ಧೋನಿಗೆ ವಿರೋಧವಿಲ್ಲ, ತಮನ್ನಾ ಯಾಕೆ ಟಾರ್ಗೆಟ್?– ಮೈಸೂರು ಸ್ಯಾಂಡಲ್ ಸೋಪ್ ವಿವಾದಕ್ಕೆ ಹೊಸ ತಿರುವು!

ಬೆಂಗಳೂರು: ರಾಜ್ಯ ಸರ್ಕಾರದ ಒಡೆತನದ ಕೆಎಸ್ಡಿಎಲ್ ಸಂಸ್ಥೆ ಪರಭಾಷಾ ನಟಿ ತಮನ್ನಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದ್ದು, ಸದ್ಯ ಈ ವಿಷಯ ಭಾರೀ ವಿವಾದವನ್ನು ಹುಟ್ಟುಹಾಕಿದೆ.
ಸಾಮಾಜಿಕ ಜಾಲತಾಣದಲ್ಲಿ ಹಾಗೂ ಭೌತಿಕವಾಗಿ ರಾಜ್ಯ ಸರ್ಕಾರ ತಮನ್ನಾ ಭಾಟಿಯಾ ಅವರನ್ನು 6.2 ಕೋಟಿ ಸಂಭಾವನೆ ನೀಡಿ ನೇಮಕ ಮಾಡಿಕೊಂಡಿದ್ದು, ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಕನ್ನಡದಲ್ಲಿಯೇ ಹಲವಾರು ನಟಿಯರು ಇರುವಾಗ ಪರಭಾಷಾ ನಟಿಯನ್ನು ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಳ್ಳುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದು, ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇನ್ನು ಕನ್ನಡಿಗರು ಮಾತ್ರವಲ್ಲದೇ ವಿರೋಧ ಪಕ್ಷದ ನಾಯಕರೂ ಸಹ ತಮನ್ನಾ ಭಾಟಿಯಾ ಆಯ್ಕೆಯನ್ನು ವಿರೋಧಿಸಿದ್ದಾರೆ.
ಅತ್ತ ಕಾಂಗ್ರೆಸ್ ನಾಯಕರು ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಸಚಿವ ಎಂಬಿ ಪಾಟೀಲ್ ಇಂದು ( ಮೇ 26 ) ಸಹ ಸುದ್ದಿಗೋಷ್ಟಿಯಲ್ಲಿ ಈ ವಿಷಯದ ಕುರಿತು ಮಾತನಾಡಿದ್ದಾರೆ.
ಬಿಜೆಪಿ ಸರ್ಕಾರದ ಸಮಯದಲ್ಲಿ ಕೆಎಸ್ಡಿಎಲ್ ಅಕ್ರಮಗಳ ಅಡ್ಡೆಯಾಗಿತ್ತು ಎಂದು ಆರೋಪಿಸಿದ ಎಂಬಿ ಪಾಟೀಲ್ ಕಾಂಗ್ರೆಸ್ ಅಡಿಯಲ್ಲಿ ಕೆಎಸ್ಡಿಎಲ್ ಉತ್ತಮ ಸ್ಥಿತಿಯತ್ತ ಮರಳಿದೆ ಎಂದು ಎಂಬಿ ಪಾಟೀಲ್ ಸಮರ್ಥಿಸಿಕೊಂಡರು.
ಹಾಗೆಯೇ ರಾಜ್ಯ ಹೊರತುಪಡಿಸಿ ಹೊರರಾಜ್ಯಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಬಳಕೆದಾರರ ಪ್ರಮಾಣ ದೊಡ್ಡದಿದ್ದು, ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು. ಹಾಗೆ ಹೇಳುವುದಾದರೆ ಈ ಹಿಂದೆ ಎಂಎಸ್ ಧೋನಿಯವರು ಮೈಸೂರು ಸ್ಯಾಂಡಲ್ ಸೋಪ್ನ ರಾಯಭಾರಿಯಾಗಿದ್ದರು, ಆಗ ಯಾಕೆ ಯಾರೂ ಮಾತನಾಡಲಿಲ್ಲ ಎಂದು ಕನ್ನಡ ಪ್ರೇಮಿಗಳು ಹಾಗೂ ತಮನ್ನಾ ಆಯ್ಕೆ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.