ಕೋರಮಂಗಲ ಹೋಟೆಲ್ನಲ್ಲಿ ಕನ್ನಡಿಗರ ವಿರುದ್ಧ ಅತಿ ಕೆಟ್ಟ ಪದ ಬಳಸಿ ಅವಮಾನ: ವಿಡಿಯೋ ವೈರಲ್, ಹೋಟೆಲ್ ವಿರುದ್ಧ ಆಕ್ರೋಶ

ಬೆಂಗಳೂರು: ನಗರದಲ್ಲಿ ಹಿಂದಿಭಾಷಿಕರ ಪುಂಡಾಟಿಕೆ ಮಿತಿಮೀರಿದೆ. ಕನ್ನಡ ನೆಲದಲ್ಲೇ ನಿಂತು ಕನ್ನಡ ಹಾಗು ಕನ್ನಡಿಗರ ಬಗ್ಗೆ ಅವಹೇಳನ ಮಾಡುತ್ತಿರುವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಬೆಂಗಳೂರಿನ ಕೋರಮಂಗಲದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಕನ್ನಡಿಗರ ಬಗ್ಗೆ ಹಿಂದಿಯಲ್ಲಿ (ಕನ್ನಡಿಗ ಮದರ್***) ಎಂದು ಅತಿ ಕೆಟ್ಟ ಪದ ಬಳಕೆ ಮಾಡಿ, ಅದನ್ನು ಹೋಟೆಲ್ನ ಎಲ್ಇಡಿ ಸ್ಟ್ರೀನ್ಲ್ಲಿ ಹಾಕಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಕನ್ನಡಿಗರು ಕೂಡ ಈ ಘಟನೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಕೋರಮಂಗಲದ ಹೋಟೆಲ್ ಡಿಎಸ್ ಸೂಟ್ಸ್ನಲ್ಲಿ ಮುಂದೆ ಹಾಕಿದ್ದ ಎಲ್ಇಡಿ ಸ್ಟ್ರೀನ್ಲ್ಲಿ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಹಿಂದಿ ಪದ ಬಳಕೆ ಮಾಡಲಾಗಿದೆ. ಇದನ್ನು ರಾಜಾರೋಷವಾಗಿ ಡಿಸ್ಪ್ಲೇ ಮಾಡಿರುವುದು ಗೊತ್ತಾಗಿ, ಆ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದು ಶುಕ್ರವಾರ ನಡೆದಿರುವ ಘಟನೆ ಎಂದು ಗೊತ್ತಾಗಿದೆ. ಕನ್ನಡಿಗರ ಜಾಗದಲ್ಲೇ ಬಂದು ಕನ್ನಡಿಗರ ಬಗ್ಗೆ ಇಷ್ಟು ಕೆಟ್ಟದಾಗಿ ಪದ ಬಳಕೆ ಮಾಡಿರುವ ಈ ಹೋಟೆಲ್ನವರನ್ನು ಕೂಡಲೇ ಬಂಧಿಸಿ, ಹೋಟೆಲ್ ಬಂದ್ ಮಾಡಿಸಿ ಎಂದು ಆಗ್ರಹ ಕೇಳಿಬಂದಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಹೋಟೆಲ್ಗೆ ಬೀಗ ಜಡಿದು, ತಕ್ಷಣ ಹೋಟಲ್ ಮಾಲೀಕನನ್ನ ಅರೆಸ್ಟ್ ಮಾಡಿ ಎಂದು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ. ಅನ್ನ ಕೊಡುವ ಭೂಮಿಗೆ ಇವರ ನಿಯತ್ತು ಇಷ್ಟೇ ನೋಡಿ. ಆರು ಕೋಟಿ ಕನ್ನಡಿಗರನ್ನ ಈ ರೀತಿ ಕೆಟ್ಟ ಪದದಿಂದ ನಿಂದಿಸಿರುವ ಇವರನ್ನು ಸುಮ್ಮನೆ ಬಿಡಬಾರದು ಎಂದು ಗರಂ ಆಗಿದ್ದಾರೆ.
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಈ ವಿಡಿಯೋ ಶೇರ್ ಮಾಡಿಕೊಂಡು ಆಕ್ರೋಶ ಹೊರಹಾಕಿದ್ದಾರೆ. ಇವರ ಮೇಲೆ ಕೇಸ್ ಆಗಲೇಬೇಕು. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕೆಲಸ. ಕೋರಮಂಗಲದ ಹೋಟೆಲ್ ಜಿಎಸ್ ಸೂಟ್ಸ್ ಬಳಿ ಶುಕ್ರವಾರ ರಾತ್ರಿ ಈ ವಿಡಿಯೋ ರೆಕಾರ್ಡ್ ಆಗಿದೆ. ಈ ಹಿಂದಿವಾಲಾಗಳಿಂದ ಪದೇ ಪದೇ ಕನ್ನಡಿಗರನ್ನು ಕೆಣಕುವ ಕೆಲಸ ಆಗ್ತಿದೆ. ಈ ಬಾರಿ ಕನ್ನಡಿಗರನ್ನ ಬಹಳ ಕೆಟ್ಟದ್ದಾಗಿ ನಿಂದಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕನ್ನಡಿಗರ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿರುವ ಆರೋಪದ ಮೇರೆಗೆ ಹೋಟೆಲ್ ಮ್ಯಾನೇಜರ್ ಹಾಗೂ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಅಲ್ಲಿ ಅಳವಡಿಸಿದ್ದ ಬೋರ್ಡ್ ಕೂಡ ಕಿತ್ತ ಹಾಕಲಾಗಿದೆ. ಇದನ್ನು ಬೇಕಂತಲೇ ಉದ್ದೇಶಪೂರ್ವಕವಾಗಿ ಪರಭಾಷಿಕರು ಮಾಡಿದ್ದಾರೆ ಎಂದು ಕನ್ನಡಿಗರು ಗರಂ ಆಗಿದ್ದಾರೆ. ಇಂತಹ ಹೋಟೆಲ್ ಬೆಂಗಳೂರಿನಲ್ಲಿ ಇರಬಾರದು, ಅದನ್ನು ನೆಲಸಮ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕನ್ನಡ ಹಾಗೂ ಕನ್ನಡಿಗರ ಮೇಲೆ ಸ್ವಂತ ನೆಲದಲ್ಲೇ ಪರಭಾಷಿಕರ ಉಪಟಳ ಮಿತಿಮೀರಿದ್ದು, ಕೂಡಲೇ ಇದನ್ನು ನಿಯಂತ್ರಣಕ್ಕೆ ತರಲು ಬಲವಾದ ಕಾನೂನು ಜಾರಿ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.