ಪಹಲ್ಗಾಮ್ ಉಗ್ರ ದಾಳಿ : ಪಾಕ್ ಒಪ್ಪಂದ ರದ್ದು, ಪೌರತ್ವ ವಿವಾದಕ್ಕೆ ಕೇಂದ್ರ ಸ್ಪಷ್ಟನೆ

ಕಾಶ್ಮೀರ:ಕಾಶ್ಮೀರದ ಪಹಲ್ಗಾಮ್ನ ಉಗ್ರರ ಭೀಕರ ಗುಂಡಿನ ದಾಳಿ 26 ಅಮಾಯಕರ ಜೀವವನ್ನು ಬಲಿ ಪಡೆಯಿತು. ಈ ಘಟನೆ ಸಂಭವಿಸಿದ ಮರು ದಿನವೇ ಪಾಕ್ನೊಂದಿಗಿನ ಒಪ್ಪಂದ, ಸಂಪರ್ಕಗಳನ್ನು ಕಡಿದು ಹಾಕಿದ ಭಾರತ, ಪ್ರತೀಕಾರ ತೆಗೆದುಕೊಳ್ಳುವ ಖಡಕ್ ಸೂಚನೆಯನ್ನು ರವಾನಿಸಿದೆ.
ಈ ಬೆಳವಣಿಗೆಗಳ ಬೆನ್ನಲ್ಲೇ ಪಾಕ್ ಜತೆಗಿನ ಸಿಂಧೂ ನೀರು ಒಪ್ಪಂದ, ಪಾಕಿಸ್ತಾನ ಪ್ರಜೆಗಳ ವೀಸಾ ರದ್ದು ಸೇರಿದಂತೆ ಹಲವು ಕಠಿಣ ನಿರ್ಣಯಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ.
ಸಿಂಧೂ ಒಪ್ಪಂದ ರದ್ದು, ಅಟ್ಟಾರಿ-ವಾಘಾ ಗಡಿ ಬಂದ್
ಪ್ರಸ್ತುತ ಅಟ್ಟಾರಿ-ವಾಘಾ ಗಡಿಯನ್ನು ಬಂದ್ ಮಾಡಿರುವ ಭಾರತ, ಪಾಕ್ನಿಂದ ಯಾವ ವಸ್ತು, ಜನರು ನಮ್ಮ ದೇಶದೊಳಗೆ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಿದೆ. ಇದರೊಟ್ಟಿಗೆ ಭಾರತದಲ್ಲಿದ್ದ ಪಾಕ್ನ ಪ್ರಜೆಗಳನ್ನು ನೀಡಲಾಗಿದ್ದ ಗಡುವಿನೊಳಗೆ ದೇಶದಿಂದ ಹೊರ ಹೋಗುವಂತೆ ತಿಳಿಸಲಾಯಿತು. ಅಂತೆಯೇ ಇದೀಗ ದಿನಾಂಕ ಕೂಡ ಮುಕ್ತಾಯಗೊಂಡಿದ್ದು, ಬಹುತೇಕ ಪಾಕ್ ಪ್ರಜೆಗಳು ಭಾರತ ಬಿಟ್ಟು ತಮ್ಮ ದೇಶಕ್ಕೆ ಮರಳಿದ್ದಾರೆ. ಅದರೆ, ಕೆಲವರು ನಾವು ಭಾರತದ ಪ್ರಜೆಗಳು, ನಮ್ಮ ಬಳಿ ಆಧಾರ್, ಪಾನ್ ಕಾರ್ಡ್ ಸೇರಿದಂತೆ ಪಡಿತರ ಚೀಟಿ ಕೂಡ ಇದೆ ಎಂದು ವಾದಿಸಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ತಕ್ಕ ಉತ್ತರ ಕೊಟ್ಟಿದೆ. ಗೊಂದಲಗಳಿಗೆ ಸ್ಪಷ್ಟನೆಯನ್ನೂ ನೀಡಿದೆ.
ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಪಡಿತರ ಚೀಟಿಗಳು ಭಾರತೀಯ ಪೌರತ್ವವನ್ನು ಗುರುತಿಸುವುದಿಲ್ಲ. ಪೌರತ್ವಕ್ಕೆ ಇದು ಪುರಾವೆಯೇ ಅಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪೌರತ್ವವನ್ನು ನಿರ್ಧರಿಸಲು ಜನನ ಮತ್ತು ನಿವಾಸ ಪ್ರಮಾಣಪತ್ರಗಳು ಮಾತ್ರ ಮಾನ್ಯವಾಗಿವೆ ಎಂದು ತಿಳಿಸಿದೆ. ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ -1969ರ ಪ್ರಕಾರ, ಸಂಬಂಧಪಟ್ಟ ಪ್ರಾಧಿಕಾರವು ನೀಡುವ ಜನನ ಪ್ರಮಾಣಪತ್ರ ಭಾರತದಲ್ಲಿ ಜನನವನ್ನು ಪಡೆಯುವ ಹಕ್ಕಿನ ಆಧಾರದ ಮೇಲೆ ಪೌರತ್ವವನ್ನು ಸಾಬೀತುಪಡಿಸುತ್ತದೆ ಎಂದು ಕೇಂದ್ರ ಹೇಳಿದೆ.
ಈ ಎರಡು ದಾಖಲೆ
ಅದೇ ರೀತಿ, ಒಬ್ಬ ವ್ಯಕ್ತಿಯು ನಿರ್ದಿಷ್ಟ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ ಎಂದು ದೃಢೀಕರಿಸುವ ನಿವಾಸ ಪ್ರಮಾಣಪತ್ರವು ಪೌರತ್ವವನ್ನು ನಿರ್ಧರಿಸಲು ಪ್ರಮುಖ ಆಧಾರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸರ್ಕಾರ ಒತ್ತಿ ಹೇಳಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಪಡಿತರ ಚೀಟಿಗಳು ಗುರುತಿನ ಚೀಟಿ, ವಿಳಾಸ ಪರಿಶೀಲನೆ, ತೆರಿಗೆ ಪಾವತಿ ಮತ್ತು ಕಲ್ಯಾಣ ಯೋಜನೆಗಳ ಪ್ರಯೋಜನದಂತಹ ಆಡಳಿತಾತ್ಮಕ ಉದ್ದೇಶಗಳಿಗಾಗಿ ಮಾತ್ರ ಉಪಯುಕ್ತವಾಗಿವೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಆದಾಗ್ಯೂ, ಆಧಾರ್, ಪಡಿತರ ಮತ್ತು ಪಾನ್ ಕಾರ್ಡ್ಗಳನ್ನು ಪಡೆದ ನಂತರ ಹಲವಾರು ಜನರು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಅಚ್ಚರಿ ಸಂಗತಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಮಹತ್ವದ ಸೂಚನೆಗಳನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದಾಗ್ಯೂ, ಜನನ ಪ್ರಮಾಣಪತ್ರವಿಲ್ಲದವರು ಇಲ್ಲಿನ ಪೌರತ್ವವನ್ನು ಪಡೆಯಲು ನಿವಾಸ ಪ್ರಮಾಣಪತ್ರವನ್ನು ಬಳಸಬಹುದು ಎಂದು ತಿಳಿಸಿದೆ.