ಆಪರೇಷನ್ ಸಿಂಧೂರ: ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ನಿಖರ ದಾಳಿ, ಬ್ರಹ್ಮೋಸ್ ಶಕ್ತಿ ನೋಡಿ ಜಗತ್ತೆ ಬೆರಗು

ನವದೆಹಲಿ: ಕಾಶ್ಮೀರದ ಪೆಹಲ್ಗಾಮ್ನಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಭಾರತ ತಿರುಗೇಟು ನೀಡಲು ಟಾರ್ಗೆಟ್ ನಿಖರವಾಗಿತ್ತು. ಟೈಂ ಫಿಕ್ಸ್ ಆಗಿತ್ತು. ಹೇಗೆ ಹೊಡೆಯಬೇಕು ಎನ್ನುವುದಕ್ಕೂ ಮೂಹರ್ತ ಫಿಕ್ಸ್ ಆಗಿತ್ತು. ಭಾರತೀಯ ಸೇನೆಗೆ ಮಿಸೈಲ್ಗಳು, ರಾಕೆಟ್ಗಳು ಸಿಡಿಯುತ್ತಿದ್ದಂತೆ ಪಾಕಿಸ್ತಾನ ಪತರಗುಟ್ಟಿದ್ರೆ, ಇಡೀ ವಿಶ್ವವೇ ಭಾರತದ ಶಕ್ತಿ ಸಾಮರ್ಥವ್ಯವನ್ನ ಕಂಡು ಮೂಗಿನ ಮೇಲೆ ಬೆರಳಿಟ್ಟುಕೊಂಡಿತ್ತು. ಮೇ 9ರ ರಾತ್ರಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ರಣರೋಚಕವಾಗಿತ್ತು. ಇದೀಗ ಇದೇ ಆಪರೇಷನ್ ಸಿಂಧೂರದ ಯುದ್ಧತಂತ್ರದ ರಹಸ್ಯ ಬಯಲಾಗಿದೆ. ಪಾಕಿಸ್ತಾನಕ್ಕೆ ಗೊತ್ತಾಗದಂತೆ ನುಗ್ಗಿ ಹೊಡೆದಿದ್ಹೇಗೆ ಅನ್ನೋ ಸಂಗತಿ ಟಿವಿ9ಗೆ ಉನ್ನತ ಮೂಲಗಳಿಂದ ಗೊತ್ತಾಗಿದ್ದು, ಅದು ಈ ಕೆಳಗಿನಂತಿದೆ ನೋಡಿ.
ವಾಯುಪಡೆ ‘ಡಮ್ಮಿ ಜೆಟ್’ ರಹಸ್ಯ!
ಮೊದಲಿಗೆ ಪಾಕಿಸ್ತಾನ ರಡಾರ್ ಅಲರ್ಟ್ ಇದ್ಯಾ? ಇಲ್ವಾ ಎಂದು ಭಾರತೀಯ ಸೇನೆ ಪರಿಶೀಲನೆ ಮಾಡಲು ಪ್ಲ್ಯಾನ್ ಮಾಡಿತ್ತು. ಪೈಲಟ್ ರಹಿತ ಡಮ್ಮಿ ಏರ್ಕ್ರಾಫ್ಟ್ಗಳನ್ನ ಪಾಕ್ನತ್ತ ಹಾರಿಸಿತ್ತು.. ಪಾಕಿಸ್ತಾನದ ರಡಾರ್ಗಳಿಗೆ ಫೈಟರ್ ಜೆಟ್ನಂತೆ ಕಾಣಿಸುವಂತೆ ಮಾಡಿತ್ತು. ಭಾರತದ ಈ ಡಮ್ಮಿ ಜೆಟ್ಗಳು ಬರುತ್ತಿದ್ದಂತೆಯೇ ಪಾಕ್ ರಡಾರ್ಗಳು, ಏರ್ ಡಿಫೆನ್ಸ್ ವ್ಯವಸ್ಥೆ ಅಲರ್ಟ್ ಆಗಿದ್ದವು. ಡಮ್ಮಿ ಜೆಟ್ಗಳನ್ನ ಹೊಡೆದುರುಳಿಸಲು ಪಾಕಿಸ್ತಾನ ಮುಂದಾಗಿತ್ತು. ಹೀಗೆ ಡಮ್ಮಿ ಹಿಂದೆ ಹೋಗಿ ದಾರಿ ತಪ್ಪಿದ ಪಾಕಿಸ್ತಾನದ ಮೇಲೆ ಭಾರತ ಡ್ರೋನ್ಗಳ ಮಳೆ ಸುರಿಸಿತ್ತು. ಇಸ್ರೇಲ್ ನಿರ್ಮಿತ ಹಾರೋಪ್, ಮತ್ತು ಲಾಯ್ಟರ್ ಮ್ಯೂನಿಷನ್ಸ್ ಡ್ರೋನ್ ದಾಳಿ ಮಾಡಿತ್ತು. ಪಾಕಿಸ್ತಾನದ ಏರ್ ಡಿಫೆನ್ಸ್, ರಡಾರ್ಗಳು ಮತ್ತು ಕಮಾಂಡ್ ಸೆಂಟರ್ಗಳ ಮೇಲೆ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡಿತ್ತು.
