“ಒಡಿಶಾ: ಮುಕ್ತ ಮಾರುಕಟ್ಟೆಯಲ್ಲಿ ಎಲ್ಪಿಜಿ ಸಿಲಿಂಡರ್ ಮಾರಾಟ ನಿಷೇಧ; ಸರ್ಕಾರದ ಖಡಕ್ ಆದೇಶ”

ಭುವನೇಶ್ವರ: ಒಡಿಶಾದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಎಲ್ಪಿಜಿ ಸಿಲಿಂಡರ್ ಮಾರಾಟವನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಇ-ಕೆವೈಸಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಿದ ಗ್ರಾಹಕರು ಮಾತ್ರವೇ ಅವುಗಳನ್ನು ಅಧಿಕೃತ ಡೀಲರ್ ಗಳ ಬಳಿ ಸಲ್ಲಿಸಿ ಸಿಲಿಂಡರ್ ಗಳನ್ನು ಪಡೆಯಬಹುದಾಗಿದೆ ಎಂದು ಆಹಾರ ಸರಬರಾಜು ಮತ್ತು ಗ್ರಾಹಕ ಕಲ್ಯಾಣ ಖಾತೆ ಸಚಿವ ಕೃಷ್ಣಚಂದ್ರ ಪಾತ್ರಾ ರವಿವಾರ ಹೇಳಿಕೆ ನೀಡಿದ್ದಾರೆ.

ಅಡುಗೆ ಅನಿಲದ ಕೊರತೆ ಹಿನ್ನೆಲೆಯಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಮುಕ್ತ ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ಎಲ್ ಪಿಜಿ ಸಿಲಿಂಡರ್ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಯಲು ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ.
ಗೃಹಬಳಕೆಯ ಸಿಲಿಂಡರ್ ಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಹೊಸ ಮಾರ್ಗಸೂಚಿಯನ್ವಯ, ನಗರ ಗ್ರಾಹಕರಿಗೆ ಒಂದು ಸಿಲಿಂಡರ್ ಬುಕ್ ಮಾಡಿ 25 ದಿನಗಳ ಬಳಿಕ ಹಾಗೂ ಗ್ರಾಮೀಣ ಬಳಕೆದಾರರಿಗೆ 45 ದಿನಗಳ ಬಳಿಕ ಬುಕ್ಕಿಂಗ್ ಮಾಡಲು ಅವಕಾಶವಿದೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಾಳಸಂತೆಯಲ್ಲಿ ಸಿಲಿಂಡರ್ ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ 5 ಕೆಜಿ ಸಿಲಿಂಡರ್ ಗಳ ಮಾರಾಟವನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ. ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ 27 ಎಲ್ ಪಿಜಿ ಸಿಲಿಂಡರ್ ಗಳನ್ನು ಧೇನ್ ಕನಲ್ ಪಟ್ಟಣದಲ್ಲಿ ರವಿವಾರ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.