ಪಾಕಿಸ್ತಾನಕ್ಕೆ ಒಂದರ ಮೇಲೊಂದು ಮರ್ಮಾಘಾತ –ಡಿಜಿಟಲ್ ಶಾಕ್ ನೀಡಿದ ಭಾರತ

ಕಾಶ್ಮೀರ :ಪಾಕಿಸ್ತಾನ ಬೆಂಬಲಿತ ಉಗ್ರರು ನಡೆಸಿರುವ ನರಮೇಧಕ್ಕೆ ಭಾರತ ಕೊಡುತ್ತಿರುವ ಮರ್ಮಾಘಾತ ಮುಂದುವರೆಯುತ್ತಲೇ ಇದೆ. ಹಿಂದೂಗಳ ಹತ್ಯೆ ಮಾಡಿದವರು ಕನಸಿನಲ್ಲಿಯೂ ಊಹಿಸಿಕೊಳ್ಳಲಾಗದ ಪೆಟ್ಟು ನೀಡುತ್ತೇನೆ ಎಂದು ಇದಾಗಲೇ ಪ್ರಧಾನಿ ನರೇಂದ್ರ ಮೋದಿ ಮಾತು ಕೊಟ್ಟಾಗಿದೆ.
ಸಿಂಧೂ ಜಲ ಒಪ್ಪಂದ (ಇಂಡಸ್ ವಾಟರ್ಸ್ ಟ್ರೀಟಿ – ಐಎಬ್ಲ್ಯುಟಿ) ಎಂಬ ಸಿಂಧೂ ನದಿಯ ನೀರಿನ ಹಂಚಿಕೆಯ ಕುರಿತು ಪಾಕಿಸ್ತಾನದೊಡನೆ ಮಾಡಿಕೊಂಡಿದ್ದ 65 ವರ್ಷ ಹಳೆಯ ಒಪ್ಪಂದವನ್ನು ಭಾರತ ಇದಾಗಲೇ ಅಮಾನತುಗೊಳಿಸಿದೆ. ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ತನಕ ಸಿಂಧೂ ಜಲ ಹಂಚಿಕೆಯ ಒಪ್ಪಂದವನ್ನು ಅಮಾನತುಗೊಳಿಸುವುದಾಗಿ ಘೋಷಿಸಿದೆ.
ಇದರ ಬೆನ್ನಲ್ಲೇ, ದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್ನಿಂದ ಎಲ್ಲಾ ರಕ್ಷಣಾ, ನೌಕಾ ಮತ್ತು ವಾಯು ಸಲಹೆಗಾರರನ್ನು ಹೊರಹಾಕಿದೆ. ಈ ವ್ಯಕ್ತಿಗಳನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲಾಗಿದೆ ಮತ್ತು ಒಂದು ವಾರದೊಳಗೆ ದೇಶವನ್ನು ತೊರೆಯುವಂತೆ ಸೂಚಿಸಲಾಗಿದೆ. ಇದಕ್ಕೆ ಅನುಗುಣವಾಗಿ, ಭಾರತವು ಇಸ್ಲಾಮಾಬಾದ್ನಲ್ಲಿರುವ ತನ್ನದೇ ಆದ ಹೈಕಮಿಷನ್ನಿಂದ ತನ್ನ ಮಿಲಿಟರಿ ಸಲಹೆಗಾರರನ್ನು ಹಿಂತೆಗೆದುಕೊಳ್ಳಲಿದೆ. ಎರಡೂ ಕಾರ್ಯಾಚರಣೆಗಳಲ್ಲಿ ಸೇವಾ ಸಲಹೆಗಾರರಿಗೆ ನಿಯೋಜಿಸಲಾದ ಐದು ಸಹಾಯಕ ಸಿಬ್ಬಂದಿಯನ್ನು ಸಹ ಹಿಂಪಡೆಯಲಾಗುತ್ತಿದೆ.
