ಹನಿಟ್ರ್ಯಾಪ್ ಅಲ್ಲ, ನನಗೆ ಕೊಲೆ ಯತ್ನ ಎಂದು ಉಲ್ಟಾ ಹೊಡೆದ ರಾಜೇಂದ್ರ ಪುತ್ರ

ಬೆಂಗಳೂರು : ತಮ್ಮ ತಂದೆ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಬಳಿಕ ಹನಿಟ್ರ್ಯಾಪ್ ಪ್ರಕರಣ ಸಂಬಂಧ ಅವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಕೂಡ ಉಲ್ಟಾ ಹೊಡೆದಿದ್ದಾರೆ.
ತಮ್ಮ ಮೇಲೆ ಹನಿಟ್ರ್ಯಾಪ್ ಆಗಿಲ್ಲ. ನಾಲ್ಕು ತಿಂಗಳ ಹಿಂದೆ 5 ಲಕ್ಷ ರು.ಗೆ ಸುಪಾರಿ ಪಡೆದು ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದಾರೆ ಎಂದು ಆರೋಪಿಸಿ ತನಿಖೆ ನಡೆಸುವಂತೆ ಗುರುವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ರಾಜೇಂದ್ರ ದೂರು ನೀಡಿದ್ದಾರೆ.
ಕೆಲ ದಿನಗಳ ಹಿಂದೆ ವಿಧಾನಸಭಾ ಅಧಿವೇಶನದ ಹೊತ್ತಿನಲ್ಲಿ ರಾಜಕೀಯ ವಲಯದಲ್ಲಿ ಹೊತ್ತಿಕೊಂಡ ಹನಿಟ್ರ್ಯಾಪ್ ಬೆಂಕಿಗೆ ಸಚಿವರ ಪುತ್ರ ಸಹ ತುಪ್ಪ ಸುರಿದಿದ್ದರು. ತಮ್ಮ ತಂದೆ ಸಚಿವ ರಾಜಣ್ಣ ಮಾತ್ರವಲ್ಲ ತಮ್ಮ ಮೇಲೂ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎಂದು ವಿಧಾನಸೌಧ ಆವರಣದಲ್ಲಿ ಸುದ್ದಿಗಾರರಿಗೆ ಹೇಳಿಕೆ ಕೊಟ್ಟಿದ್ದ ರಾಜೇಂದ್ರ, ಅಂದು ಈ ಹನಿಟ್ರ್ಯಾಪ್ ಜಾಲದ ವಿರುದ್ಧ ಸಮಗ್ರ ತನಿಖೆಗೆ ಲಿಖಿತ ದೂರು ಕೊಡುವುದಾಗಿ ಕೂಡ ಗುಡುಗಿದ್ದರು. ಆದರೆ ಈಗ ತಮ್ಮ ಮೇಲೆ ಹನಿಟ್ರ್ಯಾಪ್ ನಡೆದೇ ಇಲ್ಲ. ನಡೆದಿರೋದು ಸುಪಾರಿ ಕೊಲೆ ಯತ್ನ ಎಂದು ರಾಜೇಂದ್ರ ವರಸೆ ಬದಲಾಯಿಸಿದ್ದಾರೆ.
ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಡಿಜಿ-ಐಜಿಪಿ ಅಲೋಕ್ ಮೋಹನ್ ಅವರನ್ನು ಭೇಟಿಯಾದ ರಾಜೇಂದ್ರ ಅವರು, ತಮ್ಮ ಮೇಲೆ ನಡೆದಿರುವ ಕೊಲೆ ಯತ್ನದ ಬಗ್ಗೆ ತನಿಖೆಗೆ ಆಗ್ರಹಿಸಿ ದೂರು ಸಲ್ಲಿಸಿದರು. ಆಗ ತುಮಕೂರಿನಲ್ಲಿ ಕೃತ್ಯ ನಡೆದಿರುವ ಕಾರಣ ಸ್ಥಳೀಯ ಪೊಲೀಸರಿಗೆ ದೂರು ನೀಡುವಂತೆ ಹೇಳಿ ರಾಜೇಂದ್ರ ಅವರನ್ನು ಡಿಜಿಪಿ ಕಳುಹಿಸಿದ್ದಾರೆ.
ಶಾಮಿಯಾನ ಹಾಕಲು ಬಂದು ಕೊಲೆ ಯತ್ನ:
ಪೊಲೀಸ್ ಮಹಾನಿರ್ದೇಶಕರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಂದ್ರ, ನನ್ನ ಮೇಲೆ ಹನಿಟ್ರ್ಯಾಪ್ ನಡೆದಿಲ್ಲ. ಆದರೆ ಕೊಲೆಗೆ ವಿಫಲ ಯತ್ನ ನಡೆದಿದೆ ಎಂದು ಸ್ಪಷ್ಟಪಡಿಸಿದರು