ಪಾಕಿಸ್ತಾನ ಡ್ರೋನ್ ಮಳೆ ಸುರಿಯುತ್ತಿದ್ದಂತೆ ತನ್ನ ಬಳಿ ಇದ್ದ ಚೀನಾ ನಿರ್ಮಿತ HQ9 ಏರ್ ಡಿಫೆನ್ಸ್ ಮಿಸೈಲ್ಗಳು ಮತ್ತು ರಡಾರ್ಗಳನ್ನ ಬೇರೆಡೆಗೆ ಶಿಫ್ಟ್ ಮಾಡಲು ಮುಂದಾಗಿತ್ತು. ಕೆಲವನ್ನ ಹೊಸ ಜಾಗಕ್ಕೆ ಸ್ಥಳಾಂತರಿಸಿದ್ರೂ ಭಾರತದ ಕಣ್ಣಿಗೆ ಬಿದ್ದಿದ್ದವು. ಪಾಕಿಸ್ತಾನದ ಎಲ್ಲಾ ಏರ್ ಡಿಫೆನ್ಸ್ ವ್ಯವಸ್ಥೆಯನ್ನ ದಿಕ್ಕಾಪಾಲು ಮಾಡಿದ ಭಾರತ, ತಡ ಮಾಡದೆ ಕ್ಷಿಪಣಿ ದಾಳಿ ಶುರುಮಾಡಿತ್ತು. ರಫೇಲ್ ಜೆಟ್ಗಳ ಮೂಲಕ ಬ್ರಹ್ಮೋಸ್ ಮತ್ತು ಸ್ಕಾಲ್ಪ್ ಮಿಸೈಲ್ಗಳ ದಾಳಿ ನಡೆಸಿತ್ತು. ಬರೋಬ್ಬರಿ 15 ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಮಿಸೈಲ್ಗಳ ದಾಳಿ ಮಾಡಿತ್ತು. ಇದರ ಜೊತೆಗೆ ಇಸ್ರೇಲ್ನ ಱಂಪೇಜ್ ಮತ್ತು ಕ್ರಿಸ್ಟಲ್ ಮೇಜ್ ಕ್ಷಿಪಣಿಗಳನ್ನ ಕೂಡಾ ವಾಯುಪಡೆ ಬಳಸಿತ್ತು. ಈ ಮೂಲಕ ಪಾಕಿಸ್ತಾನದ 12 ವಾಯುನೆಲೆಗಳ ಪೈಕಿ 11 ವಾಯುನೆಲೆಗಳು ಮಿಸೈಲ್ ದಾಳಿಗೆ ತುತ್ತಾಗಿದ್ದವು.
ಸೇನಾ ಕಚೇರಿ ಸ್ಥಳಾಂತರಕ್ಕೆ ನಿರ್ಧಾರ
ಇನ್ನು ಭಾರತದ ರಣಬೇಟೆಗೆ ಪತರುಗುಟ್ಟಿರೋ ಪಾಪಿ ಪಾಕಿಸ್ತಾನ, ತನ್ನ ಸೇನಾ ಜನರಲ್ ಪ್ರಧಾನ ಕಚೇರಿ ಸ್ಥಳಾಂತರಕ್ಕೆ ನಿರ್ಧಾರ ಮಾಡಿದೆ ಎಂದು ಟಿವಿ9ಗೆ ಉನ್ನತ ಮೂಲಗಳು ಮಾಹಿತಿ ನೀಡಿವೆ. ಚಕ್ಲಾಲಾದಲ್ಲಿರೋ ಸೇನಾ ಜನರಲ್ ಪ್ರಧಾನ ಕಚೇರಿಯನ್ನ ಇಸ್ಲಾಮಾಬಾದ್ಗೆ ಸ್ಥಳಾಂತರ ಮಾಡುವ ಬಗ್ಗೆ ಪಾಕ್ ಚಿಂತನೆ ನಡೆಸಿದ್ದು. ಸೇನಾ ಮುಖ್ಯಸ್ಥರ ನಿವಾಸವೂ ಕೂಡ ಬದಲಾಗೋ ಸಾಧ್ಯತೆ ಇದೆ ಎನ್ನಲಾಗಿದೆ.
ಬ್ರಹ್ಮೋಸ್ ತಾಕತ್ತಿಗೆ ಇಡೀ ವಿಶ್ವವೇ ಅಚ್ಚರಿ!
