ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಿದ್ದ ಖತರ್ನಾಕ್ ಸಹೋದರರು

ರಾಜಸ್ಥಾನ:ಇತ್ತೀಚೆಗೆ ಸೈಬರ್ ಕ್ರೈಂ ಮೂಲಕ ಮಾತ್ರವಲ್ಲದೆ ನಾನಾ ರೀತಿಯಲ್ಲಿ ಹಣ ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಂಚನೆಗೆ ಒಳಗಾಗುತ್ತಿರು ಇರುವವರೆಗೂ ವಂಚಿಸುವವರು ಇರುತ್ತಾರೆ ಎಂಬ ಮಾತಿದೆ ಅದರಂತೆ, ಸಹೋದರರಿಬ್ಬರು 70,000 ಜನರಿಗೆ ‘ಧೋಲೇರಾ ಸ್ಮಾರ್ಟ್ ಸಿಟಿ’ಯಲ್ಲಿ ಹೆಚ್ಚಿನ ಲಾಭ ಮತ್ತು ಭೂಮಿ ನೀಡುವ ಆಮಿಷವೊಡ್ಡಿ 2,676 ಕೋಟಿ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಸುಭಾಷ್ ಬಿಜಾರಾಣಿ ಮತ್ತು ರಣವೀರ್ ಬಿಜಾರಾಣಿ ಎಂಬ ಸಹೋದರರನ್ನು ರಾಜಸ್ಥಾನದ ಪೊಲೀಸರು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜಾರಿ ನಿರ್ದೇಶನಾಲಯವು(ED) ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಸಹೋದರರು ಜನರನ್ನು ವಂಚಿಸಲು ಮೊದಲು “ನೆಕ್ಸಾ ಎವರ್ಗ್ರೀನ್” ಎಂಬ ಕಂಪನಿಯನ್ನು ಸ್ಥಾಪಿಸಿದರು. ಆ ನಂತರ ಧೋಲೇರಾ ಸ್ಮಾರ್ಟ್ ಸಿಟಿಯಲ್ಲಿ ಹೆಚ್ಚಿನ ಲಾಭ ಮತ್ತು ಭೂಮಿ ನೀಡುವ ಆಮಿಷವೊಡ್ಡಿ ಹೂಡಿಕೆದಾರರಿಗೆ ಮೋಸ ಮಾಡಿದರು. ಧೋಲೇರಾ ನಗರದ ಯೋಜನೆಗಳ ಚಿತ್ರಗಳನ್ನು ತೋರಿಸಿ ನಂಬಿಸಿ, ಜನರಿಂದ ಹಣ ದೋಚಿದರು.
ಹೆಚ್ಚಿನ ಕಮಿಷನ್ ನೀಡುವುದಾಗಿ ವಂಚನೆ
ಇಬ್ಬರು ಸಹೋದರರು ಹೂಡಿಕೆದಾರರನ್ನು ಸೆಳೆಯಲು ಬೇರೆ ಬೇರೆ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದರು. ಅವರ ಗುಂಪಿಗೆ ಹೆಚ್ಚೆಚ್ಚು ಜನರನ್ನು ಸೇರಿಸಿದರೆ ಕಮಿಷನ್, ಲ್ಯಾಪ್ಟಾಪ್, ಕಮಿಷನ್, ಬೈಕ್ ಮತ್ತು ಕಾರುಗಳಂತಹ ಬಹುಮಾನಗಳನ್ನು ನೀಡುವ ಆಮಿಷವೊಡ್ಡಿ, ಮೋಸ ಮಾಡುತ್ತಿದ್ದರು.
ಧೋಲೇರಾ ಸ್ಮಾರ್ಟ್ ಸಿಟಿ ಹಗರಣ ಹೇಗೆ ನಡೆಯಿತು?
ರಣವೀರ್ ಬಿಜಾರಾಣಿ 2014 ರಲ್ಲಿ ಮೊದಲ ಬಾರಿಗೆ ಧೋಲೇರಾದಲ್ಲಿ ಭೂಮಿ ಖರೀದಿಸಿದರು. ಸುಭಾಷ್ ಅವರು ನಿವೃತ್ತಿಯ ನಂತರ 30 ಲಕ್ಷ ರೂಪಾಯಿಗಳನ್ನು ಪಡೆದು ಭೂಮಿ ಖರೀದಿಸಿದರು. ನಂತರ ಇಬ್ಬರೂ ಸೇರಿ 2021 ರಲ್ಲಿ “ನೆಕ್ಸಾ ಎವರ್ಗ್ರೀನ್” ಕಂಪನಿ ಅಹಮದಾಬಾದ್ನಲ್ಲಿ ನೋಂದಾಯಿಸಿದರು. ಕಂಪನಿಯು ಧೋಲೇರಾ ಸ್ಮಾರ್ಟ್ ಸಿಟಿ ಯೋಜನೆಯ ಭಾಗವೆಂದು ಹೇಳಿಕೊಂಡಿದ್ದರು. ಅಲ್ಲದೆ, 1,300 ಬಿಘಾ (ಭಾರತದಲ್ಲಿ ಭೂಮಿಯನ್ನು ಅಳೆಯುವ ಒಂದು ಸಾಂಪ್ರದಾಯಿಕ ಘಟಕ) ಭೂಮಿ ಹೊಂದಿದ್ದು, ಅದನ್ನು ವಿಶ್ವ ದರ್ಜೆಯ ನಗರವನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಲಾಗಿತ್ತು.
ಸುಮಾರು 70,000 ಕ್ಕೂ ಹೆಚ್ಚು ಜನರಿಗೆ ಫ್ಲ್ಯಾಟ್ಗಳು, ನಿವೇಶನಗಳು ಮತ್ತು ಹೂಡಿಕೆ ಯೋಜನೆಗಳ ಆಮಿಷವೊಡ್ಡಿ ದೊಡ್ಡ ಲಾಭದ ಭರವಸೆ ನೀಡಿದರು. ಇದರಿಂದ ಸುಮಾರು 2,676 ಕೋಟಿ ರೂಪಾಯಿ ಸಂಗ್ರಹಿಸಿದರು.
ಸಲೀಂ ಖಾನ್, ಸಮೀರ್, ದಾತಾರ್ ಸಿಂಗ್, ರಕ್ಷಾಪಾಲ್, ಓಂಪಾಲ್ ಮತ್ತು ಸನ್ವರ್ಮಾಲ್ ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ನೇಮಿಸಿಕೊಂಡರು. ಅವರ ಮೂಲಕ ರಾಜಸ್ಥಾನದಲ್ಲಿ ಸಾವಿರಾರು ಏಜೆಂಟರನ್ನು ನೇಮಿಸಿ, ಅವರಿಗೆ ಹೆಚ್ಚಿನ ಕಮಿಷನ್ ನೀಡಿದರು. ಸುಮಾರು 1,500 ಕೋಟಿ ರೂಪಾಯಿಗಳನ್ನು ಕಮಿಷನ್ ಆಗಿ ಹಂಚಿದರು.
ವಂಚನೆಯಿಂದ ಖರೀದಿಸಿದ್ದು ಏನು?
ನಂತರ ವಂಚನೆಯಿಂದ ಬಂದ ಹಣದಿಂದ 1,300 ಬಿಘಾ ಭೂಮಿ ಖರೀದಿಸಿದರು. ಐಷಾರಾಮಿ ಕಾರುಗಳು, ಗಣಿಗಳು, ರಾಜಸ್ಥಾನದಲ್ಲಿ ಹೋಟೆಲ್ಗಳು, ಅಹಮದಾಬಾದ್ನಲ್ಲಿ ಫ್ಲ್ಯಾಟ್ಗಳು ಮತ್ತು ಗೋವಾದಲ್ಲಿ 25 ರೆಸಾರ್ಟ್ಗಳನ್ನು ಖರೀದಿಸಿದರು. 250 ಕೋಟಿ ರೂಪಾಯಿ ನಗದು ತೆಗೆದುಕೊಂಡು ಉಳಿದ ಹಣವನ್ನು 27 ಶೆಲ್ ಕಂಪನಿಗಳಿಗೆ ವರ್ಗಾಯಿಸಿದರು. ವಂಚನೆ ಬೆಳಕಿಗೆ ಬರುತ್ತಿದ್ದಂತೆ ಎಲ್ಲ ಕಚೇರಿಗಳನ್ನು ಮುಚ್ಚಿ ಎಸ್ಕೇಪ್ ಆಗಿದ್ದರು.
ರಾಜಸ್ಥಾನದ ಜೋಧ್ಪುರದಲ್ಲಿ ಪೊಲೀಸರು ವಂಚನೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜಾರಿ ನಿರ್ದೇಶನಾಲಯವು (ED) ಜೈಪುರ, ಸಿಕರ್, ಝುಂಜುನು ಮತ್ತು ಅಹಮದಾಬಾದ್ನಲ್ಲಿ 25 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಇದು ನೆಕ್ಸಾ ಎವರ್ಗ್ರೀನ್ ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯಾಗಿದೆ.
ಧೋಲೇರಾ ಸ್ಮಾರ್ಟ್ ಸಿಟಿ ಯೋಜನೆಯು ಕೇಂದ್ರ ಮತ್ತು ಗುಜರಾತ್ ಸರ್ಕಾರದ ಜಂಟಿ ಯೋಜನೆಯಾಗಿದೆ. ಇದು ಭಾರತದ ಮೊದಲ ಹಸಿರು ಸ್ಮಾರ್ಟ್ ಸಿಟಿ. ಇದು ದೆಹಲಿಗಿಂತ ಎರಡು ಪಟ್ಟು ದೊಡ್ಡದಾಗಿದೆ (920 ಚದರ ಕಿ.ಮೀ). ಇಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಕಚೇರಿಗಳನ್ನು ನಿರ್ಮಿಸಲಾಗುತ್ತಿದೆ. ಈ ಯೋಜನೆಯು 2042 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.