1 ದಿನ ರಜೆ ಇಲ್ಲ , ಮಕ್ಕಳ ನಾಮಕರಣಕ್ಕೆ ಸಹ ಹೋಗಲಿಲ್ಲ- ಬಿ. ದಯಾನಂದ್

ಬೆಂಗಳೂರು: ಬೆಂಗಳೂರು ಆರ್ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಅವಘಡ, ಸಾವುಗಳ ಹೊಣೆಯನ್ನು ಬೆಂಗಳೂರು ನಗರ ಪೊಲೀಸರಿಗೆ ಕಟ್ಟಲಾಯಿತು. 35 ವರ್ಷಗಳಿಂದ ರಜೆ ಪಡೆಯದೇ ಕೆಲಸ ಮಾಡಿದ್ದ, ವೃತ್ತಿಗೆ ನಿಷ್ಠೆ ಮೆರೆದಿದ್ದ ನಿಷ್ಠಾವಂತ ಬೆಂಗಳೂರು ನಗರ ಪೊಲೀಸ್ ಬಿ.ದಯಾನಂದ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಖಂಡನೀಯ ನಡೆ ಪ್ರದರ್ಶಿಸಿತು.
ಸದ್ಯ ಬಿ.ದಯಾನಂದ್ ಅವರ ಬೆನ್ನಿಗೆ ಸಾಕಷ್ಟು ಐಪಿಎಸ್ ಅಧಿಕಾರಿಗಳು ಜೊತೆಯಾಗಿ ನಿಂತಿದ್ದಾರೆ. ಇಂತಹ ಪ್ರಾಮಾಣಿಕ IPS ಅಧಿಕಾರಿ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟ್ರಸ್ಟಿಂಗ್ ಸಂಗತಿಗಳು ಇಲ್ಲಿವೆ.
ಸರ್ಕಾರ ಬಿ.ದಯಾನಂದ್ ಅಮಾನತಿನ ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೀಮತ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಸದ್ಯ ಸರ್ಕಾರದ ಅಮಾನತು ಆದೇಶವನ್ನು ಅನುಮೋದನೆಗಾಗಿ ಕೇಂದ್ರ ಸರ್ಕಾರದ ರವಾನಿಸಲಾಗಿದೆ. ಕರ್ತವ್ಯದಿಂದ ಹೊರ ನಡೆದ ಮಾಜಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಯೂಟ್ಯೂಬರ್ ಒಬ್ಬರ ಜೊತೆ ಮಾತನಾಡಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅವರ ಕರ್ತವ್ಯ ನಿಷ್ಠೆ, ಸಮರ್ಪಣೆ ಭಾವಕ್ಕೆ ನಾಡಿನ ಜನರು ಸೆಲ್ಯೂಟ್ ಹೊಡೆಯುತ್ತಿದ್ದಾರೆ. ನಿಮ್ಮ ಈ ರೆಕಾರ್ಡ್ ಯಾರು ಮುರಿಯೋಕೆ ಸಾಧ್ಯ ಇಲ್ಲ ಬಿಡಿ ಸಾರ್ ಎಂದು ಹೇಳುತ್ತಿದ್ದಾರೆ.
ವಿಡಿಯೋದಲ್ಲಿ ಹೀಗೆ ಮಾತನಾಡುವಾಗ ಕೆಲವು ಪ್ರಶ್ನೆಗಳಿಗೆ ಬಿ.ದಯಾನಂದ್ ಅವರು ಉತ್ತರಿಸಿದ್ದಾರೆ. ‘ಹೌದು ಕಳೆದ
35 ವರ್ಷಗಳಲ್ಲಿ ಒಂದೇ ಒಂದು ದಿನ ರಜೆ ಇಲ್ಲದೇ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಈ ರೀತಿ ಮಾಡಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ರಜೆ ತೆಗೆದುಕೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಫ್ಯಾಮಿಲಿಯ ಯಾವ ಕಾರ್ಯಕ್ರಮಕ್ಕೂ ನೀವು ಹೋಗಲ್ವಂತೆ ಎಂಬ ಪ್ರಶ್ನೆ ಅವರು, ನಾನು ರಜೆ ಹಾಕುವುದಿಲ್ಲ. ಅದರಲ್ಲೂ ಇಂತಹ ಕಾರ್ಯಕ್ರಮಳಿಗೆ ಹೋಗಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿಯೇ ನನ್ನನ್ನು ಸಂಬಂಧಿಕರು, ಮನೆಯಲ್ಲಿ ಕಾರ್ಯಕ್ರಮಗಳಿಗೆ ಆಹ್ವಾನಿಸುವುದನ್ನೆ ಬಿಟ್ಟು ಬಿಟ್ಟಿದ್ದಾರೆ ಎಂದರು.
