ನಿಯಂತ್ರಣ ತಪ್ಪಿದ ಬಸ್ ಪಾದಚಾರಿಗಳ ಮೇಲೆ ಹರಿತ: 4 ಸಾವು

ಮುಂಬೈ: ಮುಂಬೈನ ಭಾಂಡೂಪ್ ಪಶ್ಚಿಮದಲ್ಲಿ ಸೋಮವಾರ ತಡರಾತ್ರಿ ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಬಸ್ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಇತರ ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.


ಭಾಂಡೂಪ್ ಪಶ್ಚಿಮ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಮುಂಬೈ ಡಿಸಿಪಿ ಹೇಮರಾಜ್ ಸಿಂಗ್ ರಜಪೂತ್, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ನಾಲ್ವರು ಮೃತಪಟ್ಟಿದ್ದಾರೆ. ಮೃತಪಟ್ಟ ನಾಲ್ವರಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬರು ಪುರುಷರಾಗಿದ್ದರೆ, ಗಾಯಗೊಂಡ ಒಂಬತ್ತು ಜನರಲ್ಲಿ ಎಂಟು ಪುರುಷರು ಮತ್ತು ಒಬ್ಬ ಮಹಿಳೆ ಸೇರಿದ್ದಾರೆ.
ಮುಂಬೈ ಪೊಲೀಸರ ಪ್ರಕಾರ, ಅಪಘಾತದ ಬಗ್ಗೆ ತನಿಖೆ ಮುಂದುವರೆದಿರುವುದರಿಂದ ಬೆಸ್ಟ್ ಬಸ್ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
“ಅಪಘಾತದಲ್ಲಿ ಭಾಗಿಯಾಗಿರುವ ಬೆಸ್ಟ್ ಬಸ್ನಲ್ಲಿ ಯಾವುದೇ ಯಾಂತ್ರಿಕ ಮತ್ತು ತಾಂತ್ರಿಕ ದೋಷಗಳಿವೆಯೇ ಎಂದು ಪರಿಶೀಲಿಸಲಾಗುವುದು ಮತ್ತು ಅಪಘಾತಕ್ಕೆ ನಿಜವಾದ ಕಾರಣವನ್ನು ಸಮಗ್ರ ತನಿಖೆಯ ನಂತರ ನಿರ್ಧರಿಸಲಾಗುವುದು” ಎಂದು ಡಿಸಿಪಿ ಹೇಮರಾಜ್ ಸಿಂಗ್ ರಜಪೂತ್ ಸುದ್ದಿಗಾರರಿಗೆ ತಿಳಿಸಿದರು. ತನಿಖೆ ಮುಂದುವರೆದಿರುವುದರಿಂದ ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ.