ಒಸಿ/ಸಿಸಿ ಇಲ್ಲದೆ ಹೊಸ ಕಟ್ಟಡಗಳಿಗೆ ಸಂಪರ್ಕವಿಲ್ಲ – ಸುಪ್ರೀಂ ತೀರ್ಪಿನಿಂದ ರಾಜ್ಯದಲ್ಲಿ ‘ಲಕ್ಷಾಂತರ’ ಕಟ್ಟಡಗಳಿಗೆ ಸಂಕಷ್ಟ

ಬೆಂಗಳೂರು: ವಾಸ ಯೋಗ್ಯ ಪ್ರಮಾಣಪತ್ರ ಮತ್ತು ಮುಕ್ತಾಯ ಪ್ರಮಾಣಪತ್ರ (ಆಕ್ಯುಪೆನ್ಸಿ ಸರ್ಟಿಫಿಕೇಟ್ ಮತ್ತು ಕಂಪ್ಲೀಷನ್ ಸರ್ಟಿಫಿಕೇಟ್) ಇಲ್ಲದೆ ಯಾವುದೇ ಹೊಸ ಕಟ್ಟಡಗಳಿಗೆ ವಿದ್ಯುತ್, ನೀರು ಮತ್ತು ಒಳಚರಂಡಿ ಸಂಪರ್ಕ ನೀಡಬಾರದೆಂಬ ಸುಪ್ರೀಂ ಕೋರ್ಟ್ ತೀರ್ಪಿನಿಂದ ರಾಜ್ಯದಲ್ಲಿ ದೊಡ್ಡ ಬಿಕ್ಕಟ್ಟು ಉದ್ಭವಿಸಿದೆ.
ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಸುಮಾರು 3 ಲಕ್ಷಕ್ಕೂ ಅಧಿಕ ಜನರು ಮನೆ/ ಇನ್ನಿತರ ಕಟ್ಟಡ ನಿರ್ಮಾಣ ಕಾರ್ಯವನ್ನು ಅರ್ಧಕ್ಕೇ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಹೊಸದಾಗಿ ನಿರ್ಮಾಣ ಕಾರ್ಯ ಆರಂಭಿಸಲೂ ಒಸಿ/ಸಿಸಿ ಅಡ್ಡಿಯಾಗಿದೆ. ಇದು ಸರಕಾರಕ್ಕೂ ದೊಡ್ಡ ತಲೆನೋವಾಗಿದೆ.
ಪ್ರತಿಯೊಬ್ಬರಿಗೂ ಸೂರು ಕಟ್ಟಿಕೊಡುವ ಜವಾಬ್ದಾರಿ ಸರಕಾರದ್ದು. ಹಾಗಿದ್ದೂ, ಇಂದಿನ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಣ್ಣ ಪುಟ್ಟ ಸೂರುಗಳಿಗೆ ಮಾತ್ರವಲ್ಲ, ಹೊಲ ಗದ್ದೆಗಳಲ್ಲಿ ಕಟ್ಟಿಕೊಂಡ ಗುಡಿಸಲುಗಳಿಗೂ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ವಾಸಯೋಗ್ಯ ಪ್ರಮಾಣಪತ್ರದ ಅಗತ್ಯವೇ ಇರದ ಕಾರ್ಖಾನೆ, ಶೆಡ್ಡುಗಳಿಗೂ ವಿದ್ಯುತ್ ಸಂಪರ್ಕ ನಿರಾಕರಿಸಲಾಗುತ್ತಿದೆ.
ಒಸಿ, ಸಿಸಿ ನಿಬಂಧನೆಯಿಲ್ಲ:
ಸ್ಥಳೀಯ ಸಂಸ್ಥೆ ಸಂಬಂಧಿ ಕಾನೂನುಗಳಲ್ಲಿ ಮುಕ್ತಾಯ ಮತ್ತು ವಾಸಯೋಗ್ಯ ಪ್ರಮಾಣಪತ್ರಗಳನ್ನು ಹೊಂದಿರಬೇಕೆಂಬ ಪ್ರಸ್ತಾಪವಿದೆ ನಿಜ. ಆದರೆ, ವಿದ್ಯುತ್ ಅಥವಾ ನೀರಿನ ಸಂಪರ್ಕ ನೀಡಲು ಅಥವಾ ನೀಡುವ ಮೊದಲು ಒಸಿ, ಸಿಸಿ ಹೊಂದಿರಬೇಕೆಂಬ ಕಟ್ಟಳೆಯಿಲ್ಲ. ಮುಖ್ಯವಾಗಿ ವಿದ್ಯುತ್ ಸಂಪರ್ಕ ಕಾಯಿದೆ-2003ರಲ್ಲಿ ಮುಕ್ತಾಯ ಅಥವಾ ವಾಸಯೋಗ್ಯ ಪ್ರಮಾಣಪತ್ರವನ್ನು ಸಲ್ಲಿಸುವ ನಿಬಂಧನೆಯಿಲ್ಲ. ಹಾಗಾಗಿ, ಮುಕ್ತಾಯ ಮತ್ತು ವಾಸಯೋಗ್ಯ ಪ್ರಮಾಣಪತ್ರಗಳೆರಡೂ ಪಡೆಯುವ ಬಾಧ್ಯತೆ ವಿದ್ಯುತ್ ಮತ್ತಿತರ ಅತ್ಯಗತ್ಯ ಸಂಪರ್ಕಗಳನ್ನು ಪಡೆದ ಮೇಲೆಯೇ ಉದ್ಭವಿಸಲು ಸಾಧ್ಯ. ಸರಕಾರ ಸಕಾಲದಲ್ಲಿ ಎಚ್ಚೆತ್ತು ಅಗತ್ಯ ತಿದ್ದುಪಡಿ ಮಾಡದಿದ್ದರೆ, ಲಕ್ಷಾಂತರ ಕಟ್ಟಡಗಳು ವಿದ್ಯುತ್, ನೀರು ಸೇರಿದಂತೆ ಅತ್ಯಗತ್ಯ ಸೌಲಭ್ಯಗಳಿಂದ ವಂಚಿತವಾಗುವ ಅಪಾಯವಿದೆ.
ಈ ಬಗ್ಗೆ ಅಳವಾಗಿ ಅಧ್ಯಯನ ನಡೆಸಿರುವ ಹೈಕೋರ್ಟ್ ವಕೀಲ ಶ್ರೀಧರ್ಪ್ರಭು, ಸುಪ್ರೀಂ ತೀರ್ಪು ಉಲ್ಲಂಘನೆ ಮಾಡದೆ ಹೇಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬಹುದೆಂಬ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಕಾನೂನು ಸಚಿವರಿಗೆ ಪತ್ರ ಬರೆದು ಏನು ಮಾಡಬೇಕೆಂಬ ಸಲಹೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು 2024ರ ಡಿ.12ರಂದು. ಅದಾಗಿ ಆರು ತಿಂಗಳು ಕಳೆದಿದೆ. ಈವರೆಗೆ ತೀರ್ಪಿನಿಂದ ಏನೇನು ಸಮಸ್ಯೆ ಆಗಲಿದೆ, ಅದಕ್ಕೆ ಪರಿಹಾರೋಪಾಯಗಳೇನು ಎಂಬ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಸರಕಾರ ಈಗ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಲು ಮುಂದಾಗಿದೆ.
ಸರಕಾರ ಏನು ಮಾಡಬೇಕು
-ಸದ್ಯ ಉದ್ಭವಿಸಿರುವ ಒಸಿ/ಸಿಸಿ ಬಿಕ್ಕಟ್ಟಿನಿಂದ ಪಾರಾಗಲು ಸರಕಾರ ತಕ್ಷಣಕ್ಕೆ ವಿದ್ಯುತ್ ಮತ್ತಿತರ ಅತ್ಯಗತ್ಯ ಸಂಪರ್ಕಗಳನ್ನು ಪಡೆದ ಮೇಲೆಯೇ ಮುಕ್ತಾಯ ಮತ್ತು ವಾಸಯೋಗ್ಯ ಪ್ರಮಾಣಪತ್ರಗಳೆರಡೂ ಪಡೆಯಬೇಕಿದೆ ಎಂದು ಸರಳವಾದ ವಿವರಣೆಯೊಂದನ್ನು ತನ್ನ ಆದೇಶದಲ್ಲಿ ಸೇರಿಸಿ, ಪರಿಷ್ಕೃತ ಆದೇಶ ಹೊರಡಿಸಬೇಕು.
-ಒಂದು ಕಟ್ಟಡಕ್ಕೆ ಅತ್ಯಗತ್ಯ ವಿದ್ಯುತ್, ನೀರು ಮತ್ತು ಒಳಚರಂಡಿ ಸಂಪರ್ಕಗಳೇ ಇಲ್ಲವೆಂದಾದಲ್ಲಿ ಅಂತಹ ಕಟ್ಟಡಗಳು ವಾಸಯೋಗ್ಯವೇ ಅಥವಾ ಅವುಗಳನ್ನು ವಾಸಯೋಗ್ಯವೆಂದು ಪ್ರಮಾಣೀಕರಿಸಬಹುದೇ? ಈ ಬಿಕ್ಕಟ್ಟು ಪರಿಹಾರಕ್ಕೆ ಶಾಸನ ರೂಪಿಸುವುದೇ ಸರಕಾರದ ಮುಂದಿರುವ ಮಾರ್ಗ.
-ರಾಜ್ಯ ಸರಕಾರ ಬಿಬಿಎಂಪಿ, ಕೆಎಂಸಿ ಹಾಗೂ ವಿದ್ಯುತ್ ಕಾಯಿದೆ ಸೇರಿ ಸ್ಥಳೀಯ ಸಂಸ್ಥೆಗಳ ಕಾನೂನುಗಳಲ್ಲಿಅಗತ್ಯ ತಿದ್ದುಪಡಿ ಮಾಡಿ ವಿದ್ಯುತ್ ಮತ್ತಿತರ ಅತ್ಯಗತ್ಯ ಸಂಪರ್ಕಗಳನ್ನು ಪಡೆದ ಮೇಲೆಯೇ ಮುಕ್ತಾಯ ಮತ್ತು ವಾಸಯೋಗ್ಯ ಪ್ರಮಾಣಪತ್ರಗಳೆರಡನ್ನೂ ಪಡೆಯಬೇಕೆಂದು ಸರಳ ವಿವರಣೆ ಸೇರಿಸಬೇಕಿದೆ. ಒಂದು ವೇಳೆ ವಾಸಯೋಗ್ಯ ಪ್ರಮಾಣಪತ್ರ ಪಡೆಯದಿದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳುವ ಹಕ್ಕು ಸ್ಥಳೀಯ ಸಂಸ್ಥೆಗಳಿರುತ್ತದೆ.
ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳೀಯ ಕಾನೂನುಗಳಿಗೆ ತಿದ್ದುಪಡಿ ಮಾಡಿ ವಿದ್ಯುತ್ ಮತ್ತಿತರ ಅತ್ಯಗತ್ಯ ಸಂಪರ್ಕಗಳನ್ನು ಪಡೆದ ಮೇಲೆಯೇ ಮುಕ್ತಾಯ ಪ್ರಮಾಣ ಮತ್ತು ವಾಸ ಯೋಗ್ಯ ಪ್ರಮಾಣಪತ್ರಗಳೆರಡೂ ಪಡೆಯಬಹುದೆಂಬ ವಿವರಣೆ ಸೇರಿಸುವುದರಿಂದ ಸಮಸ್ಯೆಯಿಂದ ಪಾರಾಗಬಹುದು. ಅದು ಬಿಟ್ಟರೆ ಅನ್ಯ ಮಾರ್ಗವಿಲ್ಲ ಎಂದಿದ್ದಾರೆ ಶ್ರೀಧರ್ ಪ್ರಭು, ಹೈಕೋರ್ಟ್ ವಕೀಲರು