ಎಂಗೇಜ್ಮೆಂಟ್ ಮುಂದೂಡಿದ್ದ ಬಿ.ದಯಾನಂದ
ಮಂಗಳೂರಿನಲ್ಲಿ ಕರ್ತವ್ಯದಲ್ಲಿದ್ದಾಗ ಒಮ್ಮೆ ಪರಿಸ್ಥಿತಿ ಸರಿ ಇರಲಿಲ್ಲ. ಕಾನೂನು ಸನ್ನಿವೇಶ ಎದುರಾಗಿ ನಾನು ಮಂಗಳೂರಲ್ಲೇ ಇರಬೇಕಾಯಿತು. ಅಲ್ಲಿ ಬಿಗಿ ಬಂದೋಬಸ್ತ್ ನೀಡಬೇಕಾಗಿತ್ತು. ಅವತ್ತೆ ನನ್ನ ಎಂಗೇಜ್ಮೆಂಟ್ ಇತ್ತು. ಕರ್ತವ್ಯ ಹಿನ್ನೆಲೆಯಲ್ಲಿ ನಾನು ಎಂಗೇಜ್ಮೆಂಟ್ ಅನ್ನು ಒಂದು ದಿನ ಮುಂದೂಡಿದ್ದೆ. ಅಂದಿನ ಸನ್ನಿವೇಶದಲ್ಲಿ ನನಗೆ ಬೆಂಗಳೂರಿಗೆ ಬರಲು ಆಗಲಿಲ್ಲ ಎಂದು ಹೇಳಿದ್ದಾರೆ. ಇದೆಲ್ಲ ನೋಡಿದರೆ, ಒಬ್ಬ ಪೊಲಿಸ್ ಅಧಿಕಾರಿ ಕರ್ತವ್ಯಕ್ಕಾಗಿ ವೈಯಕ್ತಿಕ ಜೀವನ ತೊರೆದು ಹೀಗೆಲ್ಲ ಕಾರ್ಯ ನಿಷ್ಠೆ ಮೆರೆಬಹುದೇ? ಇದು ಸಾಧ್ಯವಾ? ಎಂದು ಪ್ರಶ್ನಿಸುವವರಿಗೆ ಇವರು ಉತ್ತರವಾಗಿ ನಿಲ್ಲುತ್ತಾರೆ.
ಮಕ್ಕಳ ನಾಮಕರಣಕ್ಕೆ ಹೋಗಿಲ್ಲ..
ಮುಂದುವರಿದು ಮಾತನಾಡಿದ ಅವರು ”ನನ್ನ ಮಕ್ಕಳ ನಾಮಕರಣಕ್ಕೆ ಹೋಗಿಲ್ಲ… ಎಂದು ಯೂಟ್ಯೂಬರ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಬೆಂಗಳೂರು ನಗರದ ಮಾಜಿ ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು ಸಂದರ್ಶನ ನೀಡಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದಶಕಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ಈ ರಾಜ್ಯ ಸರ್ಕಾರ ನೀಡಿದ್ದು, ಅಮಾನತಿನ ಬಹುಮಾನ, ಅಮಾನತು ಹೆಸರಿನಲ್ಲಿ ಶಿಕ್ಷೆ ನೀಡಿದೆ ಎಂದು ನೆಟ್ಟಿಗರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಒಂದೇ ಒಂದು ರಜೆ ತೆಗೆದುಕೊಳ್ಳದೇ ತೋರಿದ ಕರ್ತವ್ಯನಿಷ್ಠೆಗೆ ಕನ್ನಡಿಗರು ಹ್ಯಾಟ್ಸ್ ಆಫ್ ಹೇಳಿದ್ದಾರೆ. ವಿಡಿಯೋ ಸಾಕಷ್ಟು ಕಡೆಗಳಲ್ಲಿ ಶೇರ್ ಆಗುತ್ತದೆ.