ಹೊಸದಿಲ್ಲಿ : ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ ಯಾವಾಗಲೂ ಜಗತ್ತಿನ ಮುಂದೆ ಭಿಕ್ಷೆ ಬೇಡೋದು ನಿಮಗೆ ಗೊತ್ತೇ ಇದೆ. ಆಪರೇಷನ್ ಸಿಂಧೂರದಲ್ಲಿ ಭಾರತದ ವಿರುದ್ಧ ಸೋತು ಸುಣ್ಣವಾಗಿರುವ ಪಾಕಿಸ್ತಾನ ಈಗ ಹೊಸ ಭಯಾನಕ ನೀತಿಯತ್ತ ಮುಖ ಮಾಡಿದೆ. ಈಗಾಗಲೇ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭಾರತಕ್ಕೆ ನೇರವಾಗಿಯೇ ಅಣ್ವಸ್ತ್ರ ಬೆದರಿಕೆಯನ್ನು ಹಾಕಿದ್ದಾನೆ.

ಅದು ಕೂಡ ಅಮೆರಿಕದ ನೆಲದಲ್ಲಿ ನಿಂತು ನಾವು ಅಣ್ವಸ್ತ್ರ ಹೊಂದಿರುವ ದೇಶ, ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದರೆ, ನಾವು ಮಾತ್ರ ಮುಳುಗಲ್ಲ.. ನಮ್ಮ ಜೊತೆ ಅರ್ಧ ಜಗತ್ತನ್ನೇ ಮುಳುಗಿಸುತ್ತೇವೆ ಅಂತಾ ಬೆದರಿಕೆ ಹಾಕಿದ್ದ. ಇದರಲ್ಲಿ ಪಾಕಿಸ್ತಾನದ ಹೊಸ ನೀತಿ ಅನಾವರಣಗೊಂಡಿದೆ. ಕಳೆದ ಮೂರ್ನಾಲ್ಕು ತಿಂಗಳ ಬೆಳವಣಿಗೆಗಳನ್ನು ತೀಕ್ಷ್ಣವಾಗಿ ಗಮನಿಸಿದರೆ ಅಸಿಮ್ ಮುನೀರ್ 4ಎ ನೀತಿಯನ್ನು ಪಾಲಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಏನಿದು ಪಾಕಿಸ್ತಾನದ 4ಎ ಪಾಲಿಸಿ? ಮುಂದೆ ನೋಡೋಣ ಬನ್ನಿ..
ಹೌದು, ವಿಶ್ವಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿಯಂತಹ ಸಂಸ್ಥೆಗಳ ಕೃಪೆಯಿಂದ ಉಸಿರಾಡುತ್ತಿರುವ ಪಾಕಿಸ್ತಾನ ಒಂದು ವಿಫಲ ರಾಷ್ಟ್ರ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಇಸ್ಲಾಮಾಬಾದ್ ಜಾಗತಿಕವಾಗಿ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವ ಹೊತ್ತಲ್ಲೇ, ಅಲ್ಲಿನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ದೇಶದ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಅವರು ತಮ್ಮ 4A ನೀತಿಯನ್ನು ಬಳಸುತ್ತಿದ್ದಾರೆ. ಈಗಾಗಲೇ ಅಣ್ವಸ್ತ್ರ ಬೆದರಿಕೆ ಹಾಕಿರುವ ಮುನೀರ್ಗೆ ಭಾರತ ಕೂಡ ತಿರುಗೇಟನ್ನು ನೀಡಿದೆ. ಭಯೋತ್ಪಾದಕ ಗುಂಪುಗಳೊಂದಿಗೆ ಸೇನೆ ಕೈ ಜೋಡಿಸಿರುವ ದೇಶದಲ್ಲಿ ಅಣ್ವಸ್ತ್ರಗಳ ನಿಯಂತ್ರಣ ಮತ್ತು ಭದ್ರತೆಯ ಬಗ್ಗೆ ಇರುವ ಅನುಮಾನಗಳನ್ನು ಇದು ಮತ್ತಷ್ಟು ಬಲಪಡಿಸಿದೆ ಎಂದು ಭಾರತ ಹೇಳಿತ್ತು. ಈ 4A ನೀತಿ ಕೇವಲ ಭಾರತದ ವಿರುದ್ಧ ಮಾತ್ರವಲ್ಲ, ಪಾಕಿಸ್ತಾನದ ರಾಜಕಾರಣಿಗಳ ವಿರುದ್ಧವೂ ಈ ತಂತ್ರವನ್ನು ಹೆಣೆದಿರುವುದು ಸ್ಪಷ್ಟವಾಗುತ್ತದೆ.
ಭಾರತದ ವಿರುದ್ಧ ಅಲ್ಲಾ, ಆರ್ಮಿ, ಅಮೆರಿಕ, ಆಟಂ!
ತಜ್ಞರ ಪ್ರಕಾರ, ಮುನೀರ್ 4A ನೀತಿಯನ್ನು ಬಳಸಿ ತಮ್ಮನ್ನು ಸೂಪರ್ ಪ್ರೆಸಿಡೆಂಟ್ ಎಂದು ಸ್ಥಾಪಿಸಲು ಯತ್ನಿಸುತ್ತಿದ್ದಾರೆ. ಈ 4A ಎಂದರೆ, ಅಲ್ಲಾ, ಆರ್ಮಿ (ಸೇನೆ), ಅಮೆರಿಕ ಮತ್ತು ಆಟಂ (ಅಣುಬಾಂಬ್) ನೀತಿಯನ್ನು ಮುನೀರ್ ಬಳಸುತ್ತಿರುವುದು ಕುತೂಹಲ ಕೆರಳಿಸಿದೆ. ಪಾಕಿಸ್ತಾನದ ಹಿಂದಿನ ಸೇನಾ ನಾಯಕರು ಕೂಡ ಇದೇ ಹಾದಿಯಲ್ಲಿ ಸಾಗಿದ್ದರು. ಆದರೆ, ಮುನೀರ್ ಆಟಂ ಅಂದರೆ ಅಣುಬಾಂಬ್ ಮೇಲೆ ನೀಡುತ್ತಿರುವ ಆದ್ಯತೆ ಇಡೀ ಜಗತ್ತಿನ ಗಮನ ಸೆಳೆದಿದೆ. ಅಷ್ಟೇ ಅಲ್ಲದೇ, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರನ್ನು ಮೂಲೆಗುಂಪು ಮಾಡಿ, ತಾವೇ ದೇಶದ ಪ್ರತಿನಿಧಿಯಂತೆ ಜಗತ್ತನ್ನು ಸುತ್ತುತ್ತಿದ್ದಾರೆ. ಇದು ಪಾಕಿಸ್ತಾನದ ಚುನಾಯಿತ ಸರ್ಕಾರಕ್ಕೆ ದೊಡ್ಡ ಅವಮಾನವೆಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನ್ನು ಮುನೀರ್ ಭೇಟಿಯಾಗಿರುವುದು ಕೂಡ ಜಗತ್ತಿನ ಗಮನ ಸೆಳೆದಿದೆ.
ಮುನೀರ್ 4ಎ ಅಸ್ತ್ರ ಬಳಕೆ ಹೇಗೆ?
ಅಸಿಮ್ ಮುನೀರ್ 4ಎ ನೀತಿಯನ್ನು ಹೇಗೆ ಕಾಲ ಕಾಲಕ್ಕೆ ಭಾರತದ ವಿರುದ್ಧ ಬಳಸುತ್ತಾ ಬಂದಿದ್ದಾನೆ ಎಂಬುದನ್ನು ಟೈಮ್ಲೈನ್ ಮೂಲಕವೇ ನಾವು ನೋಡೋಣ.. ಏಪ್ರಿಲ್ 17, 2025ರಂದು ಮುನೀರ್ ಒಂದು ಭಾಷಣ ಮಾಡ್ತಾನೆ. ವಿವಿಧ ದೇಶದಲ್ಲಿರುವ ಪಾಕಿಸ್ತಾನಿಗಳನ್ನು ಉದ್ದೇಶಿಸಿ ಮಾತನಾಡುವ ಮುನೀರ್, ಕಾಶ್ಮೀರ ನಮ್ಮ ಕಂಠನಾಳ, ನಾವು ಮತ್ತು ಹಿಂದೂಗಳು ಬೇರೆ ಬೇರೆ. ನಮ್ಮ ಧರ್ಮವೇ ಶ್ರೇಷ್ಠ ಎಂದು ಭಾರತದ ವಿರುದ್ಧ ತಮ್ಮ ಜನರಲ್ಲಿ ಧರ್ಮದ ಅಫೀಮನ್ನು ತುಂಬಿದ್ದ. ಅದಾಗಿ ಐದು ದಿನವಷ್ಟೇ ಅಂದ್ರೇ ಏಪ್ರಿಲ್ 22ರಂದು ಪಹಲ್ಗಾಮ್ನ ಬೈಸರನ್ ವ್ಯಾಲಿಯಲ್ಲಿ ಭಯೋತ್ಪಾದನಾ ದಾಳಿ ನಡೆದಿತ್ತು. ನಂತರ ಬರೋದು ಸೇನೆ ಅಂದ್ರೇ ಆರ್ಮಿ, ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಉಗ್ರರ ನೆಲೆಗಳ ಮೇಲೆ ಏರ್ಸ್ಟ್ರೈಕ್ ನಡೆಸಿತ್ತು. ಭಾರತ ಕ್ಲಿಯರ್ ಆಗಿ ಹೇಳಿತ್ತು, ನಾವು ಯಾವುದೇ ಸೇನಾ ಸೌಕರ್ಯಗಳ ಮೇಲೆ ದಾಳಿ ನಡೆಸಿಲ್ಲ ಎಂದು. ಆದರೂ ಕೂಡ ಭಾರತದ ಮೇಲೆ ತನ್ನ ಸೇನೆಯನ್ನು ಮುನೀರ್ ಛೂ ಬಿಟ್ಟಿದ್ದ.. ಇದರಿಂದ ಎರಡು ದೇಶಗಳ ನಡುವೆ 100 ಗಂಟೆಗಳ ಯುದ್ಧವೇ ನಡೆಯಿತು. ಕೊನೆಗೆ ಭಾರತದ ಏಟನ್ನು ತಡೆಯಲು ಆಗದೇ ಭಾರತದ ಮುಂದೆ ಮಂಡಿಯೂರಿ ಕದನ ವಿರಾಮ ಮಾಡಿಕೊಳ್ತು..
