‘ಆಪರೇಷನ್ ಮಹಾದೇವ’ ಯಶಸ್ವಿ: ಪಹಲ್ಗಾಮ್ ನರಮೇಧದ ಉಗ್ರರ ಹತ್ಯೆ, ಅಮಿತ್ ಶಾ ಘೋಷಣೆ!

ನವದೆಹಲಿ: ಏಪ್ರಿಲ್ 22ರ ಪಹಲ್ಗಾಮ್ ನರಮೇಧದಲ್ಲಿ ಭಾಗಿಯಾಗಿದ್ದ ಉಗ್ರರನ್ನು ಸೋಮವಾರ ಶ್ರೀನಗರದ ಬಳಿಯ ಅಡವಿಯಲ್ಲಿ ಭದ್ರತಾ ಪಡೆಗಳು ‘ಆಪರೇಷನ್ ಮಹಾದೇವ’ ಅಡಿಯಲ್ಲಿ ಹತ್ಯೆ ಮಾಡಿದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಂಗಳವಾರ ಮಾಹಿತಿ ನೀಡಿದ್ದಾರೆ.

‘ಹತ ಸುಲೇಮಾನ್ ಶಾ (ಮೂಸಾ) ಲಷ್ಕರ್ ಉಗ್ರ ಸಂಘಟನೆಯ ಎ-ಶ್ರೇಣಿಯ ಕಮಾಂಡರ್ ಆಗಿದ್ದ. ಇನ್ನಿಬ್ಬರಾದ ಅಫ್ಘಾನಿ ಮತ್ತು ಯಾಸಿರ್ ಜಿಬ್ರನ್ ಕೂಡ ಭಾರತಕ್ಕೆ ಬೇಕಾಗಿದ್ದವರಾಗಿದ್ದರು. ಬೈಸರನ್ ಕಣಿವೆಯಲ್ಲಿ ನಮ್ಮ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಈ ಮೂವರನ್ನೂ ಮುಗಿಸಲಾಗಿದೆ. ಈಗಾಗಲೇ ನಾವು ಉಗ್ರರಿಗೆ ಆಶ್ರಯ, ಆಹಾರ ಒದಗಿಸುತ್ತಿದ್ದವರನ್ನು ವಶಕ್ಕೆ ಪಡೆದಿದ್ದೆವು. ಅವರೇ ಮೃತ ಉಗ್ರರ ದೇಹಗಳನ್ನು ಶ್ರೀನಗರದಲ್ಲಿ ಗುರುತು ಹಿಡಿದರು ಎಂದು ಅಮಿತ್ ಶಾ ಆಪರೇಷನ್ ಸಿಂದೂರದ ಚರ್ಚೆ ವೇಳೆ ತಿಳಿಸಿದರು.
ಅಂತೆಯೇ, ‘ಆಪರೇಷನ್ ವೇಳೆ ವಶಕ್ಕೆ ಪಡೆಯಲಾದ ಎಂ-9 ಎಕೆ-47ನಂತಹ ಶಸ್ತ್ರಾಸ್ತ್ರಗಳನ್ನು ಪರಿಶೀಲನೆಗಾಗಿ ಚಂಡೀಗಢದಲ್ಲಿರುವ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ವಿಶೇಷ ವಿಮಾನದಲ್ಲಿ ಕಳಿಸಲಾಗಿತ್ತು. ಅಲ್ಲಿ ಪಹಲ್ಗಾಂ ದಾಳಿ ವೇಳೆ ದೊರಕಿದ್ದ ಖಾಲಿ ಸಿಡಿಮದ್ದುಗಳನ್ನು ಹೋಲಿಸಿ ನೋಡಲಾಗಿದ್ದು, ಅವುಗಳ ನರಮೇಧಕ್ಕೆ ಬಳಕೆಯಾದ ಬುಲೆಟ್ಗಳು ಎಂಬುದನ್ನು 6 ತಜ್ಞರು ನನಗೆ ವಿಡಿಯೋ ಕರೆ ಮೂಲಕ ಹೇಳಿದರು ಎಂದು ಶಾ ವಿವರಿಸಿದರು
ಜತೆಗೆ, ಕೊಲ್ಲಲ್ಪಟ್ಟ ಉಗ್ರರಲ್ಲಿ ಇಬ್ಬರ ಬಳಿ ಪಾಕಿಸ್ತಾನಿ ಮತಕಾರ್ಡ್, ಅಲ್ಲೇ ತಯಾರಿಸಿದ ಚಾಕೋಲೇಟ್ ಮತ್ತು ಆಯುಧಗಳೂ ದೊರೆತವು ಎಂದು ಹೇಳಿದರು. ಹಾಗೆಯೇ ಅತ್ತ ರಾಜ್ಯ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಪರೇಷನ್ ಮಹಾದೇವದ ಬಗ್ಗೆ ಮಾಹಿತಿ ನೀಡಿದ್ದರು
ಕಾಶ್ಮೀರದಲ್ಲಿ ಸ್ಥಳೀಯ ಉಗ್ರರಿಲ್ಲ, ಎಲ್ಲಾ ಪಾಕಿಗಳು :ಸಚಿವ ಶಾ
ಜಮ್ಮುಕಾಶ್ಮೀರದಲ್ಲಿ ಈಗ ಸ್ಥಳೀಯ ಉಗ್ರರು ಇಲ್ಲ, ಇರುವವರೆಲ್ಲಾ ಈಗ ಪಾಕಿಸ್ತಾನದಿಂದ ಕಳಿಸಲ್ಪಟ್ಟವರು ಎಂದು ಅಮಿತ್ ಶಾ ಹೇಳಿದರು. ಈ ಮೂಲಕ, ಕಣಿವೆ ರಾಜ್ಯದ ಪರಿಸ್ಥಿತಿ ಈಗ ಬದಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪಹಲ್ಗಾಂ ಉಗ್ರರ ಹತ್ಯೆ ತನಿಖೆ ಎಎನ್ಐಗೆ:
ಶ್ರೀನಗರ: ಶ್ರೀನಗರದ ಎನ್ಕೌಂಟರ್ನಲ್ಲಿ ಹತರಾದ ಪಹಲ್ಲಾಂ ದಾಳಿಯ ಮಾಸ್ಟರ್ಮೈಂಡ್ ಸುಲೇಮಾನ್ ಶಾ ಮತ್ತು ಆತನ ಇಬ್ಬರು ಸಹಚರರ ಹತ್ಯೆಯ ಬಗ್ಗೆ ಎನ್ಐಎ ತನಿಖೆ ಆರಂಭಿಸಿದೆ. ಮೂವರು ಭಯೋತ್ಪಾದಕರ ಶವಗಳನ್ನು ಗುರುತಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಂಡ ಮಂಗಳವಾರ ಮುಂಜಾನೆ, ಉಗ್ರರ ಶವಗಳನ್ನು ಇರಿಸಲಾಗಿದ್ದ ಅಲ್ಲಿನ ಪೊಲೀಸ್ ನಿಯಂತ್ರಣ ಕೊಠಡಿಗೆ (ಪಿಸಿ ಆರ್) ಆಗಮಿಸಿತ್ತು. ಹತ ಉಗ್ರರಲ್ಲಿ ಸುಲೈಮಾನ್ ಶಾ ಕೂಡ ಸೇರಿದ್ದಾನೆ ಎಂದು ಶೇಕಡಾ ನೂರರಷ್ಟು ದೃಢೀಕರಣವನ್ನು ಖಚಿತಪಡಿಸಿಕೊಳ್ಳಲು ಎನ್ಐಎ ತಂಡವು 2 ರಿಂದ 3 ಜನರ ಬ್ಯಾಚ್ಗಳಲ್ಲಿ ಸಾಕ್ಷಿಗಳನ್ನು ಕರೆತರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಇತರ ಭಯೋತ್ಪಾದಕರನ್ನು ಕಳೆದ ವರ್ಷ ಸೋನ್ಮಾರ್ಗ್ ಸುರಂಗ ದಾಳಿಯಲ್ಲಿ ಭಾಗಿಯಾಗಿದ್ದ ಜಿಬ್ರಾನ್ ಮತ್ತು ಹಮ್ಜಾ ಅಫ್ಘಾನಿ ಎಂದು ಗುರುತಿಸಲಾಗಿದೆ.
