ಆಪರೇಷನ್ ಸಿಂಧೂರ್: ಪಾಕಿಸ್ತಾನಕ್ಕೆ ಜಾಗತಿಕ ಬೆಂಬಲ ಹಾಗೂ ದೇಶಗಳ ಪ್ರತಿಕ್ರಿಯೆಗಳು

ನವದೆಹಲಿ : ಭಾರತವು ಆಪರೇಷನ್ ಸಿಂಧೂರ್ ಮೂಲಕ ಉಗ್ರ ನೆಲೆಗಳನ್ನು ಉಡೀಸ್ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಕೂಡ ತೊಡೆತಟ್ಟಿದೆ. ಭಾರತಕ್ಕೆ ಪ್ರತ್ಯುತ್ತರ ಕೊಡ್ತೀವಿ ಎಂದು ಶಪಥ ಮಾಡಿದೆ. ಈ ಹಿನ್ನೆಲೆ ಭಾರತ ಕೂಡ ಹೈಅಲರ್ಟ್ ಆಗಿದೆ. ಇನ್ನು ಪಾಕ್ ಮೇಲಿನ ಈ ಕ್ಷಿಪಣಿ ದಾಳಿಯನ್ನು ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಶ್ಲಾಘಿಸಿವೆ.
ಅತ್ತ ದಿಕ್ಕುತೋಚದೆ ಪರದಾಡುತ್ತಿರುವ ಪಾಕಿಸ್ತಾನಕ್ಕೆ ಇದೀಗ ಟರ್ಕಿ ಬೆಂಬಲ ಸೂಚಿಸಿವೆ.
ಆಪರೇಷನ್ ಸಿಂಧೂರ್ ನಂತರ ಟರ್ಕಿ ಮತ್ತು ಕತಾರ್ ವಿದೇಶಾಂಗ ಸಚಿವಾಲಯಗಳು ಪಾಕಿಸ್ತಾನಕ್ಕೆ ಸಂಯಮದಿಂದ ಇರಬೇಕೆಂದು ಒತ್ತಾಯಿಸಿವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಗೆ ರಾಜತಾಂತ್ರಿಕ ಪರಿಹಾರಗಳಿಗೆ ಕರೆ ಕೂಡ ನೀಡಿವೆ. ಟರ್ಕಿಯ ವಿದೇಶಾಂಗ ಸಚಿವಾಲಯವು ನಾವು ಪಾಕಿಸ್ತಾನ ಮತ್ತು ಭಾರತದ ನಡುವಿನ ಬೆಳವಣಿಗೆಗಳನ್ನು ಕಳವಳದಿಂದ ಗಮನಿಸುತ್ತಿದ್ದೇವೆ. ಭಾರತ ನಿನ್ನೆ ರಾತ್ರೋರಾತ್ರಿ ನಡೆಸಿದ ದಾಳಿಯು ಸಂಪೂರ್ಣ ಯುದ್ಧದ ಅಪಾಯವನ್ನು ಹೆಚ್ಚಿಸುತ್ತದೆ. ನಾಗರಿಕರು ಮತ್ತು ಅವರ ಸ್ಥಳಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಗಳನ್ನು ನಾವು ಖಂಡಿಸುತ್ತೇವೆ ಎಂದು ಎಕ್ಸ್ನಲ್ಲಿ ತಿಳಿಸಿದೆ.
ಈ ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸಾಧ್ಯವಾದಷ್ಟು ಬೇಗ ಕ್ರಮಗಳನ್ನು ತೆಗೆದುಕೊಳ್ಳಲು ಹಾಗೂ ಭಯೋತ್ಪಾದನಾ ನಿಗ್ರಹ ಕ್ಷೇತ್ರ ಸೇರಿದಂತೆ ಅಗತ್ಯ ಕಾರ್ಯವಿಧಾನಗಳನ್ನು ಜಾರಿಗೆ ತರುವುದನ್ನು ಎಂದು ನಾವು ನಿರೀಕ್ಷಿಸುತ್ತೇವೆ. ಏಪ್ರಿಲ್ 22ರ ಭಯೋತ್ಪಾದಕ ದಾಳಿಯ ತನಿಖೆಗೆ ಪಾಕಿಸ್ತಾನದ ಕರೆಯನ್ನು ನಾವು ಬೆಂಬಲಿಸುತ್ತೇವೆ ಎಂದು ಟರ್ಕಿಯ ವಿದೇಶಾಂಗ ಸಚಿವಾಲಯ ಹೇಳಿದೆ.
ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಜಾಗತಿಕ ಬೆಂಬಲ ದೊರೆತ ನಂತರ ಪಾಕಿಸ್ತಾನವನ್ನು ಬೆಂಬಲಿಸಿದ ಕೆಲವೇ ದೇಶಗಳಲ್ಲಿ ಟರ್ಕಿ ಕೂಡ ಒಂದಾಗಿದೆ. ಈ ದಾಳಿಯ ನಂತರ ಅಜೆರ್ಬೈಜಾನ್ (Azerbaijan) ರಾಷ್ಟ್ರ ಕೂಡ ಪಾಕಿಸ್ತಾನದ ವಿರುದ್ಧದ ಹಿಂಸಾಚಾರವನ್ನು ಖಂಡಿಸಿ ಹೇಳಿಕೆ ನೀಡಿದೆ. ಭಾರತ ಮತ್ತು ಪಾಕಿಸ್ತಾನ ಇಸ್ಲಾಮಿಕ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುತ್ತಿರುವ ಬಗ್ಗೆ ಅಜೆರ್ಬೈಜಾನ್ ಗಣರಾಜ್ಯವು ತನ್ನ ಕಳವಳವನ್ನು ವ್ಯಕ್ತಪಡಿಸುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ಲಾಮಿಕ್ ಗಣರಾಜ್ಯವಾದ ಪಾಕಿಸ್ತಾನದ ಮೇಲೆ ನಡೆದ ಮಿಲಿಟರಿ ದಾಳಿಯನ್ನು ನಾವು ಖಂಡಿಸುತ್ತೇವೆ. ಹಲವಾರು ನಾಗರಿಕರನ್ನು ಕೊಂದು ಗಾಯಗೊಳಿಸಿದ್ದು ಖಂಡನೀಯ. ಪಾಕಿಸ್ತಾನದ ಜನರೊಂದಿಗೆ ನಾವು ಒಗ್ಗಟ್ಟಿನಿಂದ ಇರುತ್ತೇವೆ. ದಾಳಿಯಲ್ಲಿ ಜೀವ ಕಳೆದುಕೊಂಡ ಅಮಾಯಕ ಬಲಿಪಶುಗಳ ಕುಟುಂಬಗಳಿಗೆ ನಾವು ಸಂತಾಪ ಸೂಚಿಸುತ್ತೇವೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇವೆ ಎಂದು ಅಜೆರ್ಬೈಜಾನ್ ಹೇಳಿದೆ.
ಇಬ್ಬರೂ ಸಂಯಮದಿಂದ ಇರಿ ಎಂದ ಕತಾರ್
ಆಪರೇಷನ್ ಸಿಂಧೂರ್ ಬಗ್ಗೆ ಕತಾರ್ ಕೂಡ ಪ್ರತಿಕ್ರಿಯಿಸಿದೆ. ಭಾರತ ಮತ್ತು ಪಾಕಿಸ್ತಾನ ಇಸ್ಲಾಮಿಕ್ ಗಣರಾಜ್ಯ ನಡುವಿನ ನಿರಂತರ ಉದ್ವಿಗ್ನತೆಯನ್ನು ಕತಾರ್ ದೇಶ ತೀವ್ರ ಕಳವಳದಿಂದ ಗಮನಿಸುತ್ತಿದೆ. ಎರಡೂ ದೇಶಗಳು ಸಂಯಮವನ್ನು ಕಾಯ್ದುಕೊಳ್ಳಲು, ಬುದ್ಧಿವಂತಿಕೆಗೆ ಆದ್ಯತೆ ನೀಡಲು, ಉತ್ತಮ ನೆರೆಹೊರೆಯ ತತ್ವಗಳನ್ನು ಗೌರವಿಸಲು ಮತ್ತು ರಾಜತಾಂತ್ರಿಕ ವಿಧಾನಗಳ ಮೂಲಕ ಬಿಕ್ಕಟ್ಟನ್ನು ಪರಿಹರಿಸಲು ಕತಾರ್ ಒತ್ತಾಯಿಸುತ್ತದೆ ಎಂದು ಕತಾರ್ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.