ಇದೀಗ ಮತ್ತೊಂದು ದೃಢ ನಿಲುವನ್ನು ಪಾಕಿಸ್ತಾನದ ವಿರುದ್ಧ ಭಾರತ ಇಟ್ಟಿದೆ. ಪಾಕಿಸ್ತಾನ ಸರ್ಕಾರದ ಎಕ್ಸ್ ಖಾತೆಯನ್ನು ಭಾರತ ಸ್ಥಗಿತಗೊಳಿಸಿದೆ. ಈ ಮೂಲಕ ಭಾರತವು ಪಾಕಿಸ್ತಾನಕ್ಕೆ ಒಂದರ ಮೇಲೊಂದು ಮರ್ಮಾಘಾತ ನೀಡುತ್ತಲಿದೆ. ಎಕ್ಸ್ ಖಾತೆ ಸ್ಥಗಿತದಿಂದ ಪಾಕಿಸ್ತಾನಕ್ಕೆ ಭಾರಿ ಏಟು ಬೀಳಲಿದೆ. ಪಹಲ್ಗಾಮ್ ದಾಳಿಕೋರರು ಹಾಗೂ ಅವರಿಗೆ ಬೆನ್ನುಲುಬಾಗಿರುವವರನ್ನು ಸುಮ್ಮನೆ ಬಿಡುವುದಿಲ್ಲ, ಅವರು ಊಹೆಯೂ ಮಾಡಿರದಂತಹ ಕಠಿಣ ಶಿಕ್ಷೆ ಅವರಿಗೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಘಟನೆ ನಡೆದ ನಂತರ ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಭಯೋತ್ಪಾದಕರನ್ನು ಬೆಂಬಲಿಸುವವರನ್ನು ಸುಮ್ಮನೇ ಬಿಡುವುದಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಈ ಕ್ರಮವನ್ನೂ ತೆಗೆದುಕೊಳ್ಳಲಾಗಿದೆ. ಪಾಕಿಸ್ತಾನದಿಂದ ಎಕ್ಸ್ ಖಾತೆ ಮೂಲಕ ಹಾಕುವ ಯಾವುದೇ ಸಂದೇಶಗಳು ಭಾರತದ ಒಳಗಿರುವ ಶತ್ರುಗಳಿಗೆ ಇನ್ನು ಮುಂದೆ ಲಭ್ಯ ಇರುವುದಿಲ್ಲ. ಇದೂ ಸೇರಿದಂತೆ ಜಾಲತಾಣದ ಮೂಲಕ ನಡೆಯುತ್ತಿರುವ ಹಲವು ಕ್ರಮಗಳಿಗೆ ಪಾಕಿಸ್ತಾನಕ್ಕೆ ಬ್ರೇಕ್ ಬಿದ್ದಂತಾಗಿದೆ
ಇದರ ಜೊತೆ ಜೊತೆಗೇನೇ, ಈ ಕೃತ್ಯದಲ್ಲಿ ಪಾಕಿಸ್ತಾನದ ಕೈವಾಡ ಇದೆ ಎನ್ನುವುದು ತಿಳಿದಿದ್ದರೂ, ಒಳಗೇ ಇರುವ ಶತ್ರುಗಳ ಬಗ್ಗೆ ಇನ್ನೂ ಬಯಲಾಗಬೇಕಿದೆ. ಯಾವ ರೂಪದಲ್ಲಿ ಯಾರು ಎಲ್ಲಿ ಅಡಗಿದ್ದಾರೆ ಎನ್ನುವುದನ್ನು ಇನ್ನಷ್ಟೇ ಬಯಲು ಮಾಡಬೇಕಿದೆ. ಮಿತ್ರದ ರೂಪದಲ್ಲಿ ಇರುವ ಶತ್ರುಗಳ ಬಗ್ಗೆಯೂ ಇದೇ ಸಂದರ್ಭದಲ್ಲಿ ಇಂಟಲಿಜೆನ್ಸ್ನವರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಕಾಣದ ಕೈಗಳ ಬಗ್ಗೆ ತನಿಖೆ ಪೂರ್ಣಗೊಳ್ಳುವವರೆಗೂ ಇದಾಗಲೇ ಕೇಂದ್ರ ಸರ್ಕಾರ ಸದ್ಯದ ಮಟ್ಟಿಗೆ ಪಾಕಿಸ್ತಾನಕ್ಕೆ ಪಾಠ ಕಲಿಸಲು ಮುಂದಾಗಿದ್ದು, ಕೆಲವು ಕ್ರಮಗಳನ್ನು ಇದಾಗಲೇ ತೆಗೆದುಕೊಂಡಿದೆ.