ಆಪರೇಷನ್ ಸಿಂಧೂರಿಂದ ಪಾಕಿಸ್ತಾನದ ವಾಯುನೆಲೆಗಳಿಗೆ ಭಾರೀ ಹಾನಿ: ಉಪಗ್ರಹ ಚಿತ್ರಗಳಲ್ಲಿ ಬಹಿರಂಗ

ನವದೆಹಲಿ: ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದ ಪಾಕಿಸ್ತಾನ ವಾಯುನೆಲೆಗಳು ಹೆಚ್ಚಿನ ಹಾನಿಗೊಳಗಾಗಿವೆ. ಪಾಕ್ನ ಹಾನಿಗೊಳಗಾದ ಪ್ರದೇಶಗಳನ್ನು ಉಪಗ್ರಹ ಚಿತ್ರಗಳಲ್ಲಿ ಬಹಿರಂಗಪಡಿಸಲಾಗಿದೆ.
ಅಮೆರಿಕದ ಏರೋಸ್ಪೇಸ್ ಸಂಸ್ಥೆ ಮ್ಯಾಕ್ಸರ್ ಟೆಕ್ನಾಲಜೀಸ್ ತೆಗೆದ ಹೈ-ರೆಸಲ್ಯೂಷನ್ ಚಿತ್ರಗಳು, ರಾವಲ್ಪಿಂಡಿಯ ನೂರ್ ಖಾನ್, ಸಿಂಧ್ನ ಸುಕ್ಕೂರ್ ಮತ್ತು ಪಾಕಿಸ್ತಾನದ ಪಂಜಾಬ್ನ ರಹೀಮ್ ಯಾರ್ ಖಾನ್ಗಳ ಪಾಕಿಸ್ತಾನಿ ಸೇನಾ ನೆಲೆಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳ ನಿರಂತರ ನಿಖರವಾದ ದಾಳಿಯಿಂದ ಹಾನಿಗೊಳಗಾಗಿರುವುದನ್ನು ಚಿತ್ರಗಳಲ್ಲಿ ಕಾಣಬಹುದಾಗಿದೆ.
ಪಾಕಿಸ್ತಾನಿ ವಾಯುಪಡೆಯ (ಪಿಎಎಫ್) ಬಹು ನೆಲೆಗಳಿಗೆ ಹಾನಿಯಾಗಿದೆ. ಸರ್ಗೋಧಾದಲ್ಲಿರುವ ಮುಷಾಫ್, ಉತ್ತರ ಸಿಂಧ್ನ ಶಹಬಾಜ್ ಜಾಕೋಬಾಬಾದ್ ಮತ್ತು ಉತ್ತರ ಥಟ್ಟಾದಲ್ಲಿರುವ ಭೋಲಾರಿ ಕೂಡ ಹಾನಿಗೊಳಗಾಗಿದೆ.
ಕಳೆದ ವಾರ ಆಪರೇಷನ್ ಸಿಂಧೂರ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ನಿಖರವಾದ ದಾಳಿ ನಡೆಸಿವೆ ಎಂದು ದೃಢಪಡಿಸಿದ್ದರು. ತಾಂತ್ರಿಕ ಮೂಲಸೌಕರ್ಯ, ಆಜ್ಞೆ ಮತ್ತು ನಿಯಂತ್ರಣ ಕೇಂದ್ರಗಳು, ರೆಡಾರ್ ತಾಣಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಣಾ ಪ್ರದೇಶಗಳು ಸೇರಿವೆ ಎಂದು ತಿಳಿಸಿದ್ದರು.
ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ. ಭಾರ್ತಿ ಅವರು, ಇಸ್ಲಾಮಾಬಾದ್ನಿಂದ 10 ಕಿಲೋಮೀಟರ್ಗಿಂತಲೂ ಕಡಿಮೆ ದೂರದಲ್ಲಿರುವ ಮತ್ತು ದೇಶದ ಮಿಲಿಟರಿ ಪ್ರಧಾನ ಕಚೇರಿಗೆ ಹೊಂದಿಕೊಂಡಿರುವ ಪ್ರಮುಖ ತಾಣವಾದ ನೂರ್ ಖಾನ್ ವಾಯುನೆಲೆಯು ಭಾರಿ ಸ್ಫೋಟದ ನಂತರ ಬೆಂಕಿಗೆ ಆಹುತಿಯಾಗಿತ್ತು ಎಂದು ತಿಳಿಸಿದ್ದರು.