ಆಪರೇಷನ್ ಸಿಂಧೂರ: ಪಾಕ್ ಉಗ್ರರ ಮೇಲಿನ ದಾಳಿಗೆ ಅಜಿತ್ ದೋವಲ್ ನೇತೃತ್ವದ ಟಾಪ್ ಸೀಕ್ರೆಟ್ ಕಾರ್ಯಾಚರಣೆ

ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಪಾಕ್ ಉಗ್ರರು ಹಾಗೂ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರದ ಹಿಂದಿನ ಟಾಪ್ ಸೀಕ್ರೆಟ್ಗಳು ಗೊತ್ತಿದ್ದಿದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಒಬ್ಬರಿಗೆ ಮಾತ್ರ ಎಂಬ ವಿಚಾರ ಬಹಿರಂಗವಾಗಿದೆ.
ಉಗ್ರರನ್ನು ಸೆದೆಬಡಿಯಲು ಹಲವು ಟಾರ್ಗೆಟ್ಗಳ ಪಟ್ಟಿ ಸಿದ್ಧಪಡಿಸಲಾಗಿತ್ತು. ಇದರಲ್ಲಿ ನಿಖರ ಟಾರ್ಗೆಟ್ ಲಿಸ್ಟ್ ದೋವಲ್ ಅವರಿಗೆ ಮಾತ್ರ ಗೊತ್ತಿತ್ತು. ಅವರು ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುವುದಲ್ಲದೆ, ಉಗ್ರರ ಹತ್ಯೆ, ಕಾರ್ಯತಂತ್ರದ ಗೌಪ್ಯತೆಯ ನಿರ್ವಹಣೆಯನ್ನು ಮಾಡಿದ್ದರು. ಕಾರ್ಯಾಚರಣೆಗೆ ಕೇವಲ ಎರಡು ಗಂಟೆಗಳ ಮೊದಲು ಈ ಪಟ್ಟಿಗಳನ್ನು ಸೇನೆಯ ಎಲ್ಲಾ ವಿಭಾಗದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿತ್ತು ಎಂದು ಸರ್ಕಾರಿ ಉನ್ನತ ಮೂಲಗಳು ತಿಳಿಸಿವೆ.
ಎರಡು ಹಂತದ ದಾಳಿಗೆ ಸಿದ್ಧತೆ ನಡೆಸಿದ್ದ ಭಾರತ!
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಚಕ್ರವ್ಯೂಹವನ್ನು ಎರಡು-ಹಂತದಲ್ಲಿ ರಚಿಸಲಾಗಿತ್ತು. ಮೊದಲ ಹಂತದಲ್ಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಪಂಜಾಬ್ನಾದ್ಯಂತ ಇರುವ ಲಷ್ಕರ್-ಎ-ತೈಬಾ (LeT) ಮತ್ತು ಜೈಶ್-ಎ-ಮೊಹಮ್ಮದ್ (JeM) ನಂತಹ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಉಗ್ರರ ನೆಲೆಗಳು, ಅಡಗು ತಾಣಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಣಾ ಘಟಕಗಳನ್ನು ಹೊಡೆಯುವುದು ಉದ್ದೇಶವಾಗಿತ್ತು.
ಇನ್ನೂ 2ನೇ ಹಂತದಲ್ಲಿ ಪಾಕ್ ಸೇನೆಯ ಡ್ರೋನ್ ನೆಲೆಗಳು ಮತ್ತು ಸೇನಾ ನೆಲೆಗಳು ಸೇರಿದಂತೆ, ಸೇನೆಯ ಶಸ್ತ್ರಾಸ್ತ್ರ ಸಂಗ್ರಹಣ ಘಟಕಗಳನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಪಾಕಿಸ್ತಾನ ಸೇನೆ ನೇರವಾಗಿ ಪ್ರತಿಕ್ರಿಯಿಸಿದರೆ ಮಾತ್ರ ಈ ದಾಳಿ ನಡೆಸಲು ಯೋಜಿಸಲಾಗಿತ್ತು.
ಭಾರತದ ಗುಪ್ತಚರ ಸಾಮರ್ಥ್ಯ
ಆಪರೇಷನ್ ಸಿಂಧೂರದ ವೇಳೆ ವಿಶೇಷವಾಗಿ ಪಿಒಕೆ ಮತ್ತು ಪಾಕಿಸ್ತಾನದ ಪಂಜಾಬ್ನೊಳಗಿನ ಸಕ್ರಿಯ ಉಗ್ರರ ಕೇಂದ್ರಗಳನ್ನು ಗುರುತಿಸಿ ದಾಳಿ ನಡೆಸಲಾಗಿದೆ. ಜನಸಾಮಾನ್ಯರಿಗೆ ತೊಂದರೆ ಆಗದಂತೆ ದಾಳಿ ನಡೆಸಲು ನೈಜ ಸಮಯದ ಮಾಹಿತಿಯನ್ನು ಸೇನೆಯ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ದಾಳಿ ನಡೆದಿದೆ. ಉಗ್ರರ ಅಡಗು ತಾಣಗಳನ್ನು ಗುರುತಿಸಲು ಇಸ್ರೋದ ನೆರವಿನಿಂದ ಉಪಗ್ರಹ ಆಧಾರಿತ ಚಿತ್ರಗಳನ್ನು ಸಹ ಬಳಸಲಾಗಿತ್ತು. ಇದು ದಾಳಿಯ ನಿಖರತೆ ಮತ್ತು ಮತ್ತು ನಾಗರಿಕರ ಸಾವುನೋವುಗಳನ್ನು ತಪ್ಪಿಸಲು ಸಹಕಾರಿಯಾಗಿತ್ತು.
ಪಾಕ್ಗೆ ಖಡಕ್ ಸಂದೇಶ
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿರಿಸಿಕೊಂಡು ಮೇ 7ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಲಾಯಿತು. ಇದಾದ ಸ್ವಲ್ಪ ಸಮಯದ ನಂತರ, ಪಾಕಿಸ್ತಾನದ ಸೇನೆ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಯಲ್ಲಿ ಶೆಲ್ ದಾಳಿ ನಡೆಸಿತ್ತು. ಅಲ್ಲದೇ ಗಡಿಯುದ್ದಕ್ಕೂ ಡ್ರೋನ್ ದಾಳಿ ನಡೆಸಲು ಪ್ರಯತ್ನಿಸಿತು. ಇದಾದ ಬಳಿಕ ರಾಡಾರ್ ವ್ಯವಸ್ಥೆಗಳು, ಸಂವಹನ ಕೇಂದ್ರಗಳು ಮತ್ತು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು 11 ವಾಯುನೆಲೆಗಳ ಮೇಲೆ ವ್ಯಾಪಕ ದಾಳಿ ನಡೆಸುವ ಮೂಲಕ ಭಾರತ ಸೂಕ್ತ ಉತ್ತರ ನೀಡಿತ್ತು. ನಂತರ ಮೇ 10 ರಂದು, ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಉದ್ವಿಗ್ನತೆ ಕಡಿಮೆಯಾಗಿತ್ತು.