ಪಾಕಿಸ್ತಾನದ ಮೇಲೆ ದಾಳಿ ನಡೆಸಿದ ಪ್ರಮುಖ ಮಿಸೈಲ್ಗಳಲ್ಲಿ ಬ್ರಹ್ಮೋಸ್ ಕೂಡಾ ಒಂದು.. ಇದೇ ಬ್ರಹ್ಮೋಸ್ ಪಾಕಿಸ್ತಾನ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ದುಸ್ವಪ್ನದಂತೆ ಕಾಡುತ್ತಿದೆ. ಯಾಕಂದ್ರೆ ಚೀನಾದ ಏರ್ ಡಿಫೆನ್ಸ್ ಸಿಸ್ಟಂಗಳನ್ನೇ ಬ್ರಹ್ಮೋಸ್ ಛಿದ್ರ ಮಾಡಿದ್ದು, ಭಾರತದ ಬಾಹುಬಲಿ ಕಂಡು ಇಡೀ ವಿಶ್ವವೇ ಅಚ್ಚರಿಗೊಂಡಿದೆ. ಈ ಬ್ರಹ್ಮೋಸ್ ವಿಶ್ವದ ಅತ್ಯಂತ ವೇಗದ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಆಗಿದ್ದು. ಇದರ ವೇಗ 3 ಮ್ಯಾಕ್ ಅಂದರೆ ಗಂಟೆಗೆ ಸುಮಾರು 3,700 ಕಿಲೋ ಮೀಟರ್ ಇದೆ. ಬ್ರಹ್ಮೋಸ್ನ ವ್ಯಾಪ್ತಿಯು 600 ಕಿಲೋ ಮೀಟರ್ಗಳವರೆಗೆ ಇರುತ್ತದೆ.
ಪಾಕಿಸ್ತಾನವನ್ನ ಹೆಚ್ಚು ಹೆದರಿಸುವ ಭಾರತದ ಆಯುಧ ಅಂದ್ರೆ ಅದು ಬ್ರಹ್ಮೋಸ್. ಯಾಕಂದ್ರೆ, ಅಮೃತಸರದಿಂದ ಲಾಹೋರ್ಗೆ ಇರುವ ದೂರ 55 ಕಿಲೋ ಮೀಟರ್ಗಳು. ಬ್ರಹ್ಮೋಸ್ ಕ್ಷಿಪಣಿಯ ವೇಗ ಪರಿಗಣಿಸಿದ್ರೆ, ಲಾಹೋರ್ನ್ನ 72 ಸೆಕೆಂಡ್ಗಿಂತ ಕಡಿಮೆ ಅವಧಿಯಲ್ಲಿಯೇ ಗುರಿ ರೀಚ್ ಆಗುತ್ತೆ. ಅಮೃತಸರದಿಂದ ಇಸ್ಲಾಮಾಬಾದ್ ನಡುವಿನ ದೂರ 287 ಕಿಲೋ ಮೀಟರ್ ಆಗಿದ್ದು. ಬ್ರಹ್ಮೋಸ್ 5 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ನಾಶ ಮಾಡುತ್ತೆ. ಭುಜ್ನಿಂದ ಕರಾಚಿಗಿರುವ ಒಟ್ಟು ದೂರ 325 ಕಿಲೋ ಮೀಟರ್ ಗುರಿಯನ್ನ ತಲುಪಲು 5-6 ನಿಮಿಷಗಳು ತೆಗೆದುಕೊಳ್ಳಬಹುದಾಗಿದೆ. ಸದ್ಯ ಬ್ರಹ್ಮೋಸ್ ಕ್ಷಿಪಣಿ ಸಾಮರ್ಥ್ಯ ಕಂಡಿರುವ ಜಗತ್ತು ನಿಬ್ಬೆರಗಾಗಿದೆ. ಅಷ್ಟೇ ಅಲ್ಲ ಬ್ರಹ್ಮೋಸ್ಗೆ ಡಿಮ್ಯಾಂಡ್ ಕೂಡಾ ಹೆಚ್ಚಾಗಿದೆ. ಥೈಲ್ಯಾಂಡ್, ಸಿಂಗಾಪುರ, ಈಜಿಪ್ಟ್, ಸೌದಿ ಸೇರಿದಂತೆ 12 ದೇಶಗಳು ಬ್ರಹ್ಮೋಸ್ ಖರೀದಿಗೆ ಮಾತುಕತೆ ನಡೆಸಿವೆ.
ಭಾರತೀಯ ಸೇನೆಗೆ ಮತ್ತಷ್ಟು ಬಲ ನೀಡಲು ಕೇಂದ್ರ ಪ್ಲ್ಯಾನ್
ಆಪರೇಷನ್ ಸಿಂಧೂರ ಸಕ್ಸಸ್ ಆದ ಬಳಿ, ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಮತ್ತಷ್ಟು ಬಲ ನೀಡಲು ಮುಂದಾಗಿದೆ. ಕೇಂದ್ರ ಸರ್ಕಾರ ರಕ್ಷಣಾ ಇಲಾಖೆ ಬಜೆಟ್ ಅನುದಾನವನ್ನ ಮತ್ತಷ್ಟು ಹೆಚ್ಚಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಅಂದ್ರೆ, ಪೂರಕ ಬಜೆಟ್ ಮೂಲಕ ಹೆಚ್ಚುವರಿಯಾಗಿ 50,000 ಕೋಟಿ ರೂಪಾಯಿ ಒದಗಿಸಲು ಮುಂದಾಗಿದ ಎನ್ನಲಾಗಿದೆ.