ಸಿಂದೂರ ಕುರಿತ ಭಾಷಣಕ್ಕೆ ಅವಕಾಶ ನೀಡದ್ದಕ್ಕೆ ‘ಕೈ’ ವಿರುದ್ಧ ತಿವಾರಿ ಅತೃಪ್ತಿ
ನವದೆಹಲಿ: ಆಪರೇಷನ್ ಸಿಂದೂರ ಕುರಿತು ಸಂಸತ್ತಿನಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆಯದ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಸ್ವಪಕ್ಷದ ನಡೆಗೆ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಇದಕ್ಕೆ ಅನುಗುಣವಾಗಿ 70ರ ದಶಕದ ಜನಪ್ರಿಯ ನಟ ಮನೋಜ್ ಕುಮಾರ್ ಅವರ ‘ಪೂರಬ್ ಔರ್ ಪಶ್ಚಿಮ್’ ಸಿನಿಮಾದ ಹಾಡೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತೀವ್ರ ಚರ್ಚೆ ಹುಟ್ಟು ಹಾಕಿದ್ದಾರೆ. ‘ಭಾರತ್ ಕಾ ರೆಹನೇ ವಾಲಾ ಹೂಂ. ಭಾರತ್ ಕೀ ಬಾತ್ ಸುನ್ತಾ ಹೂಂ (నాನು ಭಾರತದಲ್ಲಿ ನೆಲೆಸಿದವನು, ಭಾರತದ ಕುರಿತ ಮಾತು ಕೇಳುತ್ತೇನೆ) ಹಾಡಿನ ಸಾಲನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದು, ಇದು ಕಾಂಗ್ರೆಸ್ಗೆ ಇರಿಸು ಮುರುಸು ಉಂಟು ಮಾಡಿದೆ ಎನ್ನಲಾಗಿದೆ. ಸಂಸದರಾದ ಶಶಿ ತರೂರ್, ತಿವಾರಿ ಇಬ್ಬರೂ ಆಪರೇಷನ್ ಸಿಂದೂರ ವಿಚಾರವಾಗಿ ಕೇಂದ್ರ ಸರ್ಕಾರ ವಿದೇಶಗಳಿಗೆ ಕಳುಹಿಸಿಕೊಟ್ಟಿದ್ದ ಸರ್ವಪಕ್ಷ ನಿಯೋಗದ ಭಾಗವಾಗಿದ್ದರು. ಇದು ಕಾಂಗ್ರೆಸ್ ಪಕ್ಷವನ್ನು ಸಿಟ್ಟಿಗೇಳುವಂತೆ ಮಾಡಿತ್ತು.
ಟ್ರಂಪ್ ವಿರುದ್ಧ ಸೇಡಿಗೆ ಮೆಕ್ಡೊನಾಲ್ಡ್ ಮೇಲೆ ನಿಷೇಧ ಹೇರಿ: ಹೂಡಾ
ನವದೆಹಲಿ: ಭಾರತ ಅದೆಷ್ಟೇ ಅಲ್ಲಗೆಳೆದರೂ ಭಾರತ-ಪಾಕ್ ಕದನ ನಿಲ್ಲಿಸಿದ್ದು ನಾನೇ ಎಂದು ಬೀಗುತ್ತಿರುವ ಆಮೆರಿಕ ಅಧ್ಯಕ್ಷ ಟ್ರಂಪ್ಗೆ ಪೆಟ್ಟು ನೀಡಲು ಭಾರತದಲ್ಲಿ ಆಮೆರಿಕದ ಫಾಸ್ಟ್ ಫುಡ್ ಮಳಿಗೆ ಮೆಕ್ ಡೊನಾಲ್ಡ್ ನಿಷೇಧಿಸಬೇಕು ಎಂದು ಕಾಂಗ್ರೆಸ್ ಸಂಸದ ದೀಪಂದರ್ ಸಿಂಗ್ ಹೂಡಾ ಸಂಸತ್ತಿನಲ್ಲಿ ಆಗ್ರಹಿಸಿದರು. ಸಂಸತ್ತಿನಲ್ಲಿ ಮಾತನಾಡಿದ ಅವರು, ‘ಟ್ರಂಪ್ ಪದೇ ಪದೇ ಹೇಳು ತ್ತಿದ್ದರೂ ಅಮೆರಿಕದ ಅಧ್ಯಕ್ಷರು ಸುಳ್ಳು ಹೇಳಿದ್ದಾರೆ ಎಂದು ಕೇಂದ್ರ ಸ್ಪಷ್ಟವಾಗಿ ಹೇಳುತ್ತಿಲ್ಲ, ಭಾರತದ ಜೊತೆಗೆ ಯಾವ ಸಂಬಂಧ ಬೇಕು ಎಂದು ಅಮೆರಿಕ ಮೊದಲು ನಿರ್ಧರಿಸ ಬೇಕು. ಅಮೆರಿಕವು ಭಾರತವನ್ನು ಪಾಕಿಸ್ತಾನದೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ. ಕೇಂದ್ರದ ಮುಂದೆ ಆಯ್ಕೆ ಗಳಿವೆ. ಒಂದೋ ಅಮೆರಿಕ ಜೊತೆ ಮಾತನಾಡಿ ಟ್ರಂಪ್ ಸುಳ್ಳು ಹೇಳಿಕೆ ನೀಡದಂತೆ ನೋಡಿ ಕೊಳ್ಳುವುದು. ಇಲ್ಲವೋ ಭಾರತದಲ್ಲಿ ಮೆಕ್ಡೊನಾಲ್ಡ್ ನಿಷೇಧಿಸುವುದು’ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
