“ಆಪರೇಷನ್ ಶಿವ” ಆರಂಭ: ಅಮರನಾಥ ಯಾತ್ರೆಗೆ ಸೇನೆಯ ಭದ್ರತಾ ಚುರುಕು!

ಜಮ್ಮು: ಪಹಲ್ಗಾಮ್ ದಾಳಿಯ ಬೆನ್ನಲ್ಲೇ ವಾರ್ಷಿಕ ಅಮರನಾಥ ಯಾತ್ರೆಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲು ಭದ್ರತಾ ಪಡೆಗಳು “ಆಪರೇಷನ್ ಶಿವ’ ಎಂಬ ಅಭಿಯಾನ ಆರಂಭಿಸಿವೆ.
ಸುಗಮ ಹಾಗೂ ಸುರಕ್ಷಿತ ಅಮರನಾಥ ಯಾತ್ರೆಯನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಹಿಮಾಲಯದ ದಕ್ಷಿಣ ಕಾಶ್ಮೀರದಲ್ಲಿ ಸಮುದ್ರ ಮಟ್ಟದಿಂದ 3880 ಅಡಿ ಎತ್ತರದಲ್ಲಿರುವ ಅಮರನಾಥ ಗುಹೆ ಯಾತ್ರೆ ಮಾಗದಲ್ಲಿ ಸಂಪೂರ್ಣ ಭದ್ರತೆ ಒದಗಿಸುವ ಉದ್ದೇಶದಿಂದ ಭಾರತೀಯ ಸೇನೆ, ಸಿಆರ್ಪಿಎಫ್, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ಅಭಿಯಾನ ಆರಂಭಿಸಿವೆ.
ಏನೇನು ಕ್ರಮ?
ಯಾತ್ರೆ ಜು.3ರಿಂದ ಆರಂಭವಾಗಿ ಆ.9ರವರೆಗೆ 38 ದಿನಗಳ ಕಾಲ ನಡೆಯಲಿದೆ. ಇದೇ ಮೊದಲ ಬಾರಿಗೆ ಯಾತ್ರೆಯ ಹಾದಿಯುದ್ದಕ್ಕೂ ಜಾಮರ್ಗಳನ್ನು ಅಳವಡಿಸಲಾಗುತ್ತದೆ. ಯಾತ್ರೆಗೆ ಕೇಂದ್ರ ಪೊಲೀಸ್ ಪಡೆಗಳು ಭದ್ರತೆ ಒದಗಿಸಲಿದ್ದು ಯಾತ್ರೆ ಸಾಗುವ ಎಲ್ಲ ರಸ್ತೆಗಳು ಮತ್ತು ಹೆದ್ದಾರಿಗಳನ್ನು ತಾತ್ಕಾಲಿವಾಗಿ ಮುಚ್ಚಲಾಗುತ್ತದೆ. ಸುಮಾರು 50 ಸಾವಿರ ಅರೆಸೇನಾಪಡೆ ಸಿಬ್ಬಂದಿ ಮತ್ತು ಕಾಶ್ಮೀರ ಪೊಲೀಸರು ನಿತ್ಯ ಸ್ಫೋಟಕಗಳ ಪತ್ತೆ ಕಾರ್ಯಾಚರಣೆ ನಡೆಸಲಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಕ್ಷಿಪ್ರ ಕ್ರಿಯಾ ಪಡೆಗಳನ್ನು ನಿಯೋಜಿಸಲಾಗುತ್ತದೆ. ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗ, ಬಲ್ಟಾಲ್ ಮಾರ್ಗದಲ್ಲಿ ಬಹುಹಂತದ ಭದ್ರತೆ ಕಲ್ಪಿಸಲಾಗುತ್ತದೆ.