ನವೆಂಬರ್ 1 ಕನ್ನಡ ರಾಜ್ಯೋತ್ಸವ: ಏಕೀಕರಣ ಚಳುವಳಿ, ಮೈಸೂರು ರಾಜ್ಯ ‘ಕರ್ನಾಟಕ’ ಆಗಿ ಮರುನಾಮಕರಣದ ಸಂಪೂರ್ಣ ಮಾಹಿತಿ

ನವೆಂಬರ್ 1ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವು ಕರ್ನಾಟಕದ ಸಂಸ್ಥಾಪನಾ ದಿನವಾಗಿದೆ. 1956 ರ ನವೆಂಬರ್ 1 ರಂದು ಮೈಸೂರು ರಾಜ್ಯವನ್ನು (ಈಗಿನ ಕರ್ನಾಟಕ) ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಒಗ್ಗೂಡಿಸಿ ರಚಿಸಲಾಯಿತು. ಈ ಹಬ್ಬದ ಮುಖ್ಯ ಉದ್ದೇಶಗಳು ಕರ್ನಾಟಕದ ಏಕೀಕರಣವನ್ನು ಸ್ಮರಿಸುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುವುದು, ಮತ್ತು ನಾಡಿನ ಸಾಧಕರನ್ನು ಗೌರವಿಸುವುದಾಗಿದೆ.

ಏಕೀಕರಣ: ಸ್ವಾತಂತ್ರ್ಯ ಪೂರ್ವದಿಂದಲೂ ಚಾಲ್ತಿಯಲ್ಲಿದ್ದ ಕರ್ನಾಟಕ ಏಕೀಕರಣ ಚಳುವಳಿಯ ಫಲವಾಗಿ, ರಾಜ್ಯಗಳ ಮರುಸಂಘಟನೆ ಕಾಯಿದೆಯಡಿಯಲ್ಲಿ 1956ರ ನವೆಂಬರ್1 ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು.
ಒಗ್ಗೂಡಿಸಲ್ಪಟ್ಟ ಪ್ರದೇಶಗಳು: ಮುಂಬೈ, ಮದ್ರಾಸ್, ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಡಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಲಾಯಿತು.
ಮರುನಾಮಕರಣ: 1973ರ ನವೆಂಬರ್ 1 ರಂದು ಮೈಸೂರು ರಾಜ್ಯವನ್ನು “ಕರ್ನಾಟಕ” ಎಂದು ಮರುನಾಮಕರಣ ಮಾಡಲಾಯಿತು. ಅಂದಿನ ಸಿಎಂ ದೇವರಾಜ ಅರಸು ಅವರ ಅವಧಿಯಲ್ಲಿ ಮೈಸೂರು ರಾಜ್ಯವನ್ನು ಅಧಿಕೃತವಾಗಿ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು.
ಚಳವಳಿ ಆರಂಭ
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಆಲೂರು ವೆಂಕಟರಾವ್ ಮತ್ತು ಇತರ ಮಹನೀಯರ ಕೊಡುಗೆಯು ಅಪಾರವಾಗಿದೆ. 1890ರಲ್ಲಿ ಧಾರವಾಡದಲ್ಲಿ ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಸ್ಥಾಪನೆಯಾಗಿದ್ದರೂ, 1905ರಲ್ಲಿ ಆಲೂರು ವೆಂಕಟರಾವ್ ಅವರು ಹೋರಾಟವನ್ನು ಆರಂಭಿಸಿದ ನಂತರ ಏಕೀಕರಣ ಚಳುವಳಿ ತೀವ್ರ ಸ್ವರೂಪ ಪಡೆಯಿತು. 1924ರ ಬೆಳಗಾವಿ ಅಧಿವೇಶನದಲ್ಲಿ ಮೊದಲ ಕರ್ನಾಟಕ ಏಕೀಕರಣ ಸಮ್ಮೇಳನವು ಆಯ್ತು, ಅಲ್ಲಿ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು. ಕನ್ನಡಿಗರ ರಾಜ್ಯದ ಉದಯವನ್ನು ಸಂಭ್ರಮಿಸಲು, 1956ರ ಬಳಿಕ ಪ್ರತಿ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ಕರ್ನಾಟಕ ರಾಜ್ಯದ ಏಕೀಕರಣ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಹೆಮ್ಮೆಯನ್ನು ಸಂಕೇತಿಸುತ್ತದೆ.
ಉದ್ದೇಶ
ಏಕೀಕರಣದ ಸಂಭ್ರಮ: 1956ರಲ್ಲಿ ಕನ್ನಡ ನಾಡಿನ ಒಗ್ಗೂಡುವಿಕೆಯನ್ನು ನೆನಪಿಸಿಕೊಳ್ಳುವುದು ಮತ್ತು ಆಚರಿಸುವುದು.
ಭಾಷೆ ಮತ್ತು ಸಂಸ್ಕೃತಿ: ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ನಾಡಿನ ಹೆಮ್ಮೆಯನ್ನು ಎತ್ತಿ ತೋರಿಸುವುದು.
ಸಾಧಕರ ಗೌರವ: ಕನ್ನಡ ರಾಜ್ಯದ ಉದಯಕ್ಕೆ ಕಾರಣರಾದವರನ್ನು ಸ್ಮರಿಸುವುದು ಮತ್ತು ನಾಡಿನ ಸಾಧನೆಗಾಗಿ ಶ್ರಮಿಸಿದವರಿಗೆ ಗೌರವ ಸಲ್ಲಿಸುವುದು.
ಏಕತೆಯ ಸಂಕೇತ:
ವಿಭಿನ್ನ ಹಿನ್ನೆಲೆಯ ಜನರನ್ನು ಒಂದುಗೂಡಿಸಿ, ಸಮುದಾಯ ಮತ್ತು ಸಹಕಾರದ ಭಾವನೆಯನ್ನು ಬಲಪಡಿಸುವುದು.
ಕನ್ನಡಾಭಿಮಾನ:
ಯುವಪೀಳಿಗೆಯಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವುದು ಮತ್ತು ಅದರ ಬಳಕೆ ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು.
ರಾಜ್ಯೋತ್ಸವ ಪ್ರಶಸ್ತಿಗಳು
ರಾಜ್ಯೋತ್ಸವದಂದು ಕರ್ನಾಟಕ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಕನ್ನಡಿಗರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡುತ್ತದೆ. ಈ ಪ್ರಶಸ್ತಿಗಳು ಕಲಾ, ಸಾಹಿತ್ಯ, ಕ್ರೀಡೆ, ವಿಜ್ಞಾನ, ಶಿಕ್ಷಣ, ಸಾಮಾಜಿಕ ಸೇವೆ, ಕೃಷಿ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನೀಡಲಾಗುತ್ತವೆ. ಇದು ಕನ್ನಡಿಗರ ಶ್ರಮ ಮತ್ತು ಸಾಧನೆಗೆ ಗೌರವ ಸೂಚಿಸುವ ಅತ್ಯುನ್ನತ ರಾಜ್ಯ ಮಟ್ಟದ ಸನ್ಮಾನವಾಗಿದೆ.