‘ಟೆಲಿ ಮನಸ್’ ಗೆ ಭರ್ಜರಿ ಸ್ಪಂದನೆ: ದಿನಕ್ಕೆ 3,500 ಜನರಿಂದ ಮಾನಸಿಕ ನೆರವಿಗೆ ಕರೆ!

ಬೆಂಗಳೂರು: ಮಾನಸಿಕ ಅನಾರೋಗ್ಯ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾದ ‘ಟೆಲಿ ಮನಸ್’ ಸಹಾಯವಾಣಿಗೆ ಕರೆ ಮಾಡುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಪ್ರತಿ ನಿತ್ಯ ಸರಾಸರಿ 3.5 ಸಾವಿರ ದೂರವಾಣಿ ಕರೆಗಳನ್ನು ಸ್ವೀಕರಿಸಲಾಗುತ್ತಿದೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಈ ಸಹಾಯವಾಣಿಯನ್ನು ನಿರ್ವಹಣೆ ಮಾಡುತ್ತಿದ್ದು, ವಿವಿಧ ರೀತಿಯ ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಉಚಿತವಾಗಿ ಸಮಾಲೋಚನೆ ನಡೆಸಲಾಗುತ್ತಿದೆ.
ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯು (ಐಐಐಟಿ-ಬಿ) ಈ ಸಹಾಯವಾಣಿಗೆ ತಾಂತ್ರಿಕ ನೆರವು ಒದಗಿಸುತ್ತಿದೆ. ಮಾನಸಿಕ ಸಮಸ್ಯೆ ಹಾಗೂ ಒತ್ತಡಕ್ಕೆ ಒಳಗಾದವರಿಗೆ ಉಚಿತ ಸಲಹೆ ಹಾಗೂ ಸಮಾಲೋಚನೆ ನಡೆಸಲು 2022ರ ಅಕ್ಟೋಬರ್ನಲ್ಲಿ ಪ್ರಾರಂಭಿಸಲಾದ ಈ ಸಹಾಯವಾಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೂರು ವರ್ಷಗಳು ಕಳೆಯುವ ಮುನ್ನವೇ 20 ಲಕ್ಷಕ್ಕೂ ಅಧಿಕ ದೂರವಾಣಿ ಕರೆಗಳನ್ನು ಸ್ವೀಕರಿಸಲಾಗಿದೆ.
ವಾರದ ಎಲ್ಲ ದಿನಗಳಲ್ಲಿ 24 ಗಂಟೆಯೂ ದೂರವಾಣಿ ಕರೆಗಳನ್ನು 20 ಭಾಷೆಗಳಲ್ಲಿ ಸ್ವೀಕರಿಸಲಾಗುತ್ತಿದೆ. ವ್ಯಥೆಗೆ ಒಳಪಟ್ಟವರು, ಕೌಟುಂಬಿಕ ಸಮಸ್ಯೆ ಎದುರಿಸುತ್ತಿರುವವರು, ಶೈಕ್ಷಣಿಕ ಒತ್ತಡಕ್ಕೆ ಒಳಗಾದವರು, ಆತ್ಮಹತ್ಯೆಯ ಆಲೋಚನೆ ಮಾಡುತ್ತಿರುವವರು, ಮಾದಕ ವಸ್ತುಗಳ ಸೇವನೆಯ ವ್ಯಸನಕ್ಕೆ ಒಳಗಾದವರು, ಜ್ಞಾಪಕ ಶಕ್ತಿ ತೊಂದರೆ ಇರುವವರು, ಆರ್ಥಿಕ ಒತ್ತಡದಲ್ಲಿ ಇರುವವರು ಸೇರಿ ವಿವಿಧ ಮಾನಸಿಕ ಸಮಸ್ಯೆ ಎದುರಿಸುತ್ತಿರುವವರು ಸಹಾಯವಾಣಿಗೆ ಕರೆ ಮಾಡುತ್ತಿದ್ದಾರೆ. ಈಗಾಗಲೇ ಸ್ವೀಕರಿಸಲಾದ ದೂರವಾಣಿ ಕರೆಗಳಲ್ಲಿ ಹೆಚ್ಚಿನವರು 18ರಿಂದ 25 ವರ್ಷದೊಳಗಿನವರಾಗಿದ್ದು, ನಿದ್ದೆ, ಪರೀಕ್ಷೆ ಒತ್ತಡದಂತಹ ಸಮಸ್ಯೆಗಳ ಬಗ್ಗೆ ಸಂಪರ್ಕಿಸಿದ್ದಾರೆ.
ವಿಡಿಯೊ ಸಮಾಲೋಚನೆ ವಿಸ್ತರಣೆ: ಟೆಲಿ ಮನಸ್ ಅಡಿ ಕಳೆದ ವರ್ಷ ಪ್ರಾಯೋಗಿಕವಾಗಿ ಪ್ರಾರಂಭಿಸಲಾದ ವಿಡಿಯೊ ಸಮಾಲೋಚನೆ ಸೇವೆಗೂ ಉತ್ತಮ ಸ್ಪಂದನೆ ವ್ಯಕ್ತವಾದ್ದರಿಂದ ಇದನ್ನು ದೇಶದಾದ್ಯಂತ ವಿಸ್ತರಿಸಲು ನಿಮ್ಹಾನ್ಸ್ ಆಸಕ್ತಿ ತೋರಿದೆ. ಪ್ರತಿ ಕೇಂದ್ರದಲ್ಲಿ ಪಾಳಿಯೊಂದರಲ್ಲಿ ನಾಲ್ವರು ವೈದ್ಯರು ಹಾಗೂ ಎಂಟು ಸಮಾಲೋಚಕರು ಕಾರ್ಯನಿರ್ವಹಿಸುತ್ತಿದ್ದಾರೆ. ದೂರವಾಣಿ ಕರೆ ಮಾಡಿದವರು ಗಂಭೀರ ಮಾನಸಿಕ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಲ್ಲಿ, ಅವರಿಗೆ ವಿಡಿಯೊ ಸಮಾಲೋಚನೆ ಮಾಡಲಾಗುತ್ತಿದೆ. ಸದ್ಯ ಕರ್ನಾಟಕ, ತಮಿಳುನಾಡು ಹಾಗೂ ಜಮ್ಮು-ಕಾಶ್ಮೀರದಲ್ಲಿ ಈ ಸೇವೆ ಪರಿಚಯಿಸಲಾಗಿದೆ.
‘ಇತ್ತೀಚೆಗೆ ಮಾನಸಿಕ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಇದರಿಂದಾಗಿ ಸಹಾಯವಾಣಿಗೆ ಬರುವ ಕರೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳ ಮೇಲಿನ ಹೊರೆ ಇಳಿಯುತ್ತಿದೆ. ಸಂಸ್ಥೆಯ ಬೆಂಗಳೂರು ಹಾಗೂ ಧಾರವಾಡದ ಕೇಂದ್ರದಲ್ಲಿ ಟೆಲಿ ಮನಸ್ ಘಟಕ ಕಾರ್ಯನಿರ್ವಹಿಸುತ್ತಿದೆ’ ಎಂದು ನಿಮ್ಹಾನ್ಸ್ ವೈದ್ಯರು ತಿಳಿಸಿದರು.
ಮಾನಸಿಕ ಅನಾರೋಗ್ಯ ಸಮಸ್ಯೆಗಳ ನಿವಾರಣೆಗೆ ಟೆಲಿ ಮನಸ್ ಸಹಾಯವಾಣಿ ನೆರವಾಗುತ್ತಿದೆ. ವಿಡಿಯೊ ಸಮಾಲೋಚನೆಗೂ ಉತ್ತಮ ಸ್ಪಂದನೆ ದೊರೆತಿದ್ದು ಈ ಸೇವೆ ವಿಸ್ತರಿಸುವ ಪ್ರಸ್ತಾವವಿದೆ
- ಪ್ರೊ.ಟಿ.ಕೆ. ಶ್ರೀಕಾಂತ್ ಐಐಐಟಿ-ಬಿ ಇ-ಆರೋಗ್ಯ ಸಂಶೋಧನಾ ವಿಭಾಗದ ಮುಖ್ಯಸ್ಥ