ಪಾಕಿಸ್ತಾನ ವೀಸಾ ರದ್ದು: ಮಕ್ಕಳ ಚಿಕಿತ್ಸೆಗಾಗಿ ಭಾರತದಲ್ಲಿ ಮನವಿ

ಲಾಹೋರ್ :ಅನಾರೋಗ್ಯಪೀಡಿತ ಇಬ್ಬರು ಮಕ್ಕಳನ್ನು ಭಾರತಕ್ಕೆ ಚಿಕಿತ್ಸೆಗೆ ಕರೆತಂದಿರುವ ಪಾಕಿಸ್ತಾನದ ಪ್ರಜೆಯೊಬ್ಬರು, ‘ಮಕ್ಕಳ ಚಿಕಿತ್ಸೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕು’ ಎಂದು ಉಭಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯಕ್ಕೆ ಸೇರಿದ ವ್ಯಕ್ತಿ ಹೈದರಾಬಾದ್ನಲ್ಲಿ ನೆಲಸಿದ್ದಾರೆ.
ಇತ್ತೀಚಿನ ಪಹಲ್ಗಾಮ್ ಉಗ್ರರ ದಾಳಿ ಕೃತ್ಯದ ಹಿನ್ನೆಲೆಯಲ್ಲಿ ತವರಿಗೆ ಮರಳಬೇಕಾಗಿದೆ. ಎಲ್ಲ ವೀಸಾ ರದ್ದುಪಡಿಸಿರುವ ಭಾರತ ಸರ್ಕಾರ, ಪಾಕ್ಗೆ ಮರಳಲು ಗಡುವು ವಿಧಿಸಿದೆ.
ಜಿಯೊ ಸುದ್ದಿವಾಹಿನಿ ಜೊತೆಗೆ ಮಾತನಾಡಿದ ಪಾಕಿಸ್ತಾನದ ಪ್ರಜೆಯು, ‘ನನ್ನ 9 ಮತ್ತು 7 ವರ್ಷ ವಯಸ್ಸಿನ ಇಬ್ಬರು ಮಕ್ಕಳೂ ಹುಟ್ಟಿನಿಂದಲೇ ಹೃದ್ರೋಗ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ. ಸುದ್ದಿವಾಹಿನಿ ಇವರ ಹೆಸರು ಪ್ರಕಟಿಸಿಲ್ಲ.
ಮಕ್ಕಳನ್ನು ಚಿಕಿತ್ಸೆಗಾಗಿ ಭಾರತಕ್ಕೆ ಕರೆದೊಯ್ಯಲು ಈಗಾಗಲೇ ಸಾಕಷ್ಟು ಹಣವನ್ನು ವೆಚ್ಚ ಮಾಡಿದ್ದೇನೆ. ಹೀಗಾಗಿ, ಮಕ್ಕಳ ಚಿಕಿತ್ಸೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಮಧ್ಯೆ, ವೀಸಾ ರದ್ದುಪಡಿಸಿದ ಹಿಂದೆಯೇ ಪಾಕ್ನಲ್ಲಿದ್ದ 100 ಮಂದಿ ಭಾರತೀಯ ಪ್ರಜೆಗಳು ಹಾಗೂ ಭಾರತದಲ್ಲಿದ್ದ ಸುಮಾರು 28 ಮಂದಿ ಪಾಕಿಸ್ತಾನಿಯರು ತಮ್ಮ ತವರು ದೇಶಗಳಿಗೆ ಮರಳಿದ್ದಾರೆ ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.