ದುಬಾರಿ ಶಾಲೆ ಬೇಡ, ಅಂಗನವಾಡಿ ಸಾಕು: ಮಾದರಿಯಾದ ಜಿಲ್ಲಾಧಿಕಾರಿ!

ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರ ನಡುವೆ ಇಲೊಬ್ಬರು IAS ಅಧಿಕಾರಿ ತನ್ನ ಮೂರು ವರ್ಷ ಮಗಳನ್ನು ಅಂಗನವಾಡಿಗೆ ಸೇರಿಸುವ ಮೂಲಕ ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ. ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ (DM) ಪುಲ್ಕಿತ್ ಗರ್ಗ್ ಅವರು ತಮ್ಮ ಮಗಳು ಶಿಯಾನನ್ನು ಅಂಗನವಾಡಿಗೆ ಸೇರಿಸುವ ಮೂಲಕ ದುಬಾರಿ ಶಿಕ್ಷಣದತ್ತ ಮುಖ ಮಾಡದೆ ಸರಳತೆ ಮೆರೆದು ಜನರ ಮೆಚ್ಚುಗೆ ಪಡೆದಿದ್ದಾರೆ.

ಭಾರತದಲ್ಲಿ ಅತ್ಯಂತ ಗೌರವಾನ್ವಿತ ಹಾಗೂ ಶಕ್ತಿಶಾಲಿ ನಾಗರಿಕ ಸೇವೆಯಲ್ಲಿರುವ ಪುಲ್ಕಿತ್ ಗರ್ಗ್ ಅವರಿಗೆ ತನ್ನ ಮಗಳನ್ನು ದುಬಾರಿ ಖಾಸಗಿ ಶಾಲೆಗಳಲ್ಲಿ ಓದಿಸುವುದು ಕಷ್ಟವೇನಲ್ಲ, ಆದರೂ ಕೂಡ ತನ್ನ ಸ್ಥಳೀಯ ಅಂಗನವಾಡಿಗೆ ಕೇಂದ್ರಕ್ಕೆ ಸೇರಿಸಿದ್ದಾರೆ. ಈ ನಿರ್ಧಾರವು ಅವರು ಸರಕಾರಿ ವ್ಯವಸ್ಥೆಯ ಮೇಲೆ ಇಟ್ಟಿರುವ ನಂಬಿಕೆಯ ಸಂಕೇತ ಎಂದು ಅಂಗನವಾಡಿ ಕಾರ್ಯಕರ್ತೆ ಸಪ್ನಾ ಸೋನಿ ಮಾಧ್ಯಮದ ಮುಂದೆ ತಿಳಿಸಿದ್ದಾರೆ.

ಪುಲ್ಕಿತ್ ಗರ್ಗ್ ಯಾರು?
ಪುಲ್ಕಿತ್ ಗರ್ಗ್ ಮೂಲತಃ ಹರಿಯಾಣದವರು. ಅವರು ಉತ್ತರ ಪ್ರದೇಶ ಕೇಡರ್ನ 2016 ಬ್ಯಾಚ್ನ ಐಎಎಸ್ ಅಧಿಕಾರಿ. ಚಿತ್ರಕೂಟದ ಜಿಲ್ಲಾಧಿಕಾರಿಯಾಗುವ ಮೊದಲು, ಪುಲ್ಕಿತ್ ಗರ್ಗ್ ಅವರನ್ನು ಝಾನ್ಸಿ ನಗರ ಪಾಲಿಕೆ ಆಯುಕ್ತರಾಗಿ ಮತ್ತು ಬನಾರಸ್ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿ ನೇಮಿಸಲಾಯಿತು. ಪುಲ್ಕಿತ್ ಗರ್ಗ್ ಅವರ ತಂದೆ ಪ್ರದೀಪ್ ಗರ್ಗ್ ಹರಿಯಾಣ ಗ್ರಾಮೀಣ ಬ್ಯಾಂಕಿನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಹುದ್ದೆಯನ್ನು ಹೊಂದಿದ್ದರೂ, ಸರ್ಕಾರಿ ಶಿಕ್ಷಣ ಕೇಂದ್ರಗಳಲ್ಲಿ ನಡೆಯುತ್ತಿರುವ ಗುಣಮಟ್ಟದ ಸುಧಾರಣೆಗಳ ಬಗ್ಗೆ ಪುಲ್ಕಿತ್ ಗರ್ಗ್ ವಿಶ್ವಾಸ ಹೊಂದಿದ್ದು,ಒಂದು ವಿಶಿಷ್ಟ ಉಪಕ್ರಮದಲ್ಲಿ, ಅವರು ತಮ್ಮ ಮಗಳು ಶಿಯಾಳನ್ನು ತನ್ನ ಪ್ರಧಾನ ಕಚೇರಿಯ ಧನುಷ್ ಚೌಕದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಸೇರಿಸಿದ್ದಾರೆ.ಈ ಮೂಲಕ ದುಬಾರಿ ಶಿಕ್ಷಣದತ್ತ ಮುಖ ಮಾಡದೆ ಸರಳತೆ ಮೆರೆದಿದ್ದಾರೆ.