ಆಪರೇಷನ್ ಸಿಂಧೂರ ಪರಾಕ್ರಮ: ಭಾರತದ ದಾಳಿಗೆ ನಲುಗಿದ ಪಾಕ್; ಸತ್ಯ ಒಪ್ಪಿಕೊಂಡ ವಿದೇಶಾಂಗ ಸಚಿವ ಇಶಾಕ್ ದಾರ್!

ಇಸ್ಲಾಮಾಬಾದ್: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ಭಾರತದ ಪರಾಕ್ರಮ ಮತ್ತೊಮ್ಮೆ ಸಾಬೀತಾಗಿದೆ. ಖುದ್ದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ (Ishaq Dar) ಈ ಸತ್ಯವನ್ನ ಒಪ್ಪಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, ಕಳೆದ ಮೇ ತಿಂಗಳಲ್ಲಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ (Pakistan) ರಾವಲ್ಪಿಂಡಿಯ ಚಕ್ಲಾಲಾ ಪ್ರದೇಶದಲ್ಲಿರುವ ನೂರ್ ಖಾನ್ ವಾಯುನೆಲೆ (Nur Khan Base) ತೀವ್ರ ಹಾನಿಗೊಳಗಾಗಿದೆ. ಅಂದು 36 ಗಂಟೆಗಳ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 80 ಡ್ರೋನ್ಗಳು ಪಾಕ್ ಮೇಲೆ ಬಿದ್ದವು. ಇದೇ ಸಂದರ್ಭದಲ್ಲಿ ನೂರ್ ಖಾನ್ ವಾಯುನೆಲೆ ಹಾನಿಗೊಳಗಾಯಿತು. ಅಲ್ಲಿದ್ದ ಅನೇಕ ಸಿಬ್ಬಂದಿ ಗಾಯಗೊಂಡರು ಎಂದು ತಿಳಿಸಿದ್ದಾರೆ

ಭಾರತ (India) ಅಲ್ಪಾವಧಿಯಲ್ಲೇ ಪಾಕ್ನ ವಿವಿಧ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆ ಡ್ರೋನ್ಗಳನ್ನ (Drone) ಉಡಾಯಿಸಿತು. ಭಾರತ ಹಾರಿಸಿದ 80 ಡ್ರೋನ್ಗಳಲ್ಲಿ 79 ಡ್ರೋನ್ಗಳನ್ನ ಪಾಕ್ ತಡೆದಿತ್ತು. ಆದ್ರೆ ಒಂದು ಡ್ರೋನ್ ವಾಯುನೆಲೆಯನ್ನ ಧ್ವಂಸಗೊಳಿಸಿತು. ಈ ವೇಳೆ ಅಲ್ಲಿದ್ದ ಕೆಲ ಟಾಪ್ ಕಮಾಂಡರ್ಗಳು ಸೇರಿದಂತೆ ಅನೇಕ ಸಿಬ್ಬಂದಿ ಗಾಯಗೊಂಡರು ಎಂದಿದ್ದಾರೆ.

ಭಾರತ ನಡೆಸಿದ್ದು ನಿರೀಕ್ಷೆಗೂ ಮೀರಿದ ದಾಳಿ
ಮೇ 9ರ ರಾತ್ರಿ ಪರಿಸ್ಥಿತಿಗಳನ್ನ ಚರ್ಚಿಸಲು ಹಾಗೂ ಕೆಲ ನಿರ್ಧಾರಗಳನ್ನ ತೆಗೆದುಕೊಳ್ಳಲು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆದ್ರೆ ಮರುದಿನವೇ ಬೆಳಗ್ಗೆಯೇ ನಮ್ಮ ಊಹೆಗೂ ಮೀರಿದಂತೆ ನೂರ್ ಖಾನ್ ವಾಯುನೆಲೆ ಮೇಲೆ ಭಾರತ ದಾಳಿ ಮಾಡಿತ್ತು ಎಂದು ಸತ್ಯ ಒಪ್ಪಿಕೊಂಡಿದ್ದಾರೆ.

ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆಯು ಪಾಕಿಸ್ತಾನ ವಾಯುಪಡೆಯ ಪ್ರಮುಖ ಮಿಲಿಟರಿ ಸೌಲಭ್ಯ ಕೇಂದ್ರವಾಗಿದೆ. ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತ ಈ ನೆಲೆಯನ್ನ ಧ್ವಂಸಗೊಳಿಸಿತ್ತು. ಇದರೊಂದಿಗೆ ಸರ್ಗೋಧಾ, ರಫೀಕಿ, ಜಾಕೋಬಾಬಾದ್ ಮತ್ತು ಮುರಿಡ್ಕೆ ಸೇರಿದಂತೆ 11 ವಾಯುನೆಲೆಗಳನ್ನ ಉಡೀಸ್ ಮಾಡಿತ್ತು ಅನ್ನೋದು ಸಾಕ್ಷಿ ಸಮೇತ ಸಾಬೀತಾಗಿದೆ.