ಎರಡು ಬಾರಿ ಅಮೆರಿಕಕ್ಕೆ ಭೇಟಿ, ಟ್ರಂಪ್ ಸ್ನೇಹ!
ಅಲ್ಲಾ, ಆರ್ಮಿ ಬಳಿಕ ಬಂದಿದ್ದೇ ಅಮೆರಿಕ.. ಆಪರೇಷನ್ ಸಿಂಧೂರದಲ್ಲಿ ಭಾರತದಿಂದ ನಮ್ಮನ್ನು ಕಾಪಾಡಿ ಅಂತಾ ಮುನೀರ್ ಅಮೆರಿಕದ ಮೊರೆ ಹೋಗಿದ್ದ ಎಂಬುದು ಜಗಜ್ಜಾಹೀರು.. ಇದಾದ ಬಳಿಕ ಮುನೀರ್ ಅಮೆರಿಕಕ್ಕೆ ಎರಡು ತಿಂಗಳಲ್ಲಿ ಎರಡು ಬಾರಿ ಭೇಟಿ ನೀಡ್ತಾನೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನ್ನು ಮೀಟ್ ಆಗ್ತಾನೆ. ಅದಲ್ಲದೇ ಟ್ರಂಪ್ಗೆ ನೊಬೆಲ್ ಶಾಂತಿ ಪುರಸ್ಕಾರ ನೀಡ್ಬೇಕು ಅಂತಾನೂ ಹೇಳ್ತಾನೆ. ಇದರ ಬೆನ್ನಲ್ಲೇ ಟ್ರಂಪ್ ಭಾರತಕ್ಕೆ ಭಾರೀ ಸುಂಕ ವಿಧಿಸಿ, ಪಾಕಿಸ್ತಾನಕ್ಕೆ ವಿನಾಯಿತಿ ನೀಡಿದ್ದ. ಅದಲ್ಲದೇ ಪಾಕಿಸ್ತಾನದ ಜೊತೆ ತೈಲ ಒಪ್ಪಂದವನ್ನು ಮಾಡಿಕೊಂಡಿದ್ದರು. ಅದಲ್ಲದೇ ಮುಂದೊಂದು ದಿನ ಪಾಕಿಸ್ತಾನದಿಂದಲೇ ಭಾರತ ತೈಲ ಖರೀದಿಸಬಹುದು ಎಂದು ಭಾರತವನ್ನು ಕೆಣಕಿದ್ದರು. ಈ ಮೂಲಕ ಅಮೆರಿಕ ಅಸ್ತ್ರವನ್ನು ಭಾರತದ ವಿರುದ್ಧ ಬಳಸುವಲ್ಲಿ ಮುನೀರ್ ಯಶಸ್ವಿಯಾಗಿದ್ದ. ಅದಾಗಿ ಮೊನ್ನೆ ಮೊನ್ನೆಯಷ್ಟೇ ಅಮೆರಿಕದಿಂದಲೇ ಭಾರತಕ್ಕೆ ಅಣ್ವಸ್ತ್ರ ಬೆದರಿಕೆಯನ್ನು ಮುನೀರ್ ಹಾಕಿದ್ದ.. ಸಮಯ ಸಿಕ್ಕಾಗಲೆಲ್ಲಾ ಮುನೀರ್ ಭಾರತಕ್ಕೆ ನ್ಯೂಕ್ಲಿಯರ್ ಬೆದರಿಕೆ ಹಾಕುತ್ತಿದ್ದು, ಆಟಂ ಎಂಬ ಅಣು ಬಾಂಬ್ ಅನ್ನು ಸೂಪರ್ ಪ್ರೆಸಿಡೆಂಟ್ ಆಗಲು ಭಾರತದ ವಿರುದ್ಧ ಬಳಸುತ್ತಿರುವುದು ಸ್ಪಷ್ಟವಾಗುತ್ತಿದೆ.
ಮೂರು ಸನ್ನಿವೇಶದಲ್ಲಿ ಭಾರತದ ಮೇಲೆ ಅಣ್ವಸ್ತ್ರ ದಾಳಿ!
ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ಆಪ್ತ, ರಾಜಕೀಯ ವಿಶ್ಲೇಷಕ ನಜಾಂ ಸೇಥಿ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರ ಬೆದರಿಕೆಯನ್ನೇ ಪುನರುಚ್ಚರಿಸಿದ್ದಾರೆ. ಭಾರತವು ಸಿಂಧೂ ನದಿಗೆ ಅಣೆಕಟ್ಟು ಕಟ್ಟಿ ತಮಗೆ ಬರುವ ನೀರನ್ನು ತಡೆದರೆ, ಪಾಕಿಸ್ತಾನವು ಆ ಅಣೆಕಟ್ಟುಗಳ ಮೇಲೆ ದಾಳಿ ಮಾಡಲಿದೆ ಎಂದು ಅವರು ಹೇಳಿದ್ದಾರೆ. ಅದಲ್ಲದೇ ಭಾರತದ ವಿರುದ್ಧ ಪಾಕಿಸ್ತಾನವು ಅಣ್ವಸ್ತ್ರಗಳನ್ನು ಬಳಸಲು ಪ್ರಚೋದಿಸಬಹುದಾದ ಮೂರು ಸನ್ನಿವೇಶಗಳನ್ನು ವಿವರಿಸಿದ್ದಾರೆ. ಪಾಕಿಸ್ತಾನದ ಕಡಲ ಸಂಚಾರವನ್ನು ನಿರ್ಬಂಧಿಸುವ ಕರಾಚಿ ಬಂದರಿನ ನೌಕಾ ದಿಗ್ಬಂಧನ, ದೇಶವನ್ನು ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ವಿಭಜಿಸುವಂತೆ ಭಾರತೀಯ ಸೇನೆಯು ಕರಾಚಿ ಮತ್ತು ಲಾಹೋರ್ಗೆ ಮುನ್ನುಗ್ಗುವುದು. ಹಾಗೂ ಪಾಕಿಸ್ತಾನದ ನೀರು ಪೂರೈಕೆಯನ್ನು ತಡೆಯಲು ಭಾರತ ಮಾಡುವ ಯಾವುದೇ ಪ್ರಯತ್ನ ಪಾಕಿಸ್ತಾನವನ್ನು ಅಣ್ವಸ್ತ್ರ ಪ್ರಯೋಗಿಸುವಂತೆ ಮಾಡಲಿದೆ ಎಂದು ಹೇಳಿದ್ದಾರೆ. ಅದಲ್ಲದೇ ಮೋದಿ ಹೇಳಿಕೆಯನ್ನೇ ಕಾಪಿ ಮಾಡಿರುವ ಸೇಥಿ, ನಾವು ದೀಪಾವಳಿಗಾಗಿ ಪರಮಾಣು ಅಸ್ತ್ರಗಳನ್ನು ನಿರ್ಮಿಸಿಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಭಾರತದ ವಿರುದ್ಧ 4ಎ ನೀತಿ ಬಳಸುತ್ತಿರುವುದು ಸ್ಪಷ್ಟವಾಗಿದೆ. ಅಲ್ಲಾ, ಆರ್ಮಿ, ಅಮೆರಿಕ, ಅಣುಬಾಂಬ್ ಅನ್ನು ಮುನೀರ್ ಭಾರತದ ವಿರುದ್ಧ ಬಳಸುತ್ತಿರುವುದು ಭಾರತಕ್ಕೆ ಆತಂಕಕಾರಿ. ಪಾಕಿಸ್ತಾನ ಭಾರತದಷ್ಟು ಸ್ಟ್ರಾಂಗ್ ಇಲ್ಲದಿದ್ದರೂ ಮುನೀರ್ ಹೇಳಿದಂತೆ ನಮ್ಮದು ಫೆರಾರಿ, ಅವರದ್ದು ಗುಜರಿ ಟ್ರಕ್.. ಗುದ್ದಿದ್ದರೆ ನಮ್ಮ ಫೆರಾರಿನೇ ಹಾಳಾಗುತ್ತದೆ. ಆದ್ದರಿಂದ ಭಾರತ ಪಾಕಿಸ್ತಾನವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಿದೆ.