ಒಂದು ರಾಜ್ಯಕ್ಕೆ ಒಂದೇ ಗ್ರಾಮೀಣ ಬ್ಯಾಂಕ್: ಮೇ 1ರೊಳಗೆ 15 ಬ್ಯಾಂಕ್ಗಳ ವಿಲೀನ

ನವದೆಹಲಿ: ಮುಂದಿನ ತಿಂಗಳ ವೇಳೆಗೆ ಬ್ಯಾಂಕಿಂಗ್ ವಲಯದಲ್ಲಿ ಮಹತ್ವದ ಬದಲಾವವಣೆಗಳು ಆಗಲಿವೆ. ದೇಶದಲ್ಲಿನ 15 ಬ್ಯಾಂಕ್ಗಳು ವಿಲೀನಗೊಳ್ಳಲಿವೆ. 11 ರಾಜ್ಯದಲ್ಲಿರುವ 15 ಬ್ಯಾಂಕ್ಗಳು ವಿಲೀನಗೊಳ್ಳಲಿವೆ. ಮೇ 1 ರಿಂದ ‘ಒಂದು ರಾಜ್ಯ, ಒಂದು ಆರ್ಆರ್ಬಿ’ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ಈ ಹೊಸ ನೀತಿಯ ಪ್ರಕಾರ, ರಾಜ್ಯಕ್ಕೆ ಒಂದೇ ಗ್ರಾಮೀಣ ಬ್ಯಾಂಕ್ ಇರಲಿದೆ. ಕೆಲವು ರಾಜ್ಯಗಳಲ್ಲಿಎರಡು ಅಥವಾ ಅದಕ್ಕಿಂತ ಗ್ರಾಮೀಣ ಬ್ಯಾಂಕ್ಗಳಿವೆ. ಇದೀಗ ಇವುಗಳ ವಿಲೀನ ಪ್ರಕ್ರಿಯೆ ನಡೆಯಲಿದೆ. ಮೇ 1ರಿಂದ ದೇಶದ ರಾಜ್ಯಕ್ಕೆ ಒಂದೇ ಕ್ಷೇತ್ರಿಯ ಗ್ರಾಮೀಣ ಬ್ಯಾಂಕ್ (RRB) ಇರಲಿದೆ.
‘ಒಂದು ರಾಜ್ಯ, ಒಂದು ಆರ್ಆರ್ಬಿ’ ನೀತಿಯ ಆದೇಶವನ್ನು ಜಾರಿಗೆ ತರಲು ಹಣಕಾಸು ಸಚಿವಾಲಯವು 11 ರಾಜ್ಯಗಳಲ್ಲಿ 15 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ವಿಲೀನದ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ವಿಲೀನದ ನಾಲ್ಕನೇ ಹಂತವಾಗಿದ್ದು, ಇದು ಪೂರ್ಣಗೊಂಡ ನಂತರ ದೇಶದಲ್ಲಿ ಪ್ರಸ್ತುತ RRB ಗಳ ಸಂಖ್ಯೆಯನ್ನು 43 ರಿಂದ 28 ಕ್ಕೆ ಇಳಿಕೆಯಾಗಲಿದೆ.
ಸರ್ಕಾರದ ‘ಒಂದು ರಾಜ್ಯ, ಒಂದು ಆರ್ಆರ್ಬಿ’ ನೀತಿಯ ಪ್ರಕಾರ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನದಲ್ಲಿನ ಗ್ರಾಮೀಣ ಬ್ಯಾಂಕ್ಗಳು ವಿಲೀನಗೊಳ್ಳಲ್ಲಿವೆ. ಒಂದಕ್ಕಿಂತ ಹೆಚ್ಚು ಗ್ರಾಮೀಣ ಬ್ಯಾಂಕ್ಗಳು ಅದೇ ರಾಜ್ಯದ ಮತ್ತೊಂದು ಆರ್ಆರ್ಬಿಯಲ್ಲಿ ವಿಲೀನಗೊಳ್ಳಲಿವೆ. ಆರ್ಆರ್ಬಿ ಅಧಿನಿಯಮ, 1976ರ ವಿಭಾಗ 23ಎ(1)ರ ಪ್ರಕಾರ ವಿಲೀನ ಪ್ರಕ್ರಿಯೆ ನಡೆಯಲಿದೆ.
ಯಾವ ಬ್ಯಾಂಕ್ ಯಾವುದರಲ್ಲಿ ವಿಲೀನ?
ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಿತ ಚೈತನ್ಯ ಗೋದಾವರಿ ಗ್ರಾಮೀಣ ಬ್ಯಾಂಕ್, ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್, ಸಪ್ತಗಿರಿ ಗ್ರಾಮೀಣ ಬ್ಯಾಂಕ್ ಮತ್ತು ಆಂಧ್ರ ಪ್ರದೇಶ ಗ್ರಾಮೀಣ ವಿಕಾಸ ಬ್ಯಾಂಕ್ ವಿಲೀನಗೊಳಿಸಿ ಆಂಧ್ರಪ್ರದೇಶ ಗ್ರಾಮೀಣ ಬ್ಯಾಂಕ್ ರಚಿಸಲಾಗುತ್ತದೆ.
ಬ್ಯಾಂಕ್ ಆಫ್ ಬರೋಡಾ ಪ್ರಾಯೋಜಿತ ಬರೋಡಾ ಯು.ಪಿ. ಉತ್ತರ ಪ್ರದೇಶ ಬ್ಯಾಂಕ್, ಆರ್ಯವರ್ಟ್ ಬ್ಯಾಂಕ್ ಮತ್ತು ಪ್ರಥಮ ಯು.ಪಿ. ಗ್ರಾಮೀಣ ಬ್ಯಾಂಕ್ ವಿಲೀನಗೊಳಿಸಿ ಉತ್ತರ ಪ್ರದೇಶ ಗ್ರಾಮೀಣ ಬ್ಯಾಂಕ್ ಎಂದು ರಚಿಸಲಾಗುತ್ತದೆ. ಉತ್ತರ ಪ್ರದೇಶ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿ ರಾಜಧಾನಿ ಲಕ್ನೋದಲ್ಲಿ ಇರಲಿದೆ. ಪಶ್ಚಿಮ ಬಂಗಾಳದಲ್ಲಿರುವ ಬಂಗಿಯಾ ಗ್ರಾಮೀಣ ವಿಕಾಸ್, ಪಶ್ಚಿಮ ಬಂಗಾಳ ಗ್ರಾಮೀಣ ಬ್ಯಾಂಕ್ ಮತ್ತು ಉತ್ತರಬಂಗ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ವಿಲೀನಗೊಳಿಸಿ ಪಶ್ಚಿಮ ಬಂಗಾಳ ಗ್ರಾಮೀಣ ಬ್ಯಾಂಕ್ ಎಂದ ರಚಿಸಲಾಗುತ್ತದೆ.
ದಕ್ಷಿಣ ಬಿಹಾರ ಗ್ರಾಮೀಣ ಬ್ಯಾಂಕ್ ಮತ್ತು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್ಗಳನ್ನು ವಿಲೀನಗೊಳಿಸಿ ಬಿಹಾರ ಗ್ರಾಮೀಣ ಬ್ಯಾಂಕ್ ಅನ್ನು ರಚಿಸಲಾಗುತ್ತದೆ. ಗುಜರಾತ್ನಲ್ಲಿ ಬರೋಡಾ ಗುಜರಾತ್ ಗ್ರಾಮೀಣ ಬ್ಯಾಂಕ್ ಮತ್ತು ಸೌರಾಷ್ಟ್ರ ಗ್ರಾಮೀಣ ಬ್ಯಾಂಕ್ ವಿಲೀನಗೊಂಡು ಗುಜರಾತ್ ಗ್ರಾಮೀಣ ಬ್ಯಾಂಕ್ ಆಗಲಿದೆ.
ಅಧಿಸೂಚನೆಯ ಪ್ರಕಾರ, ದೇಶದಲ್ಲಿರುವ ಗ್ರಾಮೀಣ ಬ್ಯಾಂಕ್ಗಳು 2,000 ಕೋಟಿ ರೂಪಾಯಿ ಬಂಡವಾಳವನ್ನು ಹೊಂದಿವೆ. ಕೇಂದ್ರ ಸರ್ಕಾರ ಬ್ಯಾಂಕ್ಗಳ ವಿಲೀನಕ್ಕೂ ಮುನ್ನ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಬಂಡವಾಳವನ್ನು ಹೂಡಿಕೆ ಮಾಡಿದೆ. 2021-22ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ, ಆರ್ಆರ್ಬಿಯಲ್ಲಿ 5,445 ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಿತ್ತು. ಆದರೆ ಆ ವರ್ಷ ಆರ್ಆರ್ಬಿಗಳು 7,571 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದ್ದವು. ಇದು ಸಾರ್ವಕಾಲಿಕ ದಾಖಲೆಯಾಗಿದೆ.