ಬದುಕಿಗೆ ಬೇಡ ಉಚಿತ ವಿದ್ಯುತ್, ಬೇಕು ನಿರಂತರ ಪವರ್: ಟೆಕ್ಕಿಯ ಮನವಿಗೆ ಭರ್ಜರಿ ಪ್ರತಿಕ್ರಿಯೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮಳೆಗೆ ಕೆರೆಯಂತಾಗಿದೆ. ರಸ್ತೆಗಳು ಬ್ಲಾಕ್, ಚರಂಡಿ ಫುಲ್, ಎಲ್ಲೆಡೆ ನೀರು, ಅಸ್ತವ್ಯಸ್ತೆ ಕಣ್ಣಿಗೆ ರಾಚುತ್ತಿದೆ. ಇದರ ನಡುವೆ ಕೆಲ ಗಂಭೀರ ಸಮಸ್ಯೆಗಳು ಬೆಂಗಳೂರು ಮಾತ್ರವಲ್ಲ ಕರ್ನಾಟಕದಲ್ಲೇ ತಲೆದೋರುತ್ತಿದೆ. ಪ್ರಮುಖವಾಗಿ ವಿದ್ಯುತ್ ಕಡಿತ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವರ ಬಾಳಿಗೆ ಕತ್ತಲಾಗುತ್ತಿದೆ.
ರಾಜ್ಯದಲ್ಲಿ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ ಬಹುತೇಕರು ಪವರ್ ಕಟ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ಇದೀಗ ಬೆಂಗಳೂರಿನ ಪ್ರಮುಖ ಏರಿಯಾದಲ್ಲಿರುವ ಐಟಿ ಎಂಜಿನೀಯರ್ ಈ ಸರ್ಕಾರದ ಪವರ್ ಕಟ್ನಿಂದ ನಾನು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದೇನೆ ಎಂದಿದ್ದಾರೆ. ಈ ಕುರಿತು ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಿರುವ ಟೆಕ್ಕಿ, ಸರ್ಕಾರದ ಹಾಗೂ ವ್ಯವಸ್ಥೆ ವಿರುದ್ದ ಹಿಡಿ ಶಾಪ ಹಾಕಿದ್ದಾರೆ.
ವಿದ್ಯುತ್ ಕಡಿತ ಮಾಡಬೇಡಿ, ಕೆಲಸ ಉಳಿಸಿಕೊಳ್ಳುತ್ತೇನೆ
ಟೆಕ್ ರಾಜಧಾನಿ ಎಂದೇ ಗುರತಿಸಿಕೊಂಡಿರುವ ಬೆಂಗಳೂರಿನಲ್ಲಿ ನೆಟ್ಟಗೆ ಪವರ್ ನೀಡುತ್ತಿಲ್ಲ. ಪದೇ ಪದೇ ಪವರ್ ಕಟ್ ಮಾಡಿ ನಮ್ಮ ಕೆಲಸಕ್ಕೂ ಕುತ್ತು ತರುತ್ತಿದ್ದರೆ ಎಂದು ಟೆಕ್ಕಿ ಆಕ್ರೋಶ ಹೊರಹಾಕಿದ್ದಾರೆ. ಐಟಿ ಎಂಜಿನೀಯರ್ ತಮ್ಮ ನೋವನ್ನು ರೆಡ್ಡಿಟ್ನಲ್ಲಿ ತೋಡಿಕೊಂಡಿದ್ದಾರೆ. ನಾನು ಬೆಂಗಳೂರಿನ ಇಂದಿರಾನಗರದಲ್ಲಿ ವಾಸಿಸುತ್ತಿದ್ದೇನೆ. ಇದು ಬೆಂಗಳೂರಿನ ಹೃದಯ ಭಾಗ ಹಾಗೂ ಅತ್ಯಂತ ಪ್ರತಿಷ್ಠಿತ ಏರಿಯಾ. ಆದರೆ ವಾರದಲ್ಲಿ ಎರಡರಿಂದ ಮೂರು ಬಾರಿ ಸುದೀರ್ಘ ಸಮಯದ ವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಒಮ್ಮೆ ವಿದ್ಯುತ್ ಕಡಿತಗೊಂಡರೆ ಲ್ಯಾಪ್ ಚಾರ್ಜ್ ಮುಗಿದು ಆಫ್ ಆದರೂ ಪವರ್ ಮಾತ್ರ ಬರುವುದಿಲ್ಲ. ಐಟಿ ಕಂಪನಿ ನನಗೆ ರಿಮೂಟ್ ಕೆಲಸ ನೀಡಿದೆ. ಮನೆಯಿಂದ ಕೆಲಸ ಮಾಡುತ್ತಿರುವ ನನಗೆ ವಿದ್ಯುತ್ ಕಡಿತ ತೀವ್ರ ಸಮಸ್ಯೆ ತರುತ್ತಿದೆ. ಮೀಟಂಗ್ ಕುಳಿತಾಗ ಲ್ಯಾಪ್ಟಾಪ್ ಸ್ವಿಚ್ ಆಫ್ ಆಗುತ್ತಿದೆ. ಕೆಲಸ ಮಾಡಲು ಕರೆಂಟ್ ಇಲ್ಲದಾಗುತ್ತಿದೆ. ನಾನು ಕಡಿಮೆ ಸಂಬಳ ಪಡೆಯುತ್ತಿರುವ ಐಟಿ ಎಂಜಿನೀಯರ್. ಇಂದಿರಾನಗರದ 1ಬಿಹೆಚ್ಕೆ ಮನೆಯಲ್ಲಿ ವಾಸವಿದ್ದೇನೆ. ನನಗೆ ಇನ್ವರ್ಟರ್ ಖರೀದಿಸುವ ಶಕ್ತಿ ಹಾಗೂ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವ ಶಕ್ತಿ ಇಲ್ಲ. ಕನಿಷ್ಠ ವಿದ್ಯುತ್ ಸರಿಯಾಗಿ ನೀಡಿದರೆ ಕೆಲಸ ಉಳಿಸಿಕೊಳ್ಳುತ್ತೇನೆ ಎಂದು ರೆಡ್ಡಿಟ್ನಲ್ಲಿ ಎಂಜಿನೀಯರ್ ಪೋಸ್ಟ್ ಮಾಡಿದ್ದಾರೆ.
ಹಲವು ಮೀಟಿಂಗ್ ಮಿಸ್
ಸಣ್ಣ ಐಟಿ ಕಂಪನಿ ಇದಾಗಿದೆ. ನೇರವಾಗಿ ನಾನು ಸ್ವೀಡನ್ ಮೂಲದ ಸಿಐ, ಸಿಟಿಒಗೆ ವರದಿ ಒಪ್ಪಿಸಬೇಕಿದೆ. ನನಗೆ ಮನೆಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದರೆ. ಆದರೆ ಪ್ರತಿ ದಿನ 12.30 ರಿಂದ ಸಂಜೆ 6.30 ವರೆಗೆ ಮೀಟಿಂಗ್ ಇರುತ್ತೆ. ಇದೇ ವೇಳೆ ಕರೆಂಟ್ ಇರುವುದಿಲ್ಲ. ಪರಿಣಾಮ ಕೆಲ ಮೀಟಿಂಗ್ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಬೇರೆ ದೇಶದ ಮ್ಯಾನೇಜರ್, ಬಾಸ್ಗಳಿಗೆ ಇಲ್ಲಿನ ವಿದ್ಯುತ್ ಸಮಸ್ಯೆ, ನಮ್ಮ ಸಮಸ್ಯೆ ಅರ್ಥವಾಗುವುದಿಲ್ಲ. ಇದರಿಂದ ನನ್ನ ಮೇಲೆ ಸಿಟ್ಟಾಗಿದ್ದಾರೆ. ಇದೀಗ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದೇನೆ ಎಂದು ಟೆಕ್ಕಿ ಅಳಲು ತೋಡಿಕೊಂಡಿದ್ದಾರೆ.
ರೆಡ್ಡಿಟ್ ಪೋಸ್ಟ್ಗೆ ಭರ್ಜರಿ ಪ್ರತಿಕ್ರಿಯೆ
ಬೆಂಗಳೂರು ಟೆಕ್ಕಿಯ ಸಮಸ್ಯೆ ಕುರಿತ ಪೋಸ್ಟ್ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಉಚಿತ ಗ್ಯಾರೆಂಟಿಯಿಂದ ಪವರ್ ಕಟ್, ಸಹಿಸಿಕೊಳ್ಳಬೇಕು. ತಿಂಗಳಲ್ಲಿ ಒಂದು ರೂಪಾಯಿ ಪಾವತಿಸಲು ಇಲ್ಲ. ಹೀಗಾಗಿ ವಿದ್ಯುತ್ ಕಡಿತ ಸಹಿಸಿಕೊಳ್ಳಬೇಕು ಎಂದು ಕಮೆಂಟ್ ಮಾಡಿದ್ದರೆ. ಇದೇ ವೇಳೆ ಗ್ಯಾರೆಂಟಿ ವಿದ್ಯುತ್ ಬೇಡ, ದಿನವಿಡಿ ವಿದ್ಯುತ್ ಕೊಡಿ ಸಾಕು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ಮೂಲಭೂತ ಸೌಕರ್ಯ, ರಸ್ತೆ, ಟ್ರಾಫಿಕ್ ಜಾಮ್ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಪ್ರತಿಕ್ರಿಯಿಸಿದ್ದಾರೆ.