ಪಹಲ್ಗಾಮ್ ಉಗ್ರರ ಗುಂಡಿನ ದಾಳಿ: ನವ ದಂಪತಿಯ ಭೀಕರ ಅಂತ್ಯ

ಕಾನ್ಪುರ: ಉತ್ತರ ಪ್ರದೇಶದ ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 2ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ ಮೂಲದ ಶುಭಂ ದ್ವಿವೇದಿ ಕಳೆದ ಫೆಬ್ರವರಿಯಲ್ಲಷ್ಟೇ ಮದುವೆಯಾಗಿದ್ದರು. ಹೀಗಾಗಿ ಏಪ್ರಿಲ್ನಲ್ಲಿ ಪತ್ನಿ ಜೊತೆ ಕಾಶ್ಮೀರಕ್ಕೆ ಪುಟ್ಟ ಪ್ರವಾಸ ಕೈಗೊಂಡಿದ್ದರು. ಆದರೆ ಅವರ ಖುಷಿಯ ಪ್ರವಾಸ ದುರಂತವಾಗಿ ಬದಲಾಗಿದೆ. ಉಗ್ರರು ನಡೆಸಿದ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಫೆಬ್ರವರಿ 12 ರಂದು ಇವರ ಮದುವೆ ನಡೆದಿತ್ತು. ಆತನ ಹೆಸರು ಕೇಳಿದ ನಂತರ ಆತನ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಎಂದು ಆತನ ಸಂಬಂಧಿಯೊಬ್ಬರು ಎಎನ್ಐ ನ್ಯೂಸ್ಗೆ ಪ್ರತಿಕ್ರಿಯಿಸಿದ್ದಾರೆ. ಶುಭಮ್ ಭೈಯಾ ಈ ವರ್ಷ ಫೆಬ್ರವರಿ 12 ರಂದು ಮದ್ವೆಯಾಗಿದ್ದರು. ಅವರು ತಮ್ಮ ಪತ್ನಿಯೊಂದಿಗೆ ಪಹಲ್ಗಾಮ್ನಲ್ಲಿದ್ದರು. ನನ್ನ ಅತ್ತಿಗೆ ನನ್ನ ಚಿಕ್ಕಪ್ಪನಿಗೆ ಕರೆ ಮಾಡಿ ಶುಭಮ್ ತಲೆಗೆ ಗುಂಡು ಹಾರಿಸಲಾಗಿದೆ ಎಂದು ಹೇಳಿದರು. ವ್ಯಕ್ತಿಗಳ ಹೆಸರುಗಳನ್ನು ಕೇಳಿದ ನಂತರ ಗುಂಡಿನ ಹಾರಾಟ ಪ್ರಾರಂಭವಾಯಿತು ಎಂದು ಹೇಳಲಾಗುತ್ತಿದೆ.ಎಲ್ಲಾ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ನಂತರ 2-3 ದಿನಗಳ ನಂತರ ದೇಹವನ್ನು ಬಿಡುಗಡೆ ಮಾಡಲಾಗುವುದು ಎಂಬ ಮಾಹಿತಿ ನಮಗೆ ಬಂದಿದೆ ಎಂದು ಶುಭಂ ಸಂಬಂಧಿ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ನನ್ನ ಗಂಡನನ್ನು ರಕ್ಷಿಸಿ: ವಿಡಿಯೋ ವೈರಲ್
ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ದಾಳಿಯಿಂದಾಗಿ ಪ್ರವಾಸಕ್ಕೆಂದು ಆಗಮಿಸಿದ್ದ ಜನರು ಹಾಗೂ ಆಗಷ್ಟೇ ಮದುವೆ ಆಗಿ ಮಧುಚಂದ್ರಕ್ಕೆ ಆಗಮಿಸಿದವರು ನರಕ ದರ್ಶನ ಮಾಡುವಂತಾಗಿದೆ. ತಮ್ಮವರನ್ನು ರಕ್ಷಿಸಿ ಎಂದು ಅವರು ಗೋಗರೆಯುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ದಯವಿಟ್ಟು ನನ್ನ ಗಂಡನನ್ನು ಉಳಿಸಿ. ಅಯ್ಯೋ ದೇವರೇ.. ಅವರನ್ನು ಕಾಪಾಡು ಎಂದು ನವವಿವಾಹಿತೆಯೊಬ್ಬಳು ಗೋಗರೆದಿದ್ದಾಳೆ. ಇದಲ್ಲದೆ, ದಯವಿಟ್ಟು, ಯಾರಾದರೂ ಅವನನ್ನು ಆಸ್ಪತ್ರೆಗೆ ಕರೆದೊಯ್ಯಿರಿ. ದಯವಿಟ್ಟು, ದಯವಿಟ್ಟು ಸಹಾಯ ಮಾಡಿ ಎಂದು ಸಹಾಯಕ್ಕಾಗಿ ಮತ್ತೊಂದು ಕೂಗು ಕೇಳಿಬರುವ ದೃಶ್ಯವೂ ಕಂಡುಬರುತ್ತದೆ. ಅಲ್ಲದೆ, ಭಯ್ಯಾ ದಯವಿಟ್ಟು ನನ್ನ ಗಂಡನನ್ನು ಉಳಿಸು ಎಂದು ವರದಿಗಾರರಲ್ಲಿ ಒಬ್ಬರು ಅಂಗಲಾಚಿದ್ದು ಮಮ್ಮಲ ಮರುಗಿಸುವಂತಿತ್ತು.
ಭೇಲ್ಪುರಿ ತಿನ್ನುವಾಗ ದಾಳಿ
ನಾವು ಭೇಲ್ಪುರಿ ತಿನ್ನುತ್ತಿದ್ದೆವು. ನಂತರ ಅವನು ನನ್ನ ಗಂಡನಿಗೆ ಗುಂಡು ಹಾರಿಸಿದನು ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದ ಮಹಿಳೆಯೊಬ್ಬರು ನಡುಗುವ ಧ್ವನಿಯಲ್ಲಿ ವಿವರಿಸಿದ್ದಾರೆ. ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಗುಂಪಿನ ಮೇಲೆ ಬಂದೂಕುಧಾರಿಗಳು ಗುರಿಯಾಗಿಸಿಕೊಂಡವರಲ್ಲಿ ಈಕೆಯ ಪತಿಯೂ ಇದ್ದರು. ಈ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡರು. ನನ್ನ ಪತಿ ತಾನು ಮುಸ್ಲಿಂ ಅಲ್ಲ ಎಂದು ಹೇಳಿದ ನಂತರ ಬಂದೂಕುಧಾರಿ ಪತಿ ಮೇಲೆ ಗುಂಡು ಹಾರಿಸಿದ ಎಂದು ಅವರು ಆಘಾತದಿಂದ ಹೇಳಿದ್ದಾರೆ.
ಹಾಗೆಯೇ ಮಹಾರಾಷ್ಟ್ರದ ಪನ್ವೇಲ್ ನಿವಾಸಿ ದಿಲೀಪ್ ದೇಸಾಲೆ ಕೂಡ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಒಬ್ಬರಾಗಿದ್ದಾರೆ. ಗಮನಾರ್ಹವಾಗಿ 2019 ರಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿಗಳಲ್ಲಿ ಇದು ಒಂದಾಗಿದೆ. ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ವಿದೇಶಿ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ವಾಪಸಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ ಪ್ರವಾಸದಲ್ಲಿದ್ದರೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕಾ ಹಾಗೂ ಪೆರು ಪ್ರವಾಸದಲ್ಲಿದ್ದರು. ಈ ದಾಳಿಯಲ್ಲಿ ಕರ್ನಾಲ್ನ ಭಾರತೀಯ ನೌಕಾಪಡೆಯ ಯುವ ಅಧಿಕಾರಿ, ಇತ್ತೀಚೆಗೆ ವಿವಾಹವಾದ ಲೆಫ್ಟಿನೆಂಟ್ ವಿನಯ್ ನರ್ವಾಲ್, ಒಡಿಶಾದ ಲೆಕ್ಕಪತ್ರ ಅಧಿಕಾರಿ ಪ್ರಶಾಂತ್ ಸತ್ಪತಿ ಮತ್ತು ಸೂರತ್ನ ಶೈಲೇಶ್ ಕಡತಿಯಾ ಸೇರಿದಂತೆ ಹಲವಾರು ಪ್ರವಾಸಿಗರು ಸಾವನ್ನಪ್ಪಿದ್ದಾರೆ.