ಎನ್ಎಚ್66 ರಿಪೇರಿ: ಆಗಸ್ಟ್ 13ರವರೆಗೆ ಸುರತ್ಕಲ್–ನಂತೂರು ಮಾರ್ಗದಲ್ಲಿ ಸಂಚಾರ ಬದಲಾವಣೆ

ಮಂಗಳೂರು : ಸುರತ್ಕಲ್ – ನಂತೂರು ನಡುವೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆಗಸ್ಟ್ 13ರ ವರೆಗೆ ಕೈಗೆತ್ತಿಕೊಳ್ಳಲಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಹೆದ್ದಾರಿ ರಿಪೇರಿ ಸಂಬಂಧ ಗುಂಡಿಗಳನ್ನು ಮುಚ್ಚುವುದು, ತೇಪೆ ಕಾರ್ಯ, ಚರಂಡಿ ಸ್ವಚ್ಛಗೊಳಿಸುವುದು ಮುಂತಾದ ಕೆಲಸ ನಡೆಯಲಿದೆ. ಈ ರಿಪೇರಿ ಕೆಲಸವು ವಾಹನಗಳ ದಟ್ಟಣೆ ಇಲ್ಲದ ಸಮಯ( ಪೀಕ್ ಅವರ್ಸ್ ಹೊರತುಪಡಿಸಿ) ಪ್ರತಿದಿನ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಹಾಗೂ ರಾತ್ರಿ ವೇಳೆ ನಡೆಸಲಾಗುತ್ತದೆ. ಈ ಅವಧಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಮತ್ತು ತಾತ್ಕಾಲಿಕ ಮಾರ್ಗ ಬದಲಿಸುವ ಸಾಧ್ಯತೆ ಇದೆ. ಸಂಚಾರ ಸುಗಮ ನಿರ್ವಹಣೆಗೆ ಸಹಾಯವಾಗುವಂತೆ ಸ್ಥಳದಲ್ಲಿ ಸಂಚಾರ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
ಈ ವೇಳೆ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಎದುರಾಗುವ ಸಾಧ್ಯತೆ ಇದ್ದು ವಾಹನ ಸವಾರರು ಹಾಗೂ ಸಾರ್ವಜನಿಕರು ಸಹಕರಿಸಬೇಕು. ಅಲ್ಲದೇ ಕಾಮಗಾರಿ ಸ್ಥಳದಲ್ಲಿ ಸುರಕ್ಷತಾ ಸೂಚನೆಗಳನ್ನು ಅನುಸರಿಸಿ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ಎನ್ ಎಚ್ ಐ